
2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಕಾಲಚಕ್ರ ಅಂದರೆ, ಮೇಷದಿಂದ ಲೆಕ್ಕ ಹಾಕುವಾಗ ಮೀನ ರಾಶಿಯು ವ್ಯಯ ಸ್ಥಾನವಾಗುತ್ತದೆ. ಇದು ಒಟ್ಟಾರೆಯಾಗಿ ಜಗತ್ತಿನ ಮೇಲೆ ಬೀರುವ ಪರಿಣಾಮದ ಸೂಚಕವಾಗಿದೆ. ಅದರಲ್ಲೂ ಮಾರ್ಚ್ ಇಪ್ಪತ್ತೊಂಬತ್ತರಿಂದ ಮೇ ಹದಿನೆಂಟನೇ ತಾರೀಕಿನ ತನಕ, ಅಂದರೆ ರಾಹು ಸಹ ಮೀನ ರಾಶಿಯಲ್ಲೇ ಇರುವಾಗ ಪರಿಣಾಮ- ಪ್ರಭಾವ ತೀಕ್ಷ್ಣವಾಗಿರುತ್ತದೆ. ನಷ್ಟ ಅಥವಾ ವ್ಯಯಸ್ಥಾನದಲ್ಲಿ ಶನಿ- ರಾಹು ಎರಡೂ ಗ್ರಹಗಳು ಒಟ್ಟಾಗಿ ಇರುವುದರಿಂದ ಇದು ನಷ್ಟದ ಸಮಯ, ವೆಚ್ಚದ ಸಮಯ, ಖರ್ಚಿನ ಸಮಯ. ಉದ್ವೇಗ- ಗಾಬರಿಗಳಿಂದ ಜನ ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ. ಈ ಉದ್ವೇಗ- ಗಾಬರಿ ಸರ್ಕಾರಗಳಿಗೂ ಅನ್ವಯವಾಗುತ್ತದೆ. ಜೊತೆಗೆ ದೇವ ಕೋಪ- ಧರ್ಮಕ್ಕೆ ತಪ್ಪಿ ಅಥವಾ ವಿರುದ್ಧ ನಡೆದು, ಅದರ ಪ್ರಾಯಶ್ಚಿತ್ತ- ಪಶ್ಚಾತಾಪ ಮಾಡಿಕೊಳ್ಳುವವರ ಪ್ರಮಾಣವೂ ಹೆಚ್ಚಾಗುತ್ತದೆ. ಮುಖ್ಯವಾಗಿ ಮಾನಸಿಕ ಕ್ಷೋಭೆ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ.
ಇನ್ನು ಹನ್ನೆರಡು ರಾಶಿಗಳ ಮೇಲೂ ಶನಿ ಗ್ರಹದ ರಾಶಿ ಬದಲಾವಣೆ ಫಲಗಳಿರುತ್ತವೆ. ಅದರಲ್ಲಿ ಮೊದಲನೆಯದಾಗಿ ಮೇಷ ರಾಶಿಯ ಮೇಲೆ ಏನು ಪ್ರಭಾವ ಎಂಬ ವಿವರ ಇಲ್ಲಿದೆ.
ಮೇಷ ರಾಶಿಯವರಿಗೆ ಹನ್ನೆರಡನೇ ಮನೆ, ಅಂದರೆ ವ್ಯಯ ಸ್ಥಾನದಲ್ಲಿ ಶನಿ ಸಂಚಾರ ಶುರುವಾಗುತ್ತದೆ. ಇದು ಏಳರಾಟ ಶನಿಯ ಆರಂಭದ ಹಂತವಾಗಿರುತ್ತದೆ. ಅನುಕೂಲ ಹಾಗೂ ನಂಬಿಕೆ ಇರುವಂಥವರು ಶನಿ ಗ್ರಹದ ಶಾಂತಿ ಮಾಡಿಸಿಕೊಳ್ಳುವುದು ಕ್ಷೇಮ. ಖರ್ಚಿನ ಮೇಲೆ ನಿಗಾ ಇರಲಿ. ದೇವತಾ ಕಾರ್ಯಗಳನ್ನು ಮಾಡುವುದು ಒಳ್ಳೆಯದೇನೋ ನಿಜ, ಆದರೆ ಸರಿಯಾದ ಗುರುಗಳನ್ನು ಹುಡುಕಿಕೊಳ್ಳಿ. ಏಕೆಂದರೆ ಅದರಲ್ಲಿಯೂ ನಿಮಗೆ ವಿಪರೀತ ಖರ್ಚಾಗುವ ಹಾಗೂ ಸರಿಯಾದ ಮಾರ್ಗದರ್ಶನ ಸಿಗದಂತೆ ಆಗುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಇರುವ ಕೆಲಸ ಬಿಟ್ಟು, ಸಾಲ ಮಾಡಿ ಹೊಸ ವ್ಯಾಪಾರ- ವ್ಯವಹಾರ ಮಾಡುವುದಕ್ಕೆ ಹೋಗಬೇಡಿ. ಇನ್ನು ಈಗ ಮಾಡುತ್ತಿರುವುದೇ ವ್ಯಾಪಾರ- ವ್ಯವಹಾರ ಅಂತಾದಲ್ಲಿ ದೊಡ್ಡ ಮಟ್ಟದ- ರಿಸ್ಕ್ ಇರುವಂಥ ಹೂಡಿಕೆಗಳು ಬೇಡ.
ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಇಂಥ ವ್ಯವಹಾರದಲ್ಲಿ ಇರುವವರು ಒಟ್ಟಿಗೆ ದೊಡ್ಡ ಅಮೌಂಟ್ ಗಳಿಸಿಬಿಡ್ತೀನಿ ಅಂತ ಹೊರಡಬೇಡಿ. ಸಣ್ಣ ನಿಯಮಗಳ ಉಲ್ಲಂಘನೆಯಾದರೂ ಸರಿ, ನಿಯಮಗಳನ್ನು ಮೀರಿದ ಕೆಲಸ ಮಾಡಿಸಿಕೊಳ್ಳಲು ಲಂಚ- ರುಷುವತ್ತು ಅಂತೇನಾದರೂ ಕೊಟ್ಟು, ಗೊತ್ತಿದ್ದೂ ತಪ್ಪುಗಳನ್ನು ಮಾಡಿದಿರೋ ಅಂಥ ಕೆಲಸಗಳಿಂದ ಭಾರೀ ನಷ್ಟ- ಅವಮಾನಗಳನ್ನು ಎದುರಿಸುತ್ತೀರಿ. ನೀವೇ ಶತ್ರುಗಳನ್ನು ಹುಟ್ಟು ಹಾಕಿಕೊಳ್ಳುತ್ತೀರಿ. ಕೋರ್ಟ್-ಕಚೇರಿ, ಪೊಲೀಸ್ ಠಾಣೆ ಅಲೆದಾಟ ಮಾಡಿಕೊಂಡು, ವಿನಾಕಾರಣ ಹಣವನ್ನು ಕಳೆದುಕೊಳ್ಳುವಂತೆ ಆಗುತ್ತದೆ. ಸ್ವಂತ ಹಣವಿದ್ದು, ಸ್ವಲ್ಪ ಪ್ರಮಾಣದ ಸಾಲ ಮಾತ್ರ ಆಗುತ್ತದೆ ಅಂತಾದಲ್ಲಿ ಮಾತ್ರ ಮನೆಯನ್ನು ಕಟ್ಟಿ ಅಥವಾ ಖರೀದಿಸಿ. ಪೂರ್ತಿಯಾಗಿ ಸಾಲ ಮಾಡಿದಲ್ಲಿ ದೊಡ್ಡ ಸಮಸ್ಯೆಗೆ ಹಾಗೂ ಅದರ ಮೂಲಕ ಅನಾರೋಗ್ಯಕ್ಕೆ ಗುರಿ ಆಗುತ್ತೀರಿ. ವಿವೇಕ ಹಾಗೂ ವಿವೇಚನೆ ಸರಿಯಾಗಿ ಬಳಸಿ, ಹುಂಬತನ ಯಾವುದೇ ಕಾರಣಕ್ಕೂ ಬೇಡ.
ಶನಿ ಗ್ರಹದ ಶಾಂತಿ- ಹೋಮ ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಇದಕ್ಕೆ ಹೆಚ್ಚಿನ ಖರ್ಚಾಗುತ್ತದೆ, ತಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಅನ್ನುವವರು ಶನೈಶ್ಚರ ದೇವಸ್ಥಾನದಲ್ಲಿ ಶನಿ ದರ್ಶನ, ಅಭಿಷೇಕ, ದೀಪ ಹಚ್ಚುವುದನ್ನು ಮಾಡಬಹುದು ಅಥವಾ ನೀಲಿ ಬಟ್ಟೆಯಲ್ಲಿ ಮೂರು-ನಾಲ್ಕು ಹಿಡಿ ಕರಿ ಎಳ್ಳನ್ನು ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು ಹಾಗೂ ದಕ್ಷಿಣೆ ಸಹಿತ ದಾನ ಮಾಡಬಹುದು. ಇನ್ನು ಯಾರಿಗೆ ಸಾಧ್ಯವೋ ಅವರು ದಶರಥ ಕೃತ ಶನಿ ಸ್ತೋತ್ರದ ಶ್ರವಣ (ಕೇಳಿಸಿಕೊಳ್ಳುವುದು) ಅಥವಾ ಪಾರಾಯಣ ಮಾಡಬಹುದು.
– ಸ್ವಾತಿ ಎನ್.ಕೆ.