ಪಿತೃಪಕ್ಷದಲ್ಲಿ ಎರಡು ಗ್ರಹ ಸಂಚಾರದ ಮಹಾ ಯೋಗಗಳು ತರಲಿವೆ ಈ ರಾಶಿಗಳಿಗೆ ಅಮೋಘವಾದ ಅದೃಷ್ಟ
ಇದೇ ಸೆಪ್ಟೆಂಬರ್ ಹದಿನೈದರಿಂದ ಬುಧ ಗ್ರಹವು ತನ್ನ ಉಚ್ಚ ಸ್ಥಾನವಾದ ಕನ್ಯಾ ರಾಶಿ ಪ್ರವೇಶ ಮಾಡುವುದರಿಂದ ಭದ್ರ ಯೋಗ ಸೃಷ್ಟಿ ಆಗುತ್ತದೆ. ಅದಾಗಿ ಎರಡು ದಿನಕ್ಕೆ ಬುಧ ಗ್ರಹದ ಜೊತೆಗೆ ರವಿ ಗ್ರಹವೂ ಯುತಿ ಆಗುವುದರಿಂದ ಬುಧಾದಿತ್ಯ ಯೋಗ ಸೃಷ್ಟಿ ಆಗುತ್ತದೆ. ಈ ಸಮಯದಲ್ಲಿ ಗ್ರಹ ಗೋಚಾರದ ರೀತಿಯಾಗಿ ಅತ್ಯುತ್ತಮ ಫಲಿತಾಂಶಗಳು ದೊರೆಯಲಿವೆ. ಯಾವ ರಾಶಿಯವರಿಗೆ ಅತ್ಯುತ್ತಮವಾದ ಸಮಯ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಸೆಪ್ಟೆಂಬರ್ ಹದಿನೈದನೇ ತಾರೀಕು ಬುಧ ಗ್ರಹವು ತನ್ನ ಉಚ್ಚ ಕ್ಷೇತ್ರ ಮತ್ತು ಸ್ವ ಕ್ಷೇತ್ರವಾದ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತದೆ. ಅದೇ ರಾಶಿಯಲ್ಲಿ ಅಕ್ಟೋಬರ್ ಮೂರನೇ ತಾರೀಕಿನ ತನಕ ಸಂಚರಿಸುತ್ತದೆ. ಹೀಗೆ ಬುಧ ಗ್ರಹದ ಸಂಚಾರದ ಸಮಯದಲ್ಲಿ ಭದ್ರ ಯೋಗದ ಸೃಷ್ಟಿಯಾಗುತ್ತದೆ. ಈ ತಾರೀಕುಗಳ ಮಧ್ಯೆ ಹುಟ್ಟುವಂಥ ಮಕ್ಕಳಿಗೆ, ಅದರಲ್ಲೂ ಮಿಥುನ, ಕನ್ಯಾ, ಧನುಸ್ಸು ಹಾಗೂ ಮೀನ ರಾಶಿಯಲ್ಲಿ ಹುಟ್ಟುವಂಥವರಿಗೆ ಪಂಚ ಮಹಾಪುರುಷ ಯೋಗಗಳಲ್ಲಿ ಒಂದು ಎನಿಸಿದಂಥ ಭದ್ರ ಯೋಗ ಬರುತ್ತದೆ. ಮೊದಲಿಗೆ ಈ ಯೋಗ ಹೇಗೆ ನಿರ್ಧಾರವಾಗುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿ. ಬುಧ, ಗುರು, ಶುಕ್ರ, ಶನಿ, ಕುಜ ಈ ಐದು ಗ್ರಹಗಳಿಂದ ಸೃಷ್ಟಿ ಆಗುವ ಯೋಗಕ್ಕೆ ಪಂಚ ಮಹಾಪುರುಷ ಯೋಗ ಎನ್ನಲಾಗುತ್ತದೆ. ಜನ್ಮ ಜಾತಕದಲ್ಲಿ ಲಗ್ನಕ್ಕೆ ಕೇಂದ್ರ ಸ್ಥಾನದಲ್ಲಿ (ಲಗ್ನದಿಂದ ಒಂದು, ನಾಲ್ಕು, ಏಳು ಮತ್ತು ಹತ್ತನೇ ಮನೆ) ಈ ಗ್ರಹಗಳ ಪೈಕಿ ಯಾವುದಾದರೂ ಇದ್ದು, ಆ ಗ್ರಹವು ಇರುವಂಥ ರಾಶಿಯು ಅವುಗಳ ಸ್ವಕ್ಷೇತ್ರವೋ ಅಥವಾ ಉಚ್ಚ ಕ್ಷೇತ್ರವೋ ಆಗಿದ್ದಲ್ಲಿ ಅದರಿಂದ ಪಂಚ ಮಹಾಪುರುಷ ಯೋಗಗಳಲ್ಲಿ ಒಂದು ಸೃಷ್ಟಿ ಆಗುತ್ತದೆ.
