ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ದುರ್ವರ್ತನೆ

| Updated By: ಆಯೇಷಾ ಬಾನು

Updated on: Jan 08, 2024 | 6:56 AM

ನಮ್ಮ ಮೆಟ್ರೋ ನಗರದ ಜನರ ಫೆವರೇಟ್. ಈ ವೇಗದೂತನ ಮೂಲಕ ದಿನನಿತ್ಯ ಲಕ್ಷಾಂತರ ಮಂದಿ ನಗರದ ಮೂಲೆ ಮೂಲೆಗೂ ಸಂಚಾರ ಮಾಡ್ತಾರೆ. ಆದರೆ ಇದೇ ಮೆಟ್ರೋ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಇದೀಗ ಮೂಡಿದೆ. ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.

ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ದುರ್ವರ್ತನೆ
ನಮ್ಮ ಮೆಟ್ರೋ
Follow us on

ಬೆಂಗಳೂರು, ಜ.08: ಕಳೆದ ಕೆಲ ದಿನಗಳಿಂದ ಒಂದಿಲ್ಲೊಂದು ವಿಚಾರಕ್ಕೆ ನಮ್ಮ ಮೆಟ್ರೋ (Namma Metro) ಸದಾ ಸುದ್ದಿಯಲ್ಲಿದೆ. ದಿನನಿತ್ಯ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಮೆಟ್ರೋದಲ್ಲಿ ಇದೀಗ ಮತ್ತೊಂದು ಲೈಂಗಿಕ ಕಿರುಕುಳದ (Sexual Harassment) ಆರೋಪ ಕೇಳಿ ಬಂದಿದೆ. ಜನವರಿ 1ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಿಡಿಗೇಡಿಯೊಬ್ಬ ಹಿಂಬದಿಯಿಂದ ಯುವತಿಯ ಖಾಸಗಿ ಅಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಕೂಡಲೇ ಯುವತಿ ಅಲ್ಲಿಯರುವ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಲೈಂಗಿಕ ಕಿರುಕುಳ ಕೊಟ್ಟ ಆಸಾಮಿಯನ್ನ ಹಿಡಿದಿದ್ದು, ಈ ವೇಳೇ ಈ ಕಿಡಿಗೇಡಿ ಯುವತಿಯ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಎರಡು ತಿಂಗಳ ಅಂತರದಲ್ಲಿ ಮೂರು ಲೈಂಗಿಕ ಕಿರುಕುಳ ಪ್ರಕರಣ

ನಮ್ಮ ಮೆಟ್ರೋದಲ್ಲಿ ಕೇವಲ 2 ತಿಂಗಳ ಅಂತರದಲ್ಲಿ ಈ ರೀತಿಯ ಮೂರು ಪ್ರಕರಣ ನಡೆದಿದೆ. ನವೆಂಬರ್ 20 ರಂದು ಇದೇ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ, ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಕೊಟ್ಟಿದ್ದರ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದಂಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಇದಾದ ನಂತರ ಡಿಸೆಂಬರ್ 7 ರಂದು ರಾಜಾಜಿನಗರಲ್ಲಿ ಮೆಟ್ರೋ ಹತ್ತಿದ್ದ ಯುವತಿಗೆ ಲೋಕಿ ಅನ್ನೋ ಕಿಡಿಗೇಡಿ ಕೂಡ ಹಿಂಬದಿಯಿಂದ ಬಂದು ಆಕೆಯ ದೇಹವನ್ನ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ.

ಹೀಗೆ ಪದೇ ಪದೇ ಈ ರೀತಿಯ ಪ್ರಕರಣ ನಡೆಯುತ್ತಿರೋದ್ರಿಂದ ಮೆಟ್ರೋ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಅನ್ನೋ ಆತಂಕಭರಿತ ಪ್ರಶ್ನೆ ಮೂಡಿದೆ. ಇನ್ನಾದ್ರೂ BMRCL ಅಧಿಕಾರಿಗಳು ಹೆಣ್ಣುಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತುಕೊಡುವ ಮೂಲಕ ಜನರಲ್ಲಿ ಆವರಿಸಿರುವ ಭಯವನ್ನ ಹೋಗಲಾಡಿಸಬೇಕಾಗಿದೆ.

ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ: ಆತಂಕಗೊಂಡ ಪ್ರಯಾಣಿಕರು

ಬಾಲಕನ ಮೇಲೆ ಬೀದಿನಾಯಿಗಳು ದಾಳಿ

ಹಾಲು ತರಲು ಹೋಗಿದ್ದ 5 ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಕಲಬುರಗಿ ಜಿಲ್ಲೆಯ ಮಿಸ್ಬಾನಗರದಲ್ಲಿ ಘಟನೆ ನಡೆದಿದ್ದು, ರಶೀದ್ ಅಶ್ಫಕ್ ಎಂಬ ಬಾಲಕ ಮೇಲೆ ಬೀದಿನಾಯಿಗಳು ಎರಗಿದ್ವು. ಇನ್ನೂ ಗಾಯಗೊಂಡ ರಶೀದ್ ಅಶ್ಫಕ್​ನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಕಳೆದ ವಾರದಿಂದ 2 ಘಟನೆ ನಡೆದರೂ ನಗರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದ್ರಿಂದ ಅಧಿಕಾರಿಗಳ ವಿರುದ್ಧ ಮಿಸ್ಬಾನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:54 am, Mon, 8 January 24