ವಿವಾದದ ಸುಳಿವು; ಬಾರ್ ಕೌನ್ಸಿಲ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿಕೆ ಶಿವಕುಮಾರ್ ಹೆಸರು ತೆರವು

|

Updated on: Aug 09, 2023 | 7:08 PM

Bar Council programme invitation letter; ಮೈಸೂರಿನಲ್ಲಿ ಆಯೋಜಿಸಿದ್ದ ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಶಿವಕುಮಾರ್ ಭಾಗವಹಿಸುತ್ತಿರುವುದಕ್ಕೆ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಶಿವಕುಮಾರ್ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ವಿವಾದದ ಸುಳಿವು; ಬಾರ್ ಕೌನ್ಸಿಲ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿಕೆ ಶಿವಕುಮಾರ್ ಹೆಸರು ತೆರವು
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಆಗಸ್ಟ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರು ಭಾಗವಹಿಸುವ ಬಾರ್ ಕೌನ್ಸಿಲ್ ಕಾರ್ಯಕ್ರಮದ (Bar Council programme) ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಹೆಸರನ್ನು ಅಳಿಸಿಹಾಕಲಾಗಿದೆ. ಈ ವಿಚಾರವಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ವಕೀಲರ ಸಂಘದ ಸದಸ್ಯರು ಬಂದು ತಮ್ಮನ್ನು ಭೇಟಿ ಮಾಡಿದರು. ನನಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನಸ್ಸಿಲ್ಲ ಮತ್ತು ಅದು ನನ್ನ ಆದ್ಯತೆಯೂ ಅಲ್ಲ. ನಾನು ದೇಶದ ಕಾನೂನನ್ನು ಗೌರವಿಸುತ್ತೇನೆ ಮತ್ತು ವಕೀಲರ ಸಂಘವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ವಕೀಲರ ಸಂಘ ಅಥವಾ ನ್ಯಾಯಾಂಗವನ್ನು ಮುಜುಗರಕ್ಕೀಡು ಮಾಡಲು ನಾನು ಬಯಸುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ, ”ಎಂಬುದಾಗಿ ತಿಳಿಸಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಆಯೋಜಿಸಿದ್ದ ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಶಿವಕುಮಾರ್ ಭಾಗವಹಿಸುತ್ತಿರುವುದಕ್ಕೆ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಶಿವಕುಮಾರ್ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ಮೈಸೂರು ಬಾರ್ ಕೌನ್ಸಿಲ್ ವತಿಯಿಂದ ಎರಡು ದಿನಗಳ ರಾಜ್ಯ ಮಟ್ಟದ ವಕೀಲರ ಸಮಾವೇಶವನ್ನು ಆಗಸ್ಟ್ 12 ರಿಂದ ಆಯೋಜಿಸಲಾಗಿದ್ದು, ಆಯೋಜಕರು ಶಿವಕುಮಾರ್ ಅವರ ಹೆಸರಿನೊಂದಿಗೆ ಆಹ್ವಾನ ಪತ್ರಿಕೆಯನ್ನು ಪ್ರಕಟಿಸಿದ್ದರು. ಆದರೆ, ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಟ್ಟು ಆಹ್ವಾನ ಪತ್ರಿಕೆಯನ್ನು ಮರುಮುದ್ರಣ ಮಾಡಲಾಗಿದೆ ಎಂದು ‘ಐಎಎನ್​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​​ಕೆ ಪಾಟೀಲ್ ಭಾಗವಹಿಸಲಿದ್ದಾರೆ.

ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಸಮರ್ಥನೀಯ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಶಿವಕುಮಾರ್ ಪಾಲ್ಗೊಳ್ಳುವುದರಿಂದ ನ್ಯಾಯಾಂಗದ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದರು. ತಾವು ಕಾನೂನು ಸಚಿವರಾಗಿದ್ದಾಗ ಅಂದಿನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮುನ್ನ ಭಾಗವಹಿಸುವವರ ವಿರುದ್ಧ ಯಾವುದೇ ಪ್ರಕರಣಗಳಿವೆಯೇ ಎಂದು ನಿರ್ದಿಷ್ಟವಾಗಿ ಕೇಳಲಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸುವುದಕ್ಕೆ ಸುರೇಶ್ ಕುಮಾರ್ ಆಕ್ಷೇಪ; ಡಿಸಿಎಂ ತಿರುಗೇಟು

ಶಿವಕುಮಾರ್ ವಿರುದ್ಧದ ಪ್ರಕರಣಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ ಎಂದು ಸುರೇಶ್ ಕುಮಾರ್ ಹೇಳಿದ್ದರು. ಇಂತಹ ವ್ಯಕ್ತಿ ನ್ಯಾಯಾಧೀಶರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಸರಿಯೇ? ವಕೀಲರ ಸಂಘವು ಈ ಪ್ರಶ್ನೆಗೆ ಉತ್ತರಿಸಬೇಕು ಮತ್ತು ಪ್ರೋಟೋಕಾಲ್ ಎಲ್ಲರಿಗೂ ಅನ್ವಯಿಸಬೇಕು ಎಂದು ಅವರು ಹೇಳಿದ್ದರು. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪತ್ರವನ್ನೂ ಬರೆದಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಡಿಕೆ ಶಿವಕುಮಾರ್, ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರು ಜಡ್ಜ್​ಗಳ ಜತೆ ವೇದಿಕೆ ಹಂಚಿಕೊಂಡಿಲ್ಲವೇ? ಆಗ ಸುರೇಶ್ ಕುಮಾರ್ ಯಾಕೆ ಆಕ್ಷೇಪಿಸಲಿಲ್ಲ? ಯಡಿಯೂರಪ್ಪ ಹಲವು ಪ್ರಕರಣಗಳನ್ನೂ ಎದುರಿಸುತ್ತಿದ್ದರು. ನಾನು ಈ ಹಿಂದೆ ವಕೀಲರು ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ, ಆಗ ಸುರೇಶ್ ಕುಮಾರ್ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದರು. ಬಳಿಕ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Wed, 9 August 23