ಬುಧನಿಂದ ಭದ್ರ ಯೋಗ ಬುಧ ಗ್ರಹದಿಂದ ಭದ್ರಯೋಗ, ಗುರುವಿನಿಂದ ಹಂಸಯೋಗ, ಶುಕ್ರನಿಂದ ಮಾಲವ್ಯಯೋಗ, ಶನಿಯಿಂದ ಶಶಯೋಗ ಹಾಗೂ ಕುಜ ಗ್ರಹದಿಂದ ರುಚಕ ಯೋಗ ಆಗುತ್ತದೆ. ಈಗ ಬುಧ ಗ್ರಹದ ಉದಾಹರಣೆ ತೆಗೆದುಕೊಳ್ಳಿ. ಮಿಥುನ- ಕನ್ಯಾ ರಾಶಿಗಳು ಸ್ವ ಕ್ಷೇತ್ರವಾಗುತ್ತವೆ. ಇನ್ನು ಕನ್ಯಾ ರಾಶಿಯು ಅದರ ಉಚ್ಚ ಕ್ಷೇತ್ರ ಆಗುತ್ತದೆ. ಆ ಕಾರಣದಿಂದ ಕನ್ಯಾ ರಾಶಿಯಲ್ಲಿ ಬುಧ ಗ್ರಹ ಸಂಚರಿಸುವಾಗ ಮಿಥುನ, ಕನ್ಯಾ, ಧನುಸ್ಸು ಅಥವಾ ಮೀನ ಈ ಲಗ್ನದ ಪೈಕಿ ಯಾವುದರಲ್ಲಿ ಜನಿಸಿದವರಿಗೂ ಭದ್ರ ಯೋಗ ಆಗುತ್ತದೆ. ಬುಧ ಗ್ರಹದಿಂದ ಸೃಷ್ಟಿಯಾಗುವ ಈ ಯೋಗ ಇರುವವರು ಅವರಿಗೆ ಆಗಿರುವ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ. ಬುದ್ಧಿ ಬಹಳ ಚುರುಕಾಗಿರುತ್ತದೆ. ತಮ್ಮ ಬುದ್ಧಿಯನ್ನೇ ಬಂಡವಾಳ ಮಾಡಿಕೊಂಡು, ಅದರ ಮೂಲಕ ಆದಾಯವನ್ನು ಸೃಷ್ಟಿಸಿಕೊಳ್ಳುತ್ತಾರೆ. ರಾಜೀ- ಸಂಧಾನ, ಚೌಕಾಶಿ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಭವಿಷ್ಯದಲ್ಲಿ ಸೃಷ್ಟಿ ಆಗಬಹುದಾದ ಅವಕಾಶಗಳನ್ನು ಗುರುತಿಸುವುದರಲ್ಲಿ ಇವರು ಎತ್ತಿದ ಕೈ. ಹೊಸ ವಿಷಯಗಳನ್ನು, ಭಾಷೆಗಳನ್ನು ಬೇಗ ಬೇಗ ಕಲಿತುಕೊಳ್ಳುತ್ತಾರೆ. ಕನ್ಸಲ್ಟೆನ್ಸಿ ಸರ್ವೀಸ್, ಕಾನೂನು ಸೇವೆಗಳು ಇಂಥದ್ದರಲ್ಲಿ ಕಾರ್ಯ ನಿರ್ವಹಿಸುವುದು ಇವರಿಗೆ ಒಳ್ಳೆ ಆದಾಯ- ಲಾಭ, ಜನಪ್ರಿಯತೆಯನ್ನು ತಂದುಕೊಡುತ್ತದೆ.
