ಪ್ರಪಂಚದಲ್ಲಿ ಅನೇಕ ಜನ ಅವತಾರಪುರುಷರು ಇರುತ್ತಾರೆ. ಕೆಲವರು ನಿಜವಾದ ಅವತಾರ ಪುರುಷರಾದರೆ, ಇನ್ನೂ ಕೆಲವರು ಅವತಾರ ಪುರುಷರಂತೆ ತಮ್ಮನ್ನು ತೋರಿಸಿಕೊಳ್ಳುವವರು ಇರುತ್ತಾರೆ. ಇವರಲ್ಲಿ ಯಾರು ನಿಜವಾದವರು ಎನ್ನುವುದನ್ನು ಹೊರ ನೋಟದಿಂದ ತಿಳಿಯುವುದು ಕಷ್ಟ. ಏಕಂದರೆ ಅವತಾರ ಪುರುಷರಂತೆ ನಟಿಸುವವರು ನಿಜವಾದ ರೂಪವನ್ನೇ ಅನುಕರಿಸುವುದರಿಂದ ಕೆಲವು ಅದು ಬೆಳೆಕಿಗೆ ಬರದಿದ್ದರೂ ಅನಂತರವಂತೂ ಗೊತ್ತಾಗುತ್ತದೆ.
ಇಂತಹ ವಿಚಾರವನ್ನು ಜ್ಯೋತಿಷ್ಯ ಮೂಲಕ ತಿಳಿಯಲು ಬರುತ್ತದೆಯೇ ಎಂದರೆ? ಆಗುತ್ತದೆ. ಕೆಲವು ಗ್ರಹಸ್ಥಿತಿಗಳು ಅವತಾರ ಪುರುಷರ ಸೂಚನೆಯನ್ನು ನೀಡುತ್ತದೆ. ಅಂದರೆ ಯಾವುದೋ ದಿವ್ಯಶಕ್ತಿಯನ್ನು ತಮ್ಮೊಳಗೆ ಇರಿಸಿಕೊಂಡು ಜನಿಸಿದ್ದಾರೆ ಎಂದು ತಿಳಿಯಬಹುದು. ಇನ್ನು ವಿವರವಾಗಿ ನೋಡಿದರೆ ಅವರು ಯಾವ ದೇವರ ಅವತಾರ ಎನ್ನುವುದನ್ನೂ ತಿಳಿಯಬಹುದು. ಇದಕ್ಕೆ ಖಗೋಲಶಾಸ್ತ್ರ ಹೇಳುವ ಲಕ್ಷಣವೇನು? ಇದರಿಂದ ಪ್ರತಿಯೊಬ್ಬ ಮನುಷ್ಯನೂ ತನ್ನ ಜಾತಕವನ್ನು ಕಂಡುಕೊಂಡು ತಿಳಿಯಬಹುದು. ಅದರ ವಿವರವನ್ನು ನೋಡುವುದಾದರೆ-
ಜನ್ಮ ಕುಂಡಲಿಯಲ್ಲಿ ಗುರು, ಶುಕ್ರ ಹಾಗೂ ಶನಿಗಳ ಸ್ಥಾನದ ಮೇಲೆ ಈ ಯೋಗ ನಿರ್ಣಯವಾಗುತ್ತದೆ. ಇದನ್ನು ಅಂಶಾವತಾರಯೋಗ ಎಂದು ಕರೆಯುತ್ತಾರೆ. ಜಾತಕದಲ್ಲಿ ಗುರಿ ಹಾಗೂ ಶುಕ್ರರು ಲಗ್ನದಿಂದ ಆರಂಭ ಮಾಡಿ 1, 4, 7, 10 ಕೇಂದ್ರ ಸ್ಥಾನದಲ್ಲಿ ಇದ್ದರೆ ಮತ್ತು ಶನಿಯು ಮೇಲೆ ಹೇಳಿದ ನಾಲ್ಕು ಸ್ಥಾನದಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಅಥವಾ ತನ್ನ ಉಚ್ಚ ಕ್ಷೇತ್ರವಾದ ತುಲಾ ರಾಶಿಯಲ್ಲಿ ಇರಬೇಕು. ಅಷ್ಟು ಮಾತ್ರವಲ್ಲ, ಜನಿಸುವಾಗ ಚರಲಗ್ನವಾಗಿರಬೇಕು ಅಂದರೆ ಮೇಷ, ಕರ್ಕಾಟಕ, ತುಲಾ ಹಾಗೂ ಮಕರ ಈ ಲಗ್ನವಾಗಿದ್ದರೆ ಅವರು ಯಾವುದೋ ದಿವ್ಯ ಶಕ್ತಿಯ ಅಂಶವನ್ನು ತಮ್ಮೊಳಗೆ ಇಟ್ಟುಕೊಂಡವರು ಅಥವಾ ಹುಟ್ಟಿದ ಅನಂತರ ತಮ್ಮ ತಪಸ್ಸಿನಿಂದ ದಿವ್ಯಶಕ್ತಿಯನ್ನು ತಮ್ಮೊಳಗೆ ಇರಿಸಿಕೊಳ್ಳುವವರು ಎನ್ನುವುದನ್ನು ತಿಳಿಯಬೇಕು.
ಉತ್ತಮ ಕಾರ್ಯಗಳಿಂದ ಪ್ರಸಿದ್ಧರಾಗುವರು. ಪೂರ್ವಜರ ಸುಕೃತ ಅಥವಾ ಪೂರ್ವಜನ್ಮದ ಸುಕೃತವು ಫಲಿಸಲಿದೆ. ಇವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಎಲ್ಲ ಕಡೆಗಳಿಂದ ಬರುವುದು.
