ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಜೊತೆ ಇಂದು (ಫೆ.14) ಹಸೆಮಣೆ ಏರಿದ್ದಾರೆ.
ಬೆಳಗ್ಗೆ 9.45 ರ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಇಂದು ಪ್ರೇಮಿಗಳ ದಿನಾಚರಣೆ. ಈ ದಿನದಂದೇ ಐಶ್ವರ್ಯಾ ಮದುವೆ ನೆರವೇರುತ್ತಿರುವುದು ವಿಶೇಷ ಸಂಭ್ರಮವಾಗಿದೆ.
ಡಿ.ಕೆ. ಶಿವಕುಮಾರ್ ಹಾಗೂ ಎಸ್.ಎಂ. ಕೃಷ್ಣ ಇಬ್ಬರೂ ರಾಜಕೀಯ ರಂಗದಲ್ಲಿ ಅತ್ಯಂತ ಪ್ರಭಾವಿಗಳು. ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ್ ಕೂಡ ಖ್ಯಾತರು. ಹಾಗಾಗಿ, ರಾಜಕೀಯ ಮತ್ತು ಇತರ ವಲಯದ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.
ವಿನಯ್ ಗುರೂಜಿ, ನೊಣವಿನಕೆರೆ ಸ್ವಾಮೀಜಿ ಸಹಿತ ಇತರ ಮಠಾಧೀಶರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗೆ ಶುಭಹಾರೈಸಿದ್ದಾರೆ.
ಬೆಂಗಳೂರಿನಲ್ಲಿ ಐಶ್ವರ್ಯಾ, ಅಮರ್ತ್ಯ ಹೆಗ್ಡೆ ವಿವಾಹ ಸಮಾರಂಭಕ್ಕೆ ಗಣ್ಯಾತಿ ಗಣ್ಯರು, ಮಠಾಧೀಶರು ಆಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಮುಖಂಡರಾದ ವಿ.ಸೋಮಣ್ಣ, ಡಾ.ಜಿ.ಪರಮೇಶ್ವರ್, ಶಾಮನೂರು ಶಿವಶಂಕರಪ್ಪ, ಎನ್.ಚಲುವರಾಯಸ್ವಾಮಿ, ಟಿ.ಎ.ನಾರಾಯಣಗೌಡ, ಪ್ರಭಾಕರ ಕೋರೆ, ಮುನಿರತ್ನ, ಕುಮಾರ ಬಂಗಾರಪ್ಪ, ಆರ್.ಸಂಪತ್ ರಾಜ್ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯಾ-ಅಮರ್ತ್ಯ ಹೆಗ್ಡೆ
ಮದುವೆ ಸಂಪ್ರದಾಯದಂತೆ ಮದುಮಗನನ್ನು ಮದುವೆ ಮಂಟಪಕ್ಕೆ ಡಿ.ಕೆ. ಶಿವಕುಮಾರ್ ಕುಟುಂಬದವರು ಸ್ವಾಗತಿಸಿದ್ದಾರೆ. ಕನ್ಯಾದಾನ ನೆರವೇರಿಸಿದ್ದಾರೆ. ಅಳಿಯ ಅಮರ್ತ್ಯ ಹೆಗ್ಡೆ ಕಾಲು ತೊಳೆದು ಸಂಪ್ರದಾಯ ನೆರವೇರಿಸಿದ್ದಾರೆ.
ಸ್ವಾಮಿಗಳು, ಮಠಾಧೀಶರು, ಗಣ್ಯಾತಿಗಣ್ಯರು ವಧುವರರನ್ನು ಆಶೀರ್ವದಿಸಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್, ಉದ್ಯಮಿ ಅಶೋಕ್ ಖೇಣಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ ಸಾಧ್ಯತೆ ಅಂದಾಜಿಸಲಾಗಿದೆ.
ಬೆಂಗಳೂರಿನ ಐಷಾರಾಮಿ ಹೋಟೆಲ್ಗಳಲ್ಲಿ ಒಂದಾದ ವೈಟ್ ಫೀಲ್ಡ್ನ ಶೆರಟಾನ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಫೆಬ್ರವರಿ 17ರಂದು ಪ್ರೆಸ್ಟೀಜ್ ಗಾಲ್ಫ್ಶೈರ್ ರೆಸಾರ್ಟ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.
ಮದುವೆ ಕಾರ್ಯಕ್ರಮ ಇಂದು (ಫೆಬ್ರವರಿ 14) ಆದರೂ, ಮದುವೆ ಕಾರ್ಯಕ್ರಮದ ಸಂಭ್ರಮ ಫೆ.5ರಿಂದಲೇ ಆರಂಭಗೊಂಡಿತ್ತು. ಸಂಗೀತ ಕಾರ್ಯಕ್ರಮಗಳು ರಸವತ್ತಾಗಿ ಏರ್ಪಟ್ಟಿದ್ದವು. ಫೆಬ್ರವರಿ 10ರಂದು ಅರಿಶಿಣ ಕಾರ್ಯಕ್ರಮ ನೆರವೇರಿದೆ. ನವೆಂಬರ್ 18ರಂದು ಬೆಂಗಳೂರಿನ ಹೊರ ವಲಯದಲ್ಲಿ ಸಿಂಪಲ್ ಆಗಿ ನಿಶ್ಚಿತಾರ್ಥ ಸಮಾರಂಭವೂ ನೆರವೇರಿತ್ತು.
Published On - 11:05 am, Sun, 14 February 21