ಯೋಗ ಫಲ ಪಡೆಯುವ ಕಾಲ ಚುರುಕುತನದಿಂದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಇವರ ಸ್ವಭಾವ ಆಗಿರುತ್ತದೆ. ತಾವು ಅಂದುಕೊಂಡ ಸಂಗತಿಗಳನ್ನು ಮಾತಿನ ಮೂಲಕವಾಗಿ ಎದುರಿಗೆ ಇರುವವರಿಗೆ ದಾಟಿಸುವುದರಲ್ಲಿ ಇವರ ಸಾಮರ್ಥ್ಯ ಅಗಾಧವಾಗಿರುತ್ತದೆ. ಇನ್ನು ಈ ಯೋಗವು ಕೆಲವರಿಗೆ ಅಗಾಧ ಸಂಪತ್ತನ್ನು, ಸೌಕರ್ಯ, ಸವಲತ್ತುಗಳನ್ನು ತಂದರೆ, ಮತ್ತೆ ಕೆಲವರಿಗೆ ಉದ್ಯೋಗ- ವೃತ್ತಿಯಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಏರಿಸುತ್ತದೆ. ಮತ್ತೆ ಕೆಲವರಿಗೆ ಪಾರ್ಟನರ್ ಷಿಪ್ ವ್ಯವಹಾರದಲ್ಲಿ ಬಹಳ ದೊಡ್ಡ ಲಾಭ ತಂದುಕೊಡುತ್ತದೆ. ಇನ್ನು ಅದೇ ರೀತಿ ಮದುವೆ ನಂತರದಲ್ಲಿ ಸಂಗಾತಿ ಮೂಲಕ ನಾನಾ ರೀತಿ ಅನುಕೂಲ- ಯಶಸ್ಸು ತಂದುಕೊಡುತ್ತದೆ. ಬುಧ ದಶೆ ನಡೆಯುವಾಗ ಈ ಯೋಗದ ಫಲವು ಪ್ರಕಾಶಿಸುತ್ತದೆ. ಯಾರಿಗೆ ಈ ಭದ್ರ ಯೋಗ ಇರುತ್ತದೆ ಅಂಥವರು ಆ ಯೋಗದ ಫಲವನ್ನು ಕಾಣುತ್ತಾರೆ, ಮತ್ತೂ ಎತ್ತರಕ್ಕೆ ಹಾಗೂ ಅನುಕೂಲಕರ ಸ್ಥಾನವನ್ನು ಪಡೆಯುತ್ತಾರೆ.
ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?
ಬುಧಾದಿತ್ಯ ಯೋಗ ಸೆಪ್ಟೆಂಬರ್ ಹದಿನೇಳನೇ ತಾರೀಕು ಕನ್ಯಾ ರಾಶಿಗೆ ರವಿ ಗ್ರಹದ ಪ್ರವೇಶ ಆಗುವುದರೊಂದಿಗೆ ಬುಧಾದಿತ್ಯ ಯೋಗ ಸೃಷ್ಟಿಯಾಗುತ್ತದೆ. ಹೇಗೆ ಸಿಂಹ ರಾಶಿಯಲ್ಲಿ ಬುಧ ಹಾಗೂ ರವಿ ಗ್ರಹ ಒಟ್ಟಿಗೆ ಇರುವಾಗ ರವಿಯು ಹೆಚ್ಚಿನ ಫಲವನ್ನು ಈ ಯೋಗದ ಮೂಲಕ ನೀಡುತ್ತಾನೋ ಅದೇ ರೀತಿಯಲ್ಲಿ ಕನ್ಯಾ ರಾಶಿಯಲ್ಲಿ ಬುಧ ಹಾಗೂ ರವಿ ಒಟ್ಟಿಗೇ ಇರುವಾಗ ಬುಧ ಗ್ರಹವು ರವಿಯೊಟ್ಟಿಗೆ ಒಳ್ಳೆ ಹಾಗೂ ಹೆಚ್ಚಿನ ಫಲವನ್ನು ನೀಡುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಸರ್ಕಾರದ ಮಟ್ಟದಲ್ಲಿ ಬಹಳ ಪ್ರಭಾವಶಾಲಿಗಳಾಗಿ ಇರುತ್ತಾರೆ. ತಮಗೆ ಆಗಬೇಕಾದ ಕೆಲಸವನ್ನು ಯಾರಿಂದ ಮಾಡಿಸಿಕೊಳ್ಳಬೇಕು ಹಾಗೂ ಹೇಗೆ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಏಕ ಕಾಲಕ್ಕೆ ಹಲವು ಕೆಲಸಗಳನ್ನು ಮಾಡುವಂಥ ಸಾಮರ್ಥ್ಯ ಇವರಿಗೆ ಇರುತ್ತದೆ. ರಾಜಕೀಯ ಕ್ಷೇತ್ರದ ಕಡೆಗೆ ಹೆಚ್ಚಿನ ಒಲವು ಇವರಿಗೆ ಇರುತ್ತದೆ. ಅದೇ ರೀತಿ ಸರ್ಕಾರದಲ್ಲಿ ನೀತಿ ರೂಪಿಸುವ, ನಿಯಮಗಳನ್ನು ರೂಪಿಸುವ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಸರ್ಕಾರದಿಂದ ಬರಬೇಕಾದ ಹಣ, ಈಗಾಗಲೇ ಕೆಲಸ ಮಾಡಿ, ಇನ್ನೂ ಕೈ ಸೇರದ ನಿಮ್ಮ ಪಾಲಿನ ಇಂಥವುಗಳಿಗೆ ಪ್ರಯತ್ನವನ್ನು ಮಾಡುವುದಕ್ಕೆ ಇದು ಸೂಕ್ತ ಕಾಲ. ವ್ಯಾಜ್ಯಗಳನ್ನು ಮಾತುಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೂ ಇದು ಬಹಳ ಒಳ್ಳೆ ಸಮಯ ಆಗಿರುತ್ತದೆ.
