
ಈ ದಿನ ಸಂಜೆ ವೇಳೆ ಮನೆಯ ಹೊಸ್ತಿಲಲ್ಲಿ ಅಥವಾ ದೇವರ ಮನೆಯಲ್ಲಿ ತುಪ್ಪದ ದೀಪ ಹಚ್ಚುವುದರಿಂದ ದಾರಿದ್ರ್ಯ ದೂರವಾಗಿ, ಹಣಕಾಸಿನ ಒತ್ತಡದಿಂದ ಹೊರಬರಲು ಅನುಕೂಲವಾಗುತ್ತದೆ.
ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಾಗೂ ಪ್ರೀತಿ- ಪ್ರೇಮ ಹಾಗೂ ಮದುವೆಗೆ ಸಂಬಂಧಪಟ್ಟ ಸಂಗತಿಗಳನ್ನು ಮೂರನೇ ವ್ಯಕ್ತಿಗಳು ವಿಪರೀತ ಪ್ರಭಾವ ಬೀರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದೆ. ಇದೇ ವೇಳೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ.
ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ
ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸುತ್ತೀರಿ ಅಂತಾದಲ್ಲಿ ಅದರ ಬಳಕೆ ಬಗ್ಗೆ ಸರಿಯಾದ ತೀರ್ಮಾನವನ್ನು ಮಾಡುವುದು ಮುಖ್ಯ. ಸ್ನೇಹಿತರು ಅಥವಾ ಸಂಬಂಧಿಕರು ತಮಗೆ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಕೊಡಿಸುವಂತೆ ಕೇಳಲಿದ್ದಾರೆ. ಇನ್ನು ಈ ದಿನ ಬೆಳ್ಳಿ ವಸ್ತುಗಳು ಅಥವಾ ಒಡವೆಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮ್ಮಲ್ಲಿ ಕೆಲವರು ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.