ಹಟ್ಟಿ ಚಿನ್ನದ ಗಣಿ ನಿಗಮ ಮಂಡಳಿ ನೀಡಿದ್ದಕ್ಕೆ ಅಸಮಾಧಾನ; ಅಧಿಕಾರ ವಹಿಸಿಕೊಳ್ಳದ ಶಾಸಕ ಜೆ.ಟಿ.ಪಾಟೀಲ್

ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿದ್ದ ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆಟಿ ಪಾಟೀಲ್ ಅವರಿಗೆ ಹಟ್ಟಿ ಚಿನ್ನದ ಗಣಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಮುನಿಸು ಶಮನಗೊಳಿಸುವ ಯತ್ನ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಮಾಡಿದ್ದರು. ಆದರೆ, ಹಟ್ಟಿ ಚಿನ್ನದ ಗಣಿ ನಿಗಮ ನೀಡಿದ್ದಕ್ಕೆ ಜೆಟಿ ಪಾಟೀಲ್ ಅಸಮಾಧಾನಗೊಂಡಿದ್ದು, ಇದುರವರೆಗೆ ಅಧಿಕಾರ ಸ್ವೀಕರಿಸಿಲ್ಲ.

ಹಟ್ಟಿ ಚಿನ್ನದ ಗಣಿ ನಿಗಮ ಮಂಡಳಿ ನೀಡಿದ್ದಕ್ಕೆ ಅಸಮಾಧಾನ; ಅಧಿಕಾರ ವಹಿಸಿಕೊಳ್ಳದ ಶಾಸಕ ಜೆ.ಟಿ.ಪಾಟೀಲ್
ಹಟ್ಟಿ ಚಿನ್ನದ ಗಣಿ ನಿಗಮ ಮಂಡಳಿ ನೀಡಿದ್ದಕ್ಕೆ ಅಸಮಾಧಾನ; ಅಧಿಕಾರ ವಹಿಸಿಕೊಳ್ಳದ ಶಾಸಕ ಜೆ.ಟಿ.ಪಾಟೀಲ್
Updated By: Rakesh Nayak Manchi

Updated on: Feb 10, 2024 | 4:51 PM

ಬಾಗಲಕೋಟೆ, ಫೆ.10: ನಿಗಮ ಮಂಡಳಿ ಅಧಿಕಾರ ವಹಿಸಿಕೊಳ್ಳದೆ ಕಾಂಗ್ರೆಸ್ ಶಾಸಕ ಜೆ.ಟಿ.ಪಾಟೀಲ್ (JT Patil) ಅವರು ಹಟ್ಟಿ ಚಿನ್ನದ ಗಣಿ ನಿಗಮ (Hutti Gold Mines Corporation) ನೀಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿಗಮ ಮಂಡಳಿ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲು ತಟ್ಟಿಲ್ಲ. ನಾನಿನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಬೇಕಿದೆ. ಇಬ್ಬರು ನಾಯಕರನ್ನು ಭೇಟಿಯಾಗಿ ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮೊನ್ನೆ ದೆಹಲಿಯಲ್ಲಿ ಭೇಟಿಯಾಗಿದ್ದ ವೇಳೆ ನಿಮ್ಮ ಜೊತೆ ಸ್ವಲ್ಪ ಮಾತಾಡೋದು ಇದೆ, ನಂತರ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಾಯಕರಿಗೆ ಹೇಳಿದ್ದೇನೆ. ಅವರ ಜೊತೆ ಚರ್ಚೆ ಮಾಡಿದ ಮೇಲೆ ನಾನು ಅಧಿಕಾರ ಸ್ವೀಕಾರ ಮಾಡಬಹುದು. ಒಪ್ಪಿಗೆ ಇದಿಯೋ ಇಲ್ಲವೋ ಅನ್ನೋ ಪ್ರಶ್ನೆ ಇಲ್ಲ. ನಮ್ಮ ಮನಸ್ಸಿನಲ್ಲಿ ಕೆಲವು ವಿಷಯಗಳು ಇರುತ್ತವೆ. ಕೆಲವು ವಿಷಯಗಳನ್ನು ಚರ್ಚೆ ಮಾಡಬೇಕಾಗುತ್ತದೆ ಎಂದರು.

ಇದನ್ನೂ ಓದಿ: 4 ವರ್ಷದಿಂದ ಉದ್ಘಾಟನೆ ಭಾಗ್ಯ ಸಿಗದೇ ಅನಾಥವಾದ ಬಸವಣ್ಣನ ಪ್ರತಿಮೆ; ವೀರಶೈವ ಲಿಂಗಾಯತ ಮಹಾಸಭಾ ಅಸಮಾಧಾನ

ಈಗ ಅಸಮಾಧಾನ ಇದೆಯೇ ಅನ್ನೋದಕ್ಕೆ ಏನಿದೆ, ಸಂಪುರ ರಚನೆ ಆಗಿ ಹೋಗಿದೆ. ಬೋರ್ಡ್ ಕಾರ್ಪೊರೇಷನ್ ಸ್ಥಾನ ಹಂಚಿಕೆ ಮಾಡಿದ್ದಾರೆ. ಬೇಕಾದರೆ ಅಧಿಕಾರ ತೆಗೆದುಕೊಳ್ಳಬಹುದು, ಬೇಡವೆಂದರೆ ಬಿಡಬೇಕು. ನಿರೀಕ್ಷೆ ಇದರಲ್ಲಿ ಏನಿದೆ. ನಿಮಗೆ ಕೊಟ್ಟಿದ್ದನ್ನ ನನಗೆ ಕೊಡು ಅಂದರೆ ಕೊಡುತ್ತಾರಾ? ಕೇಳುವುದು ನಮ್ಮ ಧರ್ಮ ಅಲ್ಲ. ಕೆಲವರು ಕೇಳಬಹುದು. ಆದರೆ ನಾನಂತೂ ಯಾರ ಮನೆಗೂ ಹೋಗಿ ಬಾಗಿಲು ತಟ್ಟಿಲ್ಲ ಎಂದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಆಗಬೇಕು. ನನ್ನ ಅನಿಸಿಕೆ ಹಂಚಿಕೊಳ್ಳಬೇಕು. ಅಧಿಕಾರ ತೆಗೆದುಕೊಂಡ ನಂತರ ಅವರ ಸಹಾಯ ಸಹಕಾರ ಬೇಕಲ್ಲ. ಕೇವಲ ಟಿಎಡಿಎ ಸಲುವಾಗಿ ಅಧ್ಯಕ್ಷ ಆಗೋದು ಅರ್ಥ ಇಲ್ಲ. ಅವರು ಸಂಪೂರ್ಣ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಜೊತೆ ಇರುತ್ತೇವೆ ಅಂದರೆ ಮಾಡಬಹುದು. ಇದನ್ನು ನಾಯಕರ ಬಳಿ ಚರ್ಚೆ ಮಾಡಬೇಕು ಮತ್ತೇನಿಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