ಯಾವ ರಾಶಿಗೆ ಯಾವ ಗ್ರಹದಿಂದ ಶುಭ ಫಲ?
ಈ ಅವಧಿಯಲ್ಲಿ ರವಿ ಗ್ರಹದಿಂದ ಅತ್ಯುತ್ತಮ ಪಡೆಯುವ ರಾಶಿಗಳು: ಕರ್ಕಾಟಕ, ಮೇಷ, ಧನುಸ್ಸು ಹಾಗೂ ವೃಶ್ಚಿಕ
ಬುಧ ಗ್ರಹದಿಂದ ಒಳ್ಳೆ ಫಲಗಳನ್ನು ಪಡೆಯುವ ರಾಶಿಗಳು:
ಸಿಂಹ, ಮಿಥುನ, ಮೇಷ, ಕುಂಭ, ವೃಶ್ಚಿಕ, ಧನುಸ್ಸು ಹಾಗೆ ನೋಡಿದರೆ ಮೇಷ, ವೃಶ್ಚಿಕ ಹಾಗೂ ಧನುಸ್ಸು ರಾಶಿಯವರು ರವಿ ಹಾಗೂ ಬುಧ ಎರಡೂ ಗ್ರಹದಿಂದ ಅತ್ಯುತ್ತಮವಾದ ಫಲವನ್ನು ಪಡೆಯುತ್ತಾರೆ.
ಕನ್ಯಾ ರಾಶಿಯವರ ಬುದ್ಧಿ ಬಹಳ ಚುರುಕಾಗಿರುತ್ತದೆ, ಆದರೆ ಹಣ ಹೂಡಿಕೆ, ಹೊಸದಾಗಿ ವ್ಯವಹಾರ- ವ್ಯಾಪಾರ ಶುರು ಮಾಡಬೇಕು ಎಂದೇನಾದರೂ ಇದ್ದಲ್ಲಿ ಈ ಸಮಯ ಸೂಕ್ತವಾಗಿರುವುದಿಲ್ಲ. ಪ್ಲಾನಿಂಗ್ ಹಾಗೂ ಬಜೆಟಿಂಗ್ ಮಾಡಿಕೊಳ್ಳಬಹುದು. ಆದರೆ ಕಾರ್ಯಾರಂಭವನ್ನು ಮಾಡಬಾರದು.
ಇದನ್ನೂ ಓದಿ: ನವರಾತ್ರಿ ಪ್ರಾರಂಭವಾಗುವ ಮುನ್ನ ಮನೆಗೆ ಈ ವಸ್ತು ತನ್ನಿ; ಅದೃಷ್ಟವೇ ಬದಲಾಗಲಿದೆ
ಪರಿಹಾರ: ಆದರೆ ಕುಂಭ ರಾಶಿಯವರಿಗೆ ಎಂಟನೇ ಮನೆ ಹಾಗೂ ಮಕರ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ರವಿ ಗ್ರಹ ಸಂಚರಿಸುವುದರಿಂದ ಗೋಧಿಯನ್ನು ಕೆಂಪು ವಸ್ತ್ರದ ಸಹಿತವಾಗಿ ಭಾನುವಾರದ ದಿನ ದಾನ ಮಾಡಿದಲ್ಲಿ ಕ್ಷೇಮ. ಇನ್ನು ತುಲಾ ರಾಶಿಯವರಿಗೆ ಹನ್ನೆರಡನೇ ಮನೆಯಲ್ಲಿ ರವಿ ಹಾಗೂ ಬುಧ ಸಂಚಾರ ಮಾಡುವುದರಿಂದ ಗೋಧಿಯೊಂದಿಗೆ ಕೆಂಪು ವಸ್ತ್ರ ಭಾನುವಾರ, ಹೆಸರು ಕಾಳಿನೊಂದಿಗೆ ಹಸಿರು ವಸ್ತ್ರ ಬುಧವಾರದಂದು ದಾನ ಮಾಡಿದರೆ ಕ್ಷೇಮ. ಜೊತೆಗೆ ವಿಷ್ಣು ಸಹಸ್ರನಾಮದ ಪಾರಾಯಣ- ಶ್ರವಣದಿಂದ ಬುಧ ಗ್ರಹದ ನಕಾರಾತ್ಮಕ ಪರಿಣಾಮವು ಶಮನವಾಗುತ್ತದೆ.
-ಸ್ವಾತಿ ಎನ್.ಕೆ.




