ಕೈ ಹಿಡಿದ ಟೊಮ್ಯಾಟೊ : 11 ಎಕರೆಯಲ್ಲಿ 10 ಲಕ್ಷ ರೂ. ಸಂಪಾದಿಸಿದ ರೈತ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮ್ಯಾಟೊ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿಯ ರೈತ ಶಿವಪ್ಪ ಕುರಿ 11 ಎಕರೆಯಲ್ಲಿ ಖರ್ಚುವೆಚ್ಚ ತೆಗೆದು ಎರಡು ತಿಂಗಳಲ್ಲಿ ಬರೊಬ್ಬರಿ 10 ಲಕ್ಷ ರೂ. ಆದಾಯ ಪಡೆದಿದ್ದಾರೆ.

ಕೈ ಹಿಡಿದ ಟೊಮ್ಯಾಟೊ : 11 ಎಕರೆಯಲ್ಲಿ 10 ಲಕ್ಷ ರೂ. ಸಂಪಾದಿಸಿದ ರೈತ
ರೈತ ಶಿವಪ್ಪ ಕುರಿ
Edited By: ವಿವೇಕ ಬಿರಾದಾರ

Updated on: Jul 15, 2023 | 6:46 PM

ಬಾಗಲಕೋಟೆ: ಟೊಮ್ಯಾಟೊ (Tomato) ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರು ಟೊಮ್ಯಾಟೊ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ರೈತರು (Farmer) ಮಾತ್ರ ಬಂಪರ್ ಲಾಭ ಪಡೆಯುತ್ತಿದ್ದಾರೆ. ಹೌದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮ್ಯಾಟೊ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿಯ ರೈತ ಶಿವಪ್ಪ ಕುರಿ 11 ಎಕರೆಯಲ್ಲಿ ಖರ್ಚುವೆಚ್ಚ ತೆಗೆದು ಎರಡು ತಿಂಗಳಲ್ಲಿ ಬರೊಬ್ಬರಿ 10 ಲಕ್ಷ ರೂ. ಆದಾಯ ಪಡೆದಿದ್ದಾರೆ.

ಒಂದು ತಿಂಗಳ ಹಿಂದೆ ಕಡಿಮೆ ಬೆಲೆ ಇದ್ದಾಗ ಪಡೆದದ್ದು 11 ಎಕರೆಯಲ್ಲಿ ಬೆಳೆದ ಟೊಮ್ಯಾಟೊ 4 ಲಕ್ಷ ರೂ. ಲಾಭ ಬಂದಿತ್ತು. ಇದೀಗ ಬೆಲೆ ಏರಿಕೆಯಾದ ಹಿನ್ನೆಲೆ ಬಂಪರ್ ಲಾಭ ಬಂದಿದೆ. ಕಳೆದ ವರ್ಷ 18 ಎಕರೆಯಲ್ಲಿ 1 ಕೋಟಿ 10 ಲಕ್ಷ ಲಾಭ ಬಂದಿತ್ತು.

20 ಗುಂಟೆ ಜಮೀನಿನಲ್ಲಿ 11 ಲಕ್ಷ ರೂ. ಸಂಪಾದಿಸಿದ ಯುವ ರೈತ

ಬೆಳಗಾವಿ: ಕೇವಲ 20 ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದು ಯುವ ರೈತ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾನೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಬಿ.ಎ. ಪದವೀಧರ ಆಗಿರುವ ಮಹೇಶ್ ಹಿರೇಮಠ ಎನ್ನುವರು ಕೇವಲ 20 ಗುಂಟೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಪ್ರಾರಂಭ, ಕರ್ನಾಟಕದ ಮಾರುಕಟ್ಟೆಗೆ ಡಿಮ್ಯಾಂಡ್

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಮಹೇಶ್ ಹಿರೇಮಠ ಬಿ.ಎ. ಪದವೀಧರ. ಇವರು ಕಳೆದ ನಾಲ್ಕು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾ ಬಂದಿದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿರುವ ಇವರು ಎರಡು ಎಕರೆಯಲ್ಲಿ ಕಬ್ಬು‌ ಬೆಳೆದಿದ್ರೆ ಇನ್ನೆರಡು ಎಕರೆಯಲ್ಲಿ ತರಕಾರಿ ಬೆಳೆದಿದ್ದಾರೆ. ಅದರಲ್ಲಿ ಕೇವಲ 20 ಗುಂಟೆಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಟೊಮೆಟೊ ಬೆಳೆದಿದ್ದಾರೆ.

ವೈಜ್ಞಾನಿಕ ಕೃಷಿ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು 20 ಗುಂಟೆ ಜಮೀನಿನಲ್ಲಿ 3700 ಟೊಮೆಟೊ ಸಸಿ ನಾಟಿ ಮಾಡಿದ್ದರು. ಕಳೆದ 45 ದಿನಗಳಿಂದ ಟೊಮೆಟೊ ಕೋಯ್ಲು ಆರಂಭಿಸುತ್ತಿದ್ದಂತೆ ಈ ಕೆಂಪು ಸುಂದರಿಗೆ ಬಂಗಾರದ ಬೆಲೆ ಬಂದಿದೆ.

20 ಗುಂಟೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮೆಟೊ ಇಳುವರಿ ತಗೆದಿದ್ದಾನೆ. ಕೋಯ್ಲು ಮಾಡಿದ ಟೊಮೆಟೊವನ್ನು ಸಂಕೇಶ್ವರ ಪಟ್ಟಣದಲ್ಲಿರುವ ಎಪಿಎಂಸಿ ವರ್ತಕನೋರ್ವನಿಗೆ ರೆಗ್ಯುಲರ್ ಆಗಿ ಸರಬರಾಜು ಮಾಡಲು ಶುರು ಮಾಡಿದ್ದಾರೆ. ದಿನಕ್ಕೆ 20 ಕೆಜಿ ತೂಕದ ನೂರು ನೂರಿಪ್ಪತ್ತು ಕ್ಯಾರಿಬ್ಯಾಗ್ ಸರಬರಾಜು ಮಾಡುತ್ತ ಈವರೆಗೂ 11 ಲಕ್ಷ ರೂಪಾಯಿ ಆದಾಯ ಬಂದಿದೆ. ಟೊಮೆಟೊ ಬೆಳೆದು ಕಟಾವು ಸಾಗಾಟ ವೆಚ್ಚಕ್ಕೆ ಅಂತಾ ಎರಡು ಲಕ್ಷ ರೂಪಾಯಿ ಖರ್ಚಾಗಿದ್ದು ಬರೋಬ್ಬರಿ ಒಂಬತ್ತು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us