ಬೆಲೆ ಏರಿಕೆ ನಡುವೆ ಬಾಗಲಕೋಟೆಯಲ್ಲಿ ಕೆಂಪು ಮೆಣಸಿನಕಾಯಿಗೆ ಕಳ್ಳರ ಕಾಟ

ಬಾಗಲಕೋಟೆ ತಾಲೂಕಿನ ಮನ್ನಿಕಟ್ಟಿ, ಬೆನಕಟ್ಟಿ, ಬೇವೂರು, ಹಳ್ಳೂರು ಭಗವತಿ ಗ್ರಾಮದ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಜೋರಾಗಿದೆ. ಹಗಲು ರಾತ್ರಿಯೆನ್ನದೇ ಕಳ್ಳರು ರೈತರಿಲ್ಲದ ವೇಳೆ ಹೊಲಕ್ಕೆ ನುಗ್ಗಿ ಕ್ವಿಂಟಲ್ ಗಟ್ಟಲೇ ಮೆಣಸಿನಕಾಯಿಗಳನ್ನು ಕದ್ದೊಯ್ಯುತ್ತಿದ್ದಾರೆ. ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದ ಸಂದರ್ಭದಲ್ಲಿ ಕಳ್ಳರು ಮೆಣಸಿನಕಾಯಿ ಕಳ್ಳತನ ಮಾಡುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹಗಲು ರಾತ್ರಿಯೆನ್ನದೇ ಬೆಳೆ ಕಾಯುವ ಸ್ಥಿತಿ ಬಂದಿದೆ.

ಬೆಲೆ ಏರಿಕೆ ನಡುವೆ ಬಾಗಲಕೋಟೆಯಲ್ಲಿ ಕೆಂಪು ಮೆಣಸಿನಕಾಯಿಗೆ ಕಳ್ಳರ ಕಾಟ
ಬೆಲೆ ಏರಿಕೆ ನಡುವೆ ಬಾಗಲಕೋಟೆಯಲ್ಲಿ ಕೆಂಪು ಮೆಣಸಿನಕಾಯಿಗೆ ಕಳ್ಳರ ಕಾಟ
Edited By:

Updated on: Dec 19, 2023 | 2:47 PM

ಬಾಗಲಕೋಟೆ, ಡಿ.19: ಬರದ ನಡುವೆ ಬೆಳೆಗಳು ಹಾನಿಗೊಂಡು ದಾಸ್ತಾನು ಇಲ್ಲದ ಹಿನ್ನೆಲೆ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಳ್ಳರು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಕದಿಯುತ್ತಿದ್ದಾರೆ. ಟೊಮೆಟೋ, ಈರುಳ್ಳಿ ಬೆಳೆಗಳ ಬೆಲೆ ಏರಿಯಾಗಿದ್ದಾಗಲೂ ಈ ತರಕಾರಿಗಳು ಕಳ್ಳತನವಾಗುತ್ತಿದ್ದವು. ಇದೀಗ ಕೆಂಪು ಮೆಣಿಸಿನಕಾಯಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಬಾಗಲಕೋಟೆ (Bagalkot) ತಾಲೂಕಿನಲ್ಲಿ ಕಳ್ಳರ ಕಾಟ ಶುರುವಾಗಿದೆ.

ಮನ್ನಿಕಟ್ಟಿ, ಬೆನಕಟ್ಟಿ, ಬೇವೂರು, ಹಳ್ಳೂರು ಭಗವತಿ ಗ್ರಾಮದ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಜೋರಾಗಿದೆ. ಹಗಲು ರಾತ್ರಿಯೆನ್ನದೇ ಕಳ್ಳರು ರೈತರಿಲ್ಲದ ವೇಳೆ ಹೊಲಕ್ಕೆ ನುಗ್ಗಿ ಕ್ವಿಂಟಲ್ ಗಟ್ಟಲೇ ಮೆಣಸಿನಕಾಯಿಗಳನ್ನು ಕದ್ದೊಯ್ಯುತ್ತಿದ್ದಾರೆ. ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದ ಸಂದರ್ಭದಲ್ಲಿ ಕಳ್ಳರು ಮೆಣಸಿನಕಾಯಿ ಕಳ್ಳತನ ಮಾಡುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹಗಲು ರಾತ್ರಿಯೆನ್ನದೇ ಬೆಳೆ ಕಾಯುವ ಸ್ಥಿತಿ ಬಂದಿದೆ.