ತೀರ್ಥಕ್ಷೇತ್ರ, ದೇವತಾಸ್ಥಾನದಲ್ಲಿ ಈ ಯೋಗದವರು ಇರುವರು. ಅಂತಹ ಸ್ಥಳಗಳಲ್ಲಿ ಸಂಚಾರ ಮಾಡಲು, ಹೆಚ್ಚು ಹೆಚ್ಚು ಪುಣ್ಯಸ್ಥಳಗಳಿಗೇ ಭೇಟಿಕೊಡುವುದನ್ನು ಮಾಡುವರು.
ಯಾವುದಾದರೂ ಒಳ್ಳೆಯ ಕಲೆಯಲ್ಲಿ ಆಸಕ್ತಿ ಹಾಗೂ ಅದನ್ನು ತಿಳಿದವರೂ ಪ್ರಸ್ತುತಿಪಡಿಸುವರೂ ಹಾಗೂ ಅದರಿಂದಲೇ ಖ್ಯಾತನಾಮರೂ ಆಗುತ್ತಾರೆ.
ಇವರು ಹೆಚ್ಚು ವಿರುದ್ಧ ಲಿಂಗಿಗಳಲ್ಲಿ ಆಸಕ್ತರು ಅಥವಾ ಅತಿಯಾದ ಕಾರ್ಯಗಳನ್ನು ಮಾಡಲು, ಕಾಮನೆಯೂ ಇವರಲ್ಲಿ ಇರುವುದು.
ಇವರು ಹೊಸ ಸಂಪ್ರದಾಯದ ಉದಯಕ್ಕೆ ಕಾರಣವಾಗಲೂಬಹುದು. ಇವರು ತಮ್ಮದೇ ಆದ ಒಂದು ಸಮೂಹವನ್ನು ನಿರ್ಮಾಣ ಮಾಡಿ, ಪರಿವರ್ತನೆಗೆ ನಾಂದಿಯಾಗಲೂಬಹುದು.
ತಮ್ಮನ್ನು ಗೆದ್ದವರು. ಎಂತಹ ಸಂದರ್ಭದಲ್ಲೂ ಅತಿಯಾಗಿ ವರ್ತಿಸುವುದು, ಏನನ್ನಾದರೂ ಹೇಳುವುದು ಇಂತಹವುಗಳನ್ನು ಮಾಡಲಾರರು. ಕೋಪ, ಆಸೆ, ಮೋಹ ಇವುಗಳಲ್ಲಿ ತಮ್ಮ ವಶದಲ್ಲಿ ಇಟ್ಟುಕೊಂಡಿರುತ್ತಾರೆ.
ಅಧ್ಯಾತ್ಮ ಸಾಧನೆಗೆ ಅನುಕೂಲವಾದ ಶಾಸ್ತ್ರದ ಜ್ಞಾನವನ್ನೂ ಪಡೆದು ಆತ್ಮಸಾಕ್ಷಾತ್ಕಾರಾದ ಮಾರ್ಗದಲ್ಲಿ ಇರುವರು. ಅಲೌಕಿಕ ಬದುಕನ್ನು ಇಷ್ಟಪಡಲಿದ್ದಾರೆ. ಅಲೌಕಿಕ ಸಾಹಿತ್ಯದಲ್ಲಿ ಆಸಕ್ತಿ ಹಾಗೂ ಅಧ್ಯಯನವನ್ನೂ ಮಾಡಲಿದ್ದಾರೆ.
ಇದನ್ನೂ ಓದಿ: ಸೂರ್ಯ ಮತ್ತು ಶನಿಯ ಸಂಯೋಗ; ಈ 6 ರಾಶಿಯವರು 1 ತಿಂಗಳು ಜಾಗರೂಕರಾಗಿರಿ
ಇಂತಹ ಯೋಗದಲ್ಲಿ ಜನಿಸಿದವರು ರಾಜನ ಸಂಪತ್ತನ್ನು ಅನುಭವಿಸುವನು. ಈಗಿನ ಕಾಲದಲ್ಲಿ ಹೇಳುವುದಾದರೆ ಸರ್ಕಾರದ ಸವಲತ್ತು, ಸಂಪತ್ತುಗಳು, ಉನ್ನತ ಅಧಿಕಾರವನ್ನೂ ಪಡೆಯುವರು.
ಇಲ್ಲಿ ಗುರು ಹಾಗೂ ಶುಕ್ರರ ಸಂಯೋಗದಿಂದ ಆಗುವ ಕಾರಣ ಇವರಲ್ಲಿ ಯಾರು ಪ್ರಬಲರು ಎಂದು ಗಮಸಿನದಿದರೆ ಅವರಿಗೆ ಯೋಗ್ಯವಾದ ಸ್ವಭಾವ ಹೆಚ್ಚು ವ್ಯಕ್ತವಾಗುತ್ತದೆ. ಕಲಾಜ್ಞ, ಕಾಮಾಸಕ್ತ, ರಾಜಶ್ರೀಧರ ಇವೆಲ್ಲ ಶುಕ್ರನ ಕಾರಣದಿಂದ ಹಾಗೂ ವೇದಾಂತಜ್ಞ, ಜಿತಾತ್ಮಾ, ಕಾಲಕರ್ತಾ, ಪುಣ್ಯಸ್ಥಳಸಂಚಾರ ಇವೆಲ್ಲ ಗುರುವಿನಿಂದ ಬರುತ್ತದೆ ಎಂದು ತಿಳಿಯಬೇಕು.
ಹೀಗೆ ಅಂಶಾವತಾರಯೋಗದಿಂದ ಜಾತಕನಿಗೆ ಯಾವ ಫಲವಿದೆ ಎಂದು ತಿಳಿಯಬಹುದು.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