ACB Raid: ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ; ಅರಣ್ಯಾಧಿಕಾರಿ ಮನೆಯಲ್ಲಿ ಸಿಕ್ಕಿತು ಚಿನ್ನ, ಬೆಳ್ಳಿ, ಗಂಧ, 20 ಲಕ್ಷಕ್ಕೂ ಅಧಿಕ ನಗದು

ನೀರಾವರಿ ಇಲಾಖೆ ಇಇ ಮನೆ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿ ಭ್ರಷ್ಟ ಅಧಿಕಾರಿ ಬಸವರಾಜ್ ಪಾಟೀಲ್ ಸಹೋದರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಆಗಿದೆ. ಅರ್ಧ ಕೆಜಿಗೂ ಹೆಚ್ಚು ಚಿನ್ನ ಪತ್ತೆ ಹಚ್ಚಲಾಗಿದೆ.

ACB Raid: ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ; ಅರಣ್ಯಾಧಿಕಾರಿ ಮನೆಯಲ್ಲಿ ಸಿಕ್ಕಿತು ಚಿನ್ನ, ಬೆಳ್ಳಿ, ಗಂಧ, 20 ಲಕ್ಷಕ್ಕೂ ಅಧಿಕ ನಗದು
ಎಸಿಬಿ ದಾಳಿ ವೇಳೆ ಪತ್ತೆಯಾದ ಸಂಪತ್ತು
Follow us
| Updated By: ganapathi bhat

Updated on:Mar 16, 2022 | 10:08 AM

ಬಾದಾಮಿ: ಕರ್ನಾಟಕದ 78 ಕಡೆಗಳಲ್ಲಿ ಸುಮಾರು 300ರಷ್ಟು ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಬಾದಾಮಿ ವಲಯ ಅರಣ್ಯಾಧಿಕಾರಿ, RFO ಶಿವಾನಂದ್ ಪಿ. ಶರಣಪ್ಪ ಖೇಡಗಿ ಮನೆಯಲ್ಲಿ ಶೋಧಕಾರ್ಯ ನಡೆಸಲಾಗಿದ್ದು, 16 ಲಕ್ಷ ರೂಪಾಯಿ ಎಫ್​ಡಿ ಇರಿಸಿರುವ ದಾಖಲೆ ಪತ್ರ ಪತ್ತೆಯಾಗಿದೆ. ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ, 4 ಕೆ.ಜಿ. ಬೆಳ್ಳಿ ವಸ್ತು, ಮನೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ನಗದು ಸಿಕ್ಕಿಬಿದ್ದಿದೆ. ಮನೆಯಲ್ಲಿ ಮೂರು ಕೆಜಿಗೂ ಅಧಿಕ ಗಂಧದ ಕಟ್ಟಿಗೆ ಪತ್ತೆಯಾಗಿದೆ. ಸಂಬಂಧಿಕರ ಮನೆಯಲ್ಲಿ 12 ಲಕ್ಷ ರೂಪಾಯಿ ಸಿಕ್ಕಿದೆ.

ಬೆಳ್ಳಂಬೆಳಗ್ಗೆ ದಾವಣಗೆರೆ ಪರಿಸರ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಮಹೇಶ್ವರಪ್ಪ ಎಂಬ ಅಧಿಕಾರಿಗೆ ಸೇರಿದ ದಾವಣಗೆರೆಯ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದೇವರಾಜ ಅರಸು ಬಡಾವಣೆಯಲ್ಲಿರುವ ಕಚೇರಿ, ವಿದ್ಯಾನಗರದ ರಂಗನಾಥ್ ಬಡಾವಣೆಯಲ್ಲಿರುವ ಮನೆ, ಚನ್ನಗಿರಿಯ ಕಮ್ಮಸಾಗರ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ನಗರದಲ್ಲಿ 10 ಮನೆಗಳು, 2 ಸೈಟ್​ಗಳು, ಕಮ್ಮಸಾಗರದಲ್ಲಿ 10 ಎಕರೆ ಜಮೀನು, 1 ಕಾರು, 1 ಬೈಕ್ ಪತ್ತೆ ಆಗಿದೆ.

