
ನೀವು ಈ ಕೆಲಸದಲ್ಲಿ ಇದ್ದರೂ ಆಗುತ್ತದೆ ಅಥವಾ ಬಿಟ್ಟು ಹೋದರೂ ನಡೆಯುತ್ತದೆ ಎಂಬ ರೀತಿಯಲ್ಲಿ ಮೇಲಧಿಕಾರಿಗಳು ಮಾತನಾಡುವ ಸಾಧ್ಯತೆಗಳಿವೆ. ವೇತನ ಹೆಚ್ಚಳ ಸೇರಿದಂತೆ ಬೇರೆ ಯಾವುದಾದರೂ ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಅನುಕೂಲ ಅಥವಾ ಸಹಾಯದ ಬಗ್ಗೆ ಮೇಲಧಿಕಾರಿಗಳ ಜೊತೆಗೆ ಮಾತನಾಡಬೇಕು ಎಂದೇನಾದರೂ ಅಂದುಕೊಳ್ಳುತ್ತಾ ಇದ್ದಲ್ಲಿ ಇವತ್ತು ಒಂದು ದಿನ ಮುಂದಕ್ಕೆ ಹಾಕುವುದು ಉತ್ತಮ. ನೀವೇನಾದರೂ ಸರ್ಕಾರಿ ಉದ್ಯೋಗಿಯಾಗಿದ್ದಲ್ಲಿ ಯಾವುದೋ ಹಳೇ ಫೈಲ್ ಅಥವಾ ನೀವೇ ಮಾಡಿದಂಥ ಕೆಲಸಗಳ ಬಗ್ಗೆ ವಿಪರೀತ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದಲ್ಲಿ ಮಾನಸಿಕ ಕಿರಿಕಿರಿ ಮತ್ತೂ ಜಾಸ್ತಿಯಾಗುತ್ತದೆ. ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ವೃಂದಾವನ ದರ್ಶನವನ್ನು ಪಡೆದುಕೊಳ್ಳಿ.
ತಡೆದ ಮಳೆ ಜಡಿದು ಬಂತು ಎಂಬಂತೆ ಬಾಕಿ ಉಳಿದಿದ್ದ ಹಲವು ಕೆಲಸಗಳು ಈ ದಿನ ಚಾಲನೆ ಪಡೆದುಕೊಳ್ಳುತ್ತವೆ. ಕೆಲವು ಸಹಾಯಕ್ಕಾಗಿ ಅವರಿವರನ್ನು ಕೇಳಬೇಕೇನೋ ಎಂದೇನಾದರೂ ಆಲೋಚಿಸುತ್ತಾ ಇದ್ದಲ್ಲಿ ಆ ಸಹಾಯದ ಅಗತ್ಯವೇ ಇಲ್ಲದಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಊಟ- ತಿಂಡಿ, ನೀರು ಸೇವನೆ ಇಂಥವುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅದರಲ್ಲೂ ಯಾವುದಾದರೂ ಕೆಲಸದ ನಿಮಿತ್ತ ದೂರದ ಸ್ಥಳಗಳಿಗೆ ತೆರಳುತ್ತೀರಿ ಎಂದಾದಲ್ಲಿ ಸ್ವಚ್ಛತೆ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ. ಟಿಕೆಟ್ ಬುಕ್ ಮಾಡುವುದು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಇಂಥದ್ದು ಬೇರೆಯವರ ಜವಾಬ್ದಾರಿಯನ್ನು ನೀವು ಮಾಡಿಕೊಡುವುದಾಗಿ ವಹಿಸಿಕೊಳ್ಳುವುದಕ್ಕೆ ಹೋಗಬೇಡಿ. ಕೃಷಿಕರಾಗಿದ್ದಲ್ಲಿ ಜಮೀನಿನಲ್ಲಿ ಕಳೆ ತೆಗೆಸುವುದು, ತಂತಿ- ಬೇಲಿ ಹಾಕಿಸುವುದು ಇಂಥ ಕೆಲಸಗಳನ್ನು ಮಾಡಿಸುವಂಥ ಯೋಗ ಇದೆ ಮತ್ತು ಇಂಥ ಕೆಲಸಗಳಿಗೆ ಸ್ವಲ್ಪವಾದರೂ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಈ ದಿನ ಏಕಾಂಗಿತನ ಬಹುವಾಗಿ ಕಾಡಲಿದೆ. ನಿಮ್ಮದೇ ಮಾತಿಂದ ಹಲವು ಸಮಸ್ಯೆಯಾಗಿದೆ ಎಂಬುದು ಗಮನಕ್ಕೆ ಬರಲಿದೆ. ಇನ್ನು ಮುಂದೆ ಆಲೋಚನೆಯ ನಂತರವೇ ಮಾತನಾಡಬೇಕು ಎಂಬ ಭಾವನೆಯು ಬಹುವಾಗಿ ನಿಮ್ಮನ್ನು ಆವರಿಸಲಿದೆ. ಜೊತೆಗೆ ಕೆಲಸ ಮಾಡುವವರು ಈ ದಿನ ನಿಮ್ಮಲ್ಲಿನ ಕೆಲವು ದೌರ್ಬಲ್ಯ ಹಾಗೂ ಆಲಕ್ಷ್ಯ ಸ್ವಭಾವವನ್ನು ಹೇಳಲಿದ್ದಾರೆ ಅಥವಾ ಸೂಚ್ಯವಾಗಿ ನಿಮ್ಮೆದುರು ಪ್ರಸ್ತಾವ ಮಾಡಲಿದ್ದಾರೆ. ಈ ಕಾರಣಕ್ಕೆ ಸಿಟ್ಟು ಮಾಡಿಕೊಳ್ಳುವ ಬದಲಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಕ್ಷೇಮ. ಒಂದು ವೇಳೆ ನೀವೇನಾದರೂ ಉದ್ಯೋಗ ಬದಲಾವಣೆ ಮಾಡಬೇಕು ಎಂದೇನಾದರೂ ಪ್ರಯತ್ನ ಮಾಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚಿದೆ. ಆದರೆ ಉದ್ಯೋಗ ಮಾಡುವ ಸ್ಥಳದಲ್ಲಿನ ಕೆಲಸ ಮಾಡುವ ಅವಧಿ, ರಜಾ ನಿಯಮ ಹಾಗೂ ಇತರ ಸವಲತ್ತುಗಳ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳಿ. ಒಂದು ವೇಳೆ ನಿಮಗೆ ನೀವೇ ಏನೋ ಅಂದುಕೊಂಡು, ಈಗ ವಿಚಾರಿಸದೆ ಸುಮ್ಮನಾದಲ್ಲಿ ನಂತರ ಪರಿತಪಿಸಬೇಕಾಗುತ್ತದೆ.
