ಬೆಂಗಳೂರಲ್ಲಿ ಕೊರೊನಾ 3ನೇ ಅಲೆಗೂ ಮುನ್ನ ಏಕಾಏಕಿ ಹೆಚ್ಚಳವಾಗುತ್ತಿದೆ ಡೆಂಗ್ಯೂ, ಟೈಫಾಯ್ಡ್​ ಕಾಯಿಲೆ; ಮೈಮರೆತರೆ ಅಪಾಯಕ್ಕೆ ಆಹ್ವಾನ

ಕಳೆದೊಂದು ವಾರದಲ್ಲಿ ಒಮ್ಮೆಲೆಗೆ ಹವಾಮಾನ ಬದಲಾದ ಕಾರಣ ಡೆಂಗ್ಯೂ ರೋಗಿಗಳ ಸಂಖ್ಯೆ ಶೇ.20ರಿಂದ ಶೇ.30ರಷ್ಟು ಹಾಗೂ ಟೈಫಾಯ್ಡ್ ರೋಗಿಗಳ ಸಂಖ್ಯೆಯಲ್ಲಿ ಶೇ.5ರಿಂದ ಶೇ.10ರಷ್ಟು ಹೆಚ್ಚಳವಾಗಿದೆ.

ಬೆಂಗಳೂರಲ್ಲಿ ಕೊರೊನಾ 3ನೇ ಅಲೆಗೂ ಮುನ್ನ ಏಕಾಏಕಿ ಹೆಚ್ಚಳವಾಗುತ್ತಿದೆ ಡೆಂಗ್ಯೂ, ಟೈಫಾಯ್ಡ್​ ಕಾಯಿಲೆ; ಮೈಮರೆತರೆ ಅಪಾಯಕ್ಕೆ ಆಹ್ವಾನ
ಪ್ರಾತಿನಿಧಿಕ ಚಿತ್ರ
Follow us
| Updated By: Skanda