ಹೊನ್ನಾಕಟ್ಟಿ ಗ್ರಾಮದ ರೈತ ಹನುಮಂತಪ್ಪ ಗೌಡರ ಮನ್ನಿಕಟ್ಟಿ ವ್ಯಾಪ್ತಿಯಲ್ಲಿ ಇರುವ ತನ್ನ ಒಂದು ಎಕರೆ ಹೊಲ ಮತ್ತು ವರ್ಷಕ್ಕೆ 15 ಸಾವಿರದಂತೆ ಲಾವಣಿ ಮೇಲೆ ಪಡೆದ ಇನ್ನೊಂದು ಎಕರೆ ಹೊಲದಲ್ಲಿ ಕೆಂಪು ಮೆಣಸು ಕೃಷಿ ಮಾಡಿದ್ದಾರೆ. ಆದರೆ ಅಮವಾಸ್ಯೆ ದಿನ ಹೊಲಕ್ಕೆ ನುಗ್ಗಿದ ಕಳ್ಳರು ಎರಡು ಕ್ವಿಂಟಲ್​ನಷ್ಟು ಬೆಳೆ ಕದ್ದೊಯ್ದಿದ್ದಾರೆ. ಪರಿಣಾಮ ರೈತ ಹನುಮಂತಪ್ಪ ಅವರು ಒಂದು ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನ ಗಿಡಗಳನ್ನು ಬೆಳೆಯಲಾಗಿದೆ. ಆದರೆ ಮುಂಗಾರು ಹಿಂಗಾರು ಎರಡು ಮಳೆ ಕೈ ಕೊಟ್ಟಿದ್ದರಿಂದ ಪ್ರತಿಶತ 80 ರಷ್ಟು ಮೆಣಸಿನ ಗಿಡಗಳು ಒಣಗಿ ಹಾಳಾಗಿವೆ. ಕೆಲ ರೈತರು ಟ್ಯಾಂಕರ್ ಮೂಲಕ ನೀರುಣಿಸಿ ಮೆಣಸಿನ ಗಿಡಳನ್ನು ಮಗುವಿನಂತೆ ಜೋಪಾನ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಕೆಜಿಗೆ 300 ರೂ ಏರಿಕೆ ಬೆನ್ನಲೇ 6 ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ

ಸದ್ಯ ಇಳುವರಿಯಿಲ್ಲದ ಕಾರಣ ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದೆ. ಒಣಗಿದ ಕೆಂಪು ಮೆಣಸಿನಕಾಯಿ ಕ್ವಿಂಟಲ್​ಗೆ 60 ಸಾವಿರ ಬೆಲೆ ಬಂದಿದೆ. ಮೆಣಸಿನ ಕಾಯಿಗೆ ಚಿನ್ನದ ಬೆಲೆ ಬಂದಿದ್ದು ಕೆಂಪು ಸುಂದರಿ ಕೆಂಪು ಮೆಣಸಿನಕಾಯಿ ಕಳ್ಳರ ಕಣ್ಣು ಕುಕ್ಕುತ್ತಿದ್ದು, ಮೆಣಸಿನಕಾಯಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.

ರಾತ್ರಿ ವೇಳೆ ರೈತರ ಹೊಲಕ್ಕೆ ಕಳ್ಳರು ಎಂಟ್ರಿ ಕೊಡುತ್ತಿದ್ದಾರೆ. ನಾಲ್ಕೈದು ಜನರು ಸೇರಿ ಹೊಲಕ್ಕೆ ನುಗ್ಗಿ ಕ್ವಿಂಟಲ್​ಗಟ್ಟಲೇ ಮೆಣಸಿನಕಾಯಿ ಕದ್ದು ಪರಾರಿಯಾಗುತ್ತಿದ್ದಾರೆ. ಇದರಿಂದ ರಾತ್ರಿ ವೇಳೆ ಮಕ್ಕಳು ಹೊಲ ಕಾಯುವುದು, ಹಗಲಿನಲ್ಲಿ ಹಿರಿಯರು ಕಾಯುವ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಬರಗಾಲದಲ್ಲಿ ಅಲ್ಪ ಸ್ವಲ್ಪ ಬಂದ ಮೆಣಸನಿಕಾಯಿ ಬೆಳೆ ಕಳ್ಳರ ಪಾಲಾಗುತ್ತದೆ.

ಹೊಲಕ್ಕೆ ಎಂಟ್ರಿ ಕೊಡುವ ಕಳ್ಳರು ಒಂದು ಗಿಡದಲ್ಲಿ ಕೈಗೆ ಬಂದಷಟು ಕಿತ್ತುಕೊಂಡು ತಮ್ಮ ಚೀಲ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಕಳ್ಳರ ಹಾವಳಿಯಿಂದ ಬೇಸತ್ತ ರೈತರು, ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಪೊಲೀಸರು ಗಸ್ತು ತಿರುಗಬೇಕು. ಇಂತಹವರು ಎಲ್ಲೇ ಸಿಕ್ಕರೂ ಕಠಿಣ ಶಿಕ್ಷೆ ನೀಡಬೇಕು. ರೈತರು ಬೆಳೆಯುವ ಬೆಳೆಗಳಿಗೆ ರಕ್ಷಣೆ ನೀಡಬೇಕು ಅಂತಿದ್ದಾರೆ. ಜೊತೆಗೆ ಸರಕಾರ ನಮಗೆ ಪರಿಹಾರ ಕೊಡಬೇಕು ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us