ಮನೆಯಲ್ಲಿ ಮಕ್ಕಳು ಇದ್ದಲ್ಲಿ ಈ ದಿನ ಅವರ ಆರೋಗ್ಯ, ಓಡಾಟ ಹಾಗೂ ಆಹಾರ ಪಥ್ಯ ಇಂಥವುಗಳ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿದರೆ ಒಳ್ಳೆಯದು. ಇನ್ನು ಆರೋಗ್ಯದಲ್ಲಿ ಏನಾದರೂ ಏರುಪೇರಾದಲ್ಲಿ ವೈದ್ಯರ ಬಳಿ ತೆರಳಿ, ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಅದರ ಬದಲಿಗೆ ಈ ಹಿಂದೆ ಬರೆದುಕೊಟ್ಟಿದ್ದ ಔಷಧವನ್ನೋ ಅಥವಾ ಈಗಾಗಲೇ ಮನೆಯಲ್ಲಿ ಇದೆ ಎಂಬ ಕಾರಣಕ್ಕೆ ಅದೇ ಔಷಧವನ್ನು ಏನಾದರೂ ನೀಡಿದಲ್ಲಿ ಆ ನಂತರ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ. ನಿಮ್ಮಲ್ಲಿ ಯಾರು ಫೈನಾನ್ಸ್ ವ್ಯವಹಾರಗಳನ್ನು ಮಾಡುತ್ತಿದ್ದೀರಿ, ಅಂಥವರು ಬರಬೇಕಾದ ಹಣವನ್ನು ವಸೂಲಿ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಇನ್ನು ಹಣವನ್ನು ವಾಪಸ್ ವಸೂಲಿ ಮಾಡುವುದಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಸಹ ಉದ್ಭವಿಸಬಹುದು. ಕೊನೆ ಕ್ಷಣದಲ್ಲಿ ಎಂಬಂತೆ ಪ್ರಯಾಣಕ್ಕೆ ತೆರಳಬೇಕು ಎಂದು ದಿಢೀರನೆ ಹೊರಡುವ ಕೆಲಸವನ್ನು ಯಾವ ಕಾರಣಕ್ಕೂ ಮಾಡಬೇಡಿ.
ನಿಮ್ಮ ಕೆಲಸ ಆದರೆ ಆಯಿತು, ನಿಮಗೆ ಆದಾಯ ಬಂದರೆ ಆಯಿತು ಹೀಗೆ ಆಲೋಚಿಸುವ ಮನಸ್ಥಿತಿ ಈ ದಿನ ಇರುತ್ತದೆ. ಇದೇ ಕಾರಣಕ್ಕೆ ಕೆಲವು ಸ್ನೇಹಿತರು ನಿಮ್ಮಿಂದ ದೂರವಾಗುವ ಸಾಧ್ಯತೆಗಳು ಕೂಡ ಇದೆ. ಇನ್ನು ನಿಮ್ಮಲ್ಲಿ ಯಾರು ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತೀರಿ, ಅಂಥವರಿಗೆ ಅಹಂಕಾರಿ ಎಂಬ ಹಣೆಪಟ್ಟಿ ಬೀಳುವ ಹಾಗೂ ಕೆಲವು ಕೆಲಸಗಳು ಕೈ ತಪ್ಪಿ ಹೋಗುವ ಸಾಧ್ಯತೆಗಳಿವೆ. ಮನೆಯಲ್ಲಿ ಇರುವಂಥ ಕೆಲವು ಪಾತ್ರೆಗಳು, ಫರ್ನೀಚರ್ ಗಳು ಹಾಗೂ ಪುಸ್ತಕಗಳನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆ ಮೂಡಲಿದೆ. ಇದಕ್ಕೆ ಕುಟುಂಬದಲ್ಲಿ ಎಲ್ಲರ ಸಮ್ಮತಿ ಇಲ್ಲದಿದ್ದರೂ ನೀವಂತೂ ಮಾರಾಟ ಮಾಡಿಯೇ ಮಾಡಬೇಕು ಎಂಬ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮ ಕಣ್ಣೆದುರು ನಡೆಯುವಂಥ ಕೆಲವು ಘಟನೆಗಳಿಗೆ ನೀವು ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಇಂಥ ನಡವಳಿಕೆಯಿಂದ ಭಾರೀ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗಲಿದೆ.