Updated on: Jul 14, 2021 | 2:41 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಹತೋಟಿಗೆ ಬಂದಂತೆ ಕಾಣುತ್ತಿದ್ದು, ಸೋಂಕು ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ, ಇದೀಗ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಡೆಂಗ್ಯೂ (Dengue) ಹಾಗೂ ಟೈಫಾಯ್ಡ್ (Typhoid) ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಇವುಗಳನ್ನು ತುರ್ತಾಗಿ ನಿಯಂತ್ರಿಸದೇ ಇದ್ದಲ್ಲಿ ಕೊರೊನಾ ಮೂರನೇ ಅಲೆ (Corona Third Wave) ಜತೆ ಈ ಸಮಸ್ಯೆಗಳೂ ಸೇರಿಕೊಂಡು ಆರೋಗ್ಯ ವ್ಯವಸ್ಥೆಗೆ ಹೊರೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕಳೆದೊಂದು ವಾರದಲ್ಲಿ ಒಮ್ಮೆಲೆಗೆ ಹವಾಮಾನ ಬದಲಾದ (Weather Changes) ಕಾರಣ ಡೆಂಗ್ಯೂ ರೋಗಿಗಳ ಸಂಖ್ಯೆ ಶೇ.20ರಿಂದ ಶೇ.30ರಷ್ಟು ಹಾಗೂ ಟೈಫಾಯ್ಡ್ ರೋಗಿಗಳ ಸಂಖ್ಯೆಯಲ್ಲಿ ಶೇ.5ರಿಂದ ಶೇ.10ರಷ್ಟು ಹೆಚ್ಚಳವಾಗಿದೆ. ಅತೀ ಶೀಘ್ರದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗುವ ಸಾಧ್ಯತೆಯೂ ಇರುವುದರಿಂದ ಇವುಗಳನ್ನು ನಿಯಂತ್ರಿಸಲು ತ್ವರಿತ ಕ್ರಮ ಅಗತ್ಯವಿದೆ ಎಂದು ವೈದ್ಯಕೀಯ ವರ್ಗ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಸ್ತರ್ ಆರ್​ವಿ ಆಸ್ಪತ್ರೆಯ ಡಾ.ಎಸ್​.ಎನ್.ಅರವಿಂದ್ ಅವರು ಈ ಬಗ್ಗೆ ಮಾತನಾಡಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೀಗ ಕೊರೊನಾ ಹೊರತಾಗಿ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಡೆಗೆ ಗಮನಹರಿಸಬೇಕಿದೆ. ಈ ಮೊದಲು ಜ್ವರದಿಂದ ಬಳಲುತ್ತಿದ್ದವರು ಯಾರೇ ಬಂದರು ಕೊರೊನಾ ಎಂದು ಅನುಮಾನಿಸಿ ಕೊವಿಡ್ ಟೆಸ್ಟ್ ಮಾಡಿಸಲಾಗುತ್ತಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಜ್ವರವನ್ನು ಬೇರೆ ರೀತಿಯಲ್ಲಿಯೇ ಪರಿಗಣಿಸಿ ಅದಕ್ಕೆ ತಕ್ಕದಾದ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕ್ರಿಯ ಆಸ್ಪತ್ರೆಯ ಡಾ.ದ್ವಿಜೇಂದ್ರ ಸಿಂಗ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಶೇ.20ರಿಂದ ಶೇ.30ರಷ್ಟು ಪ್ರಮಾಣದಲ್ಲಿ ಜ್ವರದ ಸಮಸ್ಯೆ ಹೆಚ್ಚಳವಾಗಿದೆ. ಹೋದವರ್ಷ ಜನರು ಕೊರೊನಾ ಭಯದಿಂದ ಮನೆಯಲ್ಲೇ ಇರುತ್ತಿದ್ದರು. ಹಾಗಾಗಿ, ಮಳೆಗಾಲದಲ್ಲಿ ಕಾಣಿಸಿಕೊಳ್ಳಬೇಕಿದ್ದ ಸಮಸ್ಯೆಗಳೂ ಹೆಚ್ಚಾಗಿರಲಿಲ್ಲ. ಬಹುಮುಖ್ಯವಾಗಿ ಟೈಫಾಯ್ಡ್ ಕಾಯಿಲೆ ಆಹಾರ ಮತ್ತು ನೀರಿನಿಂದಲೂ, ಡೆಂಗ್ಯೂ ಕಾಯಿಲೆ ಸೊಳ್ಳೆಗಳಿಂದಲೂ ಹಬ್ಬುತ್ತದೆ. ತೀವ್ರ ಜ್ವರದ ಜತೆ ಮೈಕೈ ನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಜನರು ಇದನ್ನು ಕಡೆಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್ತರ್ ಸಿಎಂಐ ಆಸ್ಪತ್ರೆಯ ಡಾ.ಬೃಂದಾ ಎಂ.ಎಸ್ ಮಾತನಾಡಿ, ಒಂದು ವಾರದಲ್ಲಿ ಸುಮಾರು 18ರಿಂದ 20 ಡೆಂಗ್ಯೂ, ಟೈಫಾಯ್ಡ್ ಪ್ರಕರಣಗಳು ಕಂಡುಬಂದಿವೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧವನ್ನು ಒಮ್ಮೆಲೆ ಸಡಿಲಿಸಿರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಆದರೆ, ಮೂರನೇ ಅಲೆಯ ಸಾಧ್ಯತೆ ಇರುವುದರಿಂದ ಡೆಂಗ್ಯೂ, ಟೈಫಾಯ್ಡ್ ಜತೆಗೆ ಕೊರೊನಾ ಕೂಡಾ ಹೆಚ್ಚಾದರೆ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಒತ್ತಡ ಉಂಟಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಹೋದರೆ ಡೆಂಗ್ಯೂ, ಟೈಫಾಯ್ಡ್ ಸಮಸ್ಯೆಯನ್ನೂ ನಿಯಂತ್ರಿಸಬಹುದು ಎಂದು ಅವರು ಕಿವಿಮಾತು ಹೇಳಿದ್ದಾಗಿ ಇಂಡಿಯನ್​ ಎಕ್ಸ್​ಪ್ರೆಸ್ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ವಿಶ್ವದ ನಾನಾ ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಈಗಲೂ ಹೆಚ್ಚುತ್ತಿವೆ, ದಯವಿಟ್ಟು ಯಾಮಾರಬೇಡಿ: ಸೌಮ್ಯ ಸ್ವಾಮಿನಾಥನ್ 

ಕೊರೊನಾ ನಿಭಾಯಿಸಲು ದೇವರೇ ಮೋದಿಗೆ ಪ್ರಧಾನಿ ಪಟ್ಟ ನೀಡಿದ್ದಾನೆ, ಲಸಿಕೆ ವಿಳಂಬವಾಗಲು ವಿಪಕ್ಷದವರು ಕಾರಣ – ಡಾ.ಸುಧಾಕರ್