ಆತ್ಮಹತ್ಯೆ ಸ್ಪಾಟ್ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು?
ಇತ್ತೀಚೆಗೆ ಓರ್ವ ವ್ಯಕ್ತಿ ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಮ್ಮ ಮೆಟ್ರೋ ಇತ್ತೀಚೆಗೆ ಆತ್ಮಹತ್ಯೆ ಯತ್ನ ಹಾಗೂ ಅನಧಿಕೃತ ಚಟುವಟಿಕೆಗಳ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.

ಬೆಂಗಳೂರು, ಜುಲೈ 29: ನಮ್ಮ ಮೆಟ್ರೋ (Namma Metro) ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರು, ಪ್ರಯಾಣಿಕರಿಗೆ ಕಿರಿಕಿರಿ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ನಮ್ಮ ಮೆಟ್ರೋದಲ್ಲಿ 6 ಜನರು ಪ್ರಾಣ ಕಳೆದುಕೊಂಡಿದ್ದರೆ, 16 ಜನರು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾರೆ. 8 ಜನರು ಹಳಿಗೆ ಹಾರಿದ್ದರೆ, 30 ಜನರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್ಗೆ ಇಳಿದಿದ್ದಾರೆ.
ನಮ್ಮ ಮೆಟ್ರೋ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗುತ್ತಿದೆಯಾ?
ಇತ್ತೀಚೆಗೆ ನಮ್ಮ ಮೆಟ್ರೋ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗುತ್ತಿದೆಯಾ ಎಂಬ ಆತಂಕಗಳು ಎದುರಾಗಿವೆ. ಏಕೆಂದರೆ ಇಲ್ಲಿಯವರೆಗೆ ನಮ್ಮ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. 16 ಜನರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 8 ಜನರು ಟ್ರ್ಯಾಕ್ಗೆ ಹಾರಿದ್ದಾರೆ. 30 ಜನರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್ಗೆ ಇಳಿದಿದ್ದಾರೆ. ಇನ್ನು ಕಳೆದ ಸೋಮವಾರ ಆರ್.ವಿ ರೋಡ್ ಟು ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಬರುವ ಹುಸ್ಕೂರು ಗೇಟ್ ಮೆಟ್ರೋ ಸ್ಟೇಷನ್ನಲ್ಲಿ ಮೆಟ್ರೋ ರೈಲು ಬರುವ ವೇಳೆ ಸುಮಾರು 37 ವರ್ಷದ ವ್ಯಕ್ತಿ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
10 ಲಕ್ಷ ರೂ ದಂಡ ವಸೂಲಿ
ಇನ್ನು ಕಳೆದ ಮೂರು ವರ್ಷದಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು 2240 ಜನರ ಮೇಲೆ ಕೇಸ್ ದಾಖಲಿಸಿ, ಬರೋಬ್ಬರಿ 10 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ. ಮೆಟ್ರೋ ಟ್ರ್ಯಾಕ್ಗೆ ಜಿಗಿದ, ಟ್ರ್ಯಾಕ್ ಮೇಲೆ ಓಡಾಡಿದ, ಮದ್ಯಪಾನ ಮಾಡಿ ಮೆಟ್ರೋ ರೈಲಿನಲ್ಲಿ ಕಿರಿಕ್ ಮಾಡಿದ, ಜೋರಾಗಿ ಮ್ಯೂಸಿಕ್ ಹಾಕಿ ಪ್ರಯಾಣಿಕರಿಗೆ ತೊಂದರೆ ನೀಡಿದ, ಟಿಕೆಟ್, ಪಾಸ್ ದುರ್ಬಳಕೆ, ಊಟ-ತಿಂಡಿ ಮಾಡಿರುವುದು, ನೆಲದ ಮೇಲೆ ಕುಳಿತುಕೊಂಡಿದ್ದ, ರೈಲಿನಲ್ಲಿ ಅನ್ಯ ಪ್ರಯಾಣಿಕರ ಜೊತೆ ಜಗಳ, ರೈಲಿನಲ್ಲಿ ಉಗುಳಿದ ನಮ್ಮ ಮೆಟ್ರೋ ಪ್ರಯಾಣಿಕರಿಂದ ಕಳೆದ ಮೂರು ವರ್ಷದಲ್ಲಿ 2240 ಕೇಸ್ ದಾಖಲಿಸಲಾಗಿದ್ದು, ಬರೋಬ್ಬರಿ 10 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.
904 ಪ್ರಯಾಣಿಕರು ಮೆಟ್ರೋದಲ್ಲಿ ಹುಚ್ಚಾಟ
2025ರಲ್ಲಿ 5 ಜನರು ಪ್ರಯಾಣಿಕರು ಆತ್ಮಹತ್ಯೆಗೆ ಯತ್ನಿಸಿದ್ದರೆ, ಒಬ್ಬ ಪ್ರಯಾಣಿಕ ಪ್ರಾಣ ಕಳೆದುಕೊಂಡಿದ್ದು, ಐವರು ಪ್ರಯಾಣಿಕರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್ಗೆ ಇಳಿದಿದ್ದರು. ಇನ್ನು ಇಬ್ಬರು ಪ್ರಯಾಣಿಕರು ಟ್ರ್ಯಾಕ್ ಬಿದ್ದಿದ್ದರು. ‘ಈ ವರ್ಷದ ನಾಲ್ಕು ತಿಂಗಳಿನಲ್ಲಿ 904 ಪ್ರಯಾಣಿಕರು ಮೆಟ್ರೋದಲ್ಲಿ ಹುಚ್ಚಾಟವಾಡಿ 3.59 ಲಕ್ಷ ರೂ ದಂಡ ಪಾವತಿ ಮಾಡಿದ್ದಾರೆ’ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್ಸಿಎಲ್ ಕಸರತ್ತು
ಒಟ್ಟಿನಲ್ಲಿ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಸಂಚಾರಿಸೋಣ ಅಂತ ಅದೆಷ್ಟೋ ಜನ ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ಆದರೆ ಅದೇ ಮೆಟ್ರೋ ನಿಲ್ದಾಣಗಳು ಇದೀಗ ಆತ್ಮಹತ್ಯೆ ಸ್ಥಳಗಳಾಗಿ ಬದಲಾಗುತ್ತಿದ್ದು, ಈಗಾಲಾದರೂ BMRCL ಹೆಚ್ಚಿನ ಭದ್ರತೆಯನ್ನ ಒದಗಿಸುತ್ತಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