ಸಂಗೀತಗಾರರು, ನೃತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು, ನಾಟಕ ಶಾಲೆಯಲ್ಲಿ ಮೇಷ್ಟ್ರಾಗಿ ಇರುವಂಥವರಿಗೆ ಜನಪ್ರಿಯತೆ ಹಾಗೂ ಸ್ಥಾನಮಾನ ಹೆಚ್ಚಾಗುವ ಅವಕಾಶಗಳು ಈ ದಿನ ಇವೆ. ಇನ್ನು ಯಾರು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೋ ಅಥವಾ ಸ್ಥಳಕ್ಕೋ ವರ್ಗಾವಣೆ ಬೇಕು ಎಂದಿರುತ್ತದೋ ಅಂಥವರಿಗೆ ಅದು ಸಾಧ್ಯವಾಗಲಿದೆ. ಕಾಳುಗಳ ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಅದರಲ್ಲೂ ಯಾರಿಗೆ ಅವುಗಳಿಗೆ ಸಂಬಂಧಿಸಿದ ಅಲರ್ಜಿ ಇರುತ್ತದೋ ಅಂಥವರು ಮುಂಜಾಗ್ರತೆ ವಹಿಸಿ. ದೂರದ ಊರುಗಳಿಂದ ಅಥವಾ ದೇಶಗಳಿಂದ ಶುಭ ಸುದ್ದಿಯ ನಿರೀಕ್ಷೆಯಲ್ಲಿ ಇರುವವರಿಗೆ ಈ ದಿನ ಬರುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಇನ್ನು ನಿಮ್ಮಲ್ಲಿ ಕೆಲವರು ಮೊಮ್ಮಕ್ಕಳಿಗಾಗಿ ಕೆಲವು ವಸ್ತುಗಳನ್ನು ಖರೀದಿಸಬಹುದು. ಅದರಲ್ಲಿ ಬೆಳ್ಳಿ ತಟ್ಟೆ- ಲೋಟ ಇಂಥವುಗಳನ್ನು ಖರೀದಿ ಮಾಡುವ ಯೋಗ ಸಹ ಇದೆ.
ಈ ದಿನ ಬಹಳ ಚುರುಕಾಗಿ ಆಲೋಚನೆ, ಅನುಷ್ಠಾನ ಮಾಡಲಿದ್ದೀರಿ. ಇತರರು ನಿಮಗೆ ತೊಂದರೆ ಕೊಟ್ಟೆ ಅಂತಲೋ ಅಥವಾ ನಿಮಗೆ ಆತಂಕ ಮಾಡುವಂತೆ ಮಾಡಿದೆ ಎಂದೇನಾದರೂ ಅಂದುಕೊಂಡಲ್ಲಿ ಅಂಥವುಗಳಿಂದ ಸುಲಭವಾಗಿ ಹೊರಗೆ ಬರಲಿದ್ದೀರಿ. ದೀರ್ಘ ಕಾಲದಿಂದ ಮನೆಗೆ ತರಬೇಕು ಎಂದುಕೊಳ್ಳುತ್ತಿದ್ದ ಕೆಲವು ವಸ್ತುಗಳನ್ನು ಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ನೇಯ್ಗೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದೀರಿ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಹೊಸದಾಗಿ ಆರ್ಡರ್ ಬರುವ ಯೋಗ ಸಹ ಇದೆ. ಈಗಿರುವ ಮನೆಯನ್ನು ಬದಲಾವಣೆ ಮಾಡಬೇಕು ಎಂದೇನಾದರೂ ಅಂದರೆ ಬಾಡಿಗೆ ಮನೆಯಲ್ಲಿದ್ದು, ಅಲ್ಲಿಂದ ಬೇರೆ ಕಡೆ ಹೋಗಬೇಕು ಎಂದುಕೊಳ್ಳುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ನಿಮ್ಮಲ್ಲಿ ಕೆಲವರ ಮನೆಯಲ್ಲಿ ಮದುವೆ- ಉಪನಯನ ಸೇರಿದಂತೆ ಇತರ ಶುಭ ಕಾರ್ಯಗಳಿಗೆ ದಿನ ನಿಗದಿ ಆಗುವ ಯೋಗವಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ.