ನೀರಿನ ಟ್ಯಾಂಕ್ ಚೆಕ್ ಮಾಡಿದ ಅಧಿಕಾರಿಗಳು

ಕೊಪ್ಪಳದ AE ಗಿರೀಶ್ ಮನೆ ಮೇಲೆ ಎಸಿಬಿ ದಾಳಿ ಕೇಸ್ ಸಂಬಂಧಿಸಿ ಕಾರ್ ತಪಾಸಣೆ ವೇಳೆ ಮನೆಯ ದಾಖಲಾತಿ ಪತ್ತೆ ಆಗಿದೆ. ಈ ವೇಳೆ, ಕಾರು ನನ್ನದಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ AE ಗಿರೀಶ್ ಹೇಳಿದ್ದಾರೆ. ಜೊತೆಗೆ ಕೊಪ್ಪಳ, ಯಲಬುರ್ಗಾ, ಬಾಗಲಕೋಟೆಯ 5 ಕಡೆ ದಾಳಿ ನಡೆಸಲಾಗಿದೆ. ಗಿರೀಶ್ ಮನೆ ಮೇಲೆ ಮೇಲೆ ಇರುವ ಸಿಂಟೆಕ್ಸ್ ಚೆಕ್ ಮಾಡಿದ್ದಾರೆ. ಅಧಿಕಾರಿಗಳು ಮನೆ ಮಹಡಿ ಮೇಲಿರೋ ನೀರಿನ ಟ್ಯಾಂಕ್ ಚೆಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಡಿಎ ನಗರ ಯೋಜನೆ ವಿಭಾಗದ ಉಪನಿರ್ದೇಶಕ ರಾಕೇಶ್ ಕುಮಾರ್​ಗೆ ಎಸಿಬಿ ಶಾಕ್​ ನೀಡಿದೆ. 2021ರಲ್ಲಿ ನಾಗರಬಾವಿಯಲ್ಲಿ ಸ್ವಂತ ಮನೆ ಖರೀದಿ ಮಾಡಿದ್ದರು. ಸುಮಾರು ನಾಲ್ಕು ಕೋಟಿ ರೂ. ಬೆಲೆ ಬಾಳುವ ಮನೆ ಅದಾಗಿದೆ. ಕೋಟಿ ಕೋಟಿ ಆಸ್ತಿ ಸಂಪಾದನೆಯ ದಾಖಲೆ ಪರಿಶೀಲನೆ ಮಾಡಲಾಗಿದೆ. ಆಸ್ತಿ ಪತ್ರ ಪರಿಶೀಲನೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳಿಗೆ ರಾಕೇಶ್ ಕುಮಾರ್ ಮನೆಯಲ್ಲಿ ಚಿನ್ನಾಭರಣ ಪತ್ತೆ ಆಗಿದೆ.

3 ಲಕ್ಷದಿಂದ 5 ಲಕ್ಷ ಬೆಲೆ ಬಾಳುವ ಜಾಗ್ವಾರ್ ಕಂಪನಿಯ ಐಷಾರಾಮಿ ಸ್ಟೀಮ್ ಬಾತ್ ರೂಂ ಪತ್ತೆ

ವಿಜಯಪುರದಲ್ಲಿ ಮಳಗಿ-ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಸಾ ಎನ್., ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ನಿವಾಸದಲ್ಲಿ ಚಿನ್ನದ ಸರ, ನೆಕ್ಲೆಸ್, ಬಳೆ, ಉಂಗುರ, ಓಲೆ, ಬೆಳ್ಳಿ ಆಭರಣ ಪತ್ತೆ ಆಗಿದೆ. ಅಲ್ಲದೆ ಗೋಪಿನಾಥ್ ಜಾಕೊಜಿ ಸ್ಟೀಮ್ ಬಾತ್ ರೂಂ ಹಾಕಿಸಿದ್ದಾರೆ. 3 ಲಕ್ಷದಿಂದ 5 ಲಕ್ಷ ಬೆಲೆ ಬಾಳುವ ಜಾಗ್ವಾರ್ ಕಂಪನಿಯ ಐಷಾರಾಮಿ ಜಾಕೊಜಿ ಬಾತ್ ರೂಂ ಹಾಕಿಸಲಾಗಿದೆ. ಸರ್ಕಾರಿ ಇಂಜಿನಿಯರ್ ಗಳನ್ನ ಕರೆಯಿಸಿ ಬಾತ್ ರೂಂ ಹಾಕಿಸಿರುವ ಮಾಹಿತಿ ಲಭಿಸಿದೆ.