ಔಷಧ- ಮಾತ್ರೆಗಳು ಮಾರಾಟಗಾರರು, ಅದರಲ್ಲೂ ಇವುಗಳ ವಿತರಕರಾಗಿ ಇರುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆಗಳಿವೆ. ಇನ್ನು ಈಗಾಗಲೇ ನಿಮ್ಮಿಂದ ಖರೀದಿ ಮಾಡಿದ್ದಾರೆ, ಆದರೆ ಅದರ ಬಾಕಿಯನ್ನು ಉಳಿಸಿಕೊಂಡಿದ್ದಾರೆ ಅಂತಾದಲ್ಲಿ ಅದನ್ನು ವಸೂಲಿ ಮಾಡುವಂಥ ಅವಕಾಶಗಳು ಹೆಚ್ಚಿವೆ. ಹೊಸದಾಗಿ ಹೋಟೆಲ್, ಚಾಟ್ಸ್, ಉತ್ತರ ಭಾರತೀಯ ತಿನಿಸು, ಜ್ಯೂಸ್ ಇಂಥವುಗಳು ಮಾರಾಟ ಮಾಡುವುದಕ್ಕೆ ಅಂತ ಮಳಿಗೆಗೆ ಸೂಕ್ತ ಸ್ಥಳದ ಹುಡುಕಾಟದಲ್ಲಿ ಇದ್ದೀರಿ ಅಂತಾದಲ್ಲಿ ಮನಸ್ಸಿಗೆ ಒಪ್ಪುವಂಥ ಹಾಗೂ ನಿಮ್ಮ ಬಜೆಟ್ ಒಳಗೆ ಬರುವಂಥ ಸ್ಥಳವೊಂದು ಆಖೈರು ಆಗಬಹುದು. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಏಕಾಗ್ರತೆಯನ್ನು ಸಾಧಿಸುವಲ್ಲಿ ಸಾಫಲ್ಯವನ್ನು ಕಾಣುತ್ತೀರಿ. ದಿನಗೂಲಿ ಲೆಕ್ಕದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
ಕೆಲವು ಬೆಳವಣಿಗೆಗಳಿಂದ ಸಂಸಾರದಲ್ಲಿ ನೆಮ್ಮದಿ ನೆಲೆಸಲಿದ್ದು, ಸಂತೋಷವಾಗಿ ಸಮಯ ಕಳೆಯಲಿದ್ದೀರಿ. ಉದ್ಯೋಗವನ್ನು ಹೊರತುಪಡಿಸಿದಂತೆ ಪಾರ್ಟ್ ಟೈಮ್ ನಲ್ಲಿ ಬೇರೆ ಕೆಲಸವನ್ನು ಸಹ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದರಿಂದ ಆತ್ಮವಿಶ್ವಾಸದಲ್ಲಿ ಹೆಚ್ಚಳ ಆಗಲಿದೆ. ನಿಮ್ಮ ಜೊತೆಯಲ್ಲಿ ಶಾಲೆ- ಕಾಲೇಜು ವ್ಯಾಸಂಗ ಮಾಡಿದಂಥವರಿಗೆ ನಿಮ್ಮ ಸಹಾಯದ ಅಗತ್ಯ ಕಂಡುಬರಲಿದೆ. ಒಂದು ವೇಳೆ ಸದ್ಯಕ್ಕೆ ನಿಮ್ಮ ಜೊತೆಗೆ ಸಂಪರ್ಕದಲ್ಲಿಯೇ ಇಲ್ಲದಿದ್ದರೂ ಹೇಗಾದರೂ ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಹುಡುಕಿಕೊಂಡು, ಕರೆ ಮಾಡಲಿದ್ದಾರೆ. ಈ ಕೆಲಸದಿಂದ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಹಾಗೂ ಆದಾಯ ಎರಡೂ ಜಾಸ್ತಿ ಆಗಲಿದೆ. ಮನೆಯ ಮಟ್ಟಿಗೆ ಮಾಡೋಣ ಎಂದುಕೊಂಡ ಕಾರ್ಯಕ್ರಮವೊಂದಕ್ಕೆ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಖರ್ಚಾಗಲಿದೆ.
ಲೇಖನ- ಎನ್.ಕೆ.ಸ್ವಾತಿ