KBJNL ಎಇಇ ಮನೆ ಮೇಲೆ ಎಸಿಬಿ‌ ಅಧಿಕಾರಿಗಳ ದಾಳಿ ನಡೆಸಲಾಗಿದೆ. ಅಶೋಕ್ ರೆಡ್ಡಿ ಪಾಟೀಲ್ ಮನೆ, ಕಚೇರಿಗಳ ಮೇಲೆ ರೇಡ್​ ಮಾಡಿದೆ. ಕೃಷ್ಣ ಭಾಗ್ಯ ಜಲ ನಿಗಮ ಲಿ., ದೇವದುರ್ಗ, ರಾಯಚೂರು, ರಾಯಚೂರಿನ ಬಸವೇಶ್ವರ ಕಾಲೋನಿಯಲ್ಲಿರುವ ಮನೆ, ಕದ್ರಾಪುರ ಗ್ರಾಮದ ಮನೆ ಮೇಲೂ‌ ದಾಳಿ ನಡೆಸಿ ಶೋಧಕಾರ್ಯ ನಡೆಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ಬಳಿಯ ಕದ್ರಾಪುರ ಗ್ರಾಮದಲ್ಲಿ ಮನೆ ಪಕ್ಕದ ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ ಆಗಿದೆ. ಖಾಲಿ ಸೈಟ್​ನಲ್ಲಿ ಒಂದು 100, ₹500 ನೋಟು ಪತ್ತೆಯಾಗಿದೆ. ಬೆಳಗ್ಗೆ ದಾಳಿ ಬಳಿಕ ಖಾಲಿ ಸೈಟ್​ನಲ್ಲಿ ಹಣ ಬಿಸಾಡಿದ್ದರು ಎಂದು ತಿಳಿದುಬಂದಿದೆ.

ಕಂತೆ ಕಂತೆ ಹಣ, ಕೆಜಿಗೂ ಅಧಿಕ ಚಿನ್ನ, ಬೆಳ್ಳಿ

ಗದಗ ಉಪ ತಹಶೀಲ್ದಾರ್ ಬಿ.ಎಸ್. ಅಣ್ಣಿಗೇರಿ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಗದಗ ನಗರದ ಪಂಚಾಕ್ಷರಿ ನಗರದಲ್ಲಿರುವ B.S.ಅಣ್ಣಿಗೇರಿ ಮನೆ, B.S.ಅಣ್ಣಿಗೇರಿ ಅಳಿಯನ ಮನೆ, ಉಪ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ್ದು ಎಸಿಬಿ ದಾಳಿ ವೇಳೆ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆ ಆಗಿದೆ. B.S.ಅಣ್ಣಿಗೇರಿ ಅಳಿಯನ ಮನೆಯಲ್ಲೂ ದಾಖಲೆಗಳು ಪತ್ತೆಯಾಗಿದೆ.

ನೀರಾವರಿ ಇಲಾಖೆ ಇಇ ಮನೆ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿ ಭ್ರಷ್ಟ ಅಧಿಕಾರಿ ಬಸವರಾಜ್ ಪಾಟೀಲ್ ಸಹೋದರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಆಗಿದೆ. ಅರ್ಧ ಕೆಜಿಗೂ ಹೆಚ್ಚು ಚಿನ್ನ ಪತ್ತೆ ಹಚ್ಚಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಶಹಾಪುರ‌ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದ ಅಧಿಕಾರಿಗಳು ದಾಳಿ ವೇಳೆ ಚಿನ್ನ, ಹಣ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ACB Raid: ಏಕಕಾಲಕ್ಕೆ ಕರ್ನಾಟಕದ 78 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಎಸಿಬಿ ದಾಳಿ

ಇದನ್ನೂ ಓದಿ: ಲಂಚ: ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಶ್ರೀನಿವಾಸ್ ಮತ್ತು ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಮೇಲೆ ಎಸಿಬಿ ದಾಳಿ

Published On - 9:59 am, Wed, 16 March 22