Gruha Lakshmi: ಅರ್ಜಿ ಸಲ್ಲಿಸಲು ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದು

| Updated By: Rakesh Nayak Manchi

Updated on: Jul 22, 2023 | 9:29 PM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಹಣ ಪಡೆಯಬಾರದು ಎಂಬ ನಿಯಮವಿದೆ. ಅದಾಗ್ಯೂ, ಹಣ ವಸೂಲಿ ಮಾಡಿದ ಬಾಗಲಕೋಟೆಯ ಗ್ರಾಮ ಒನ್ ಕೇಂದ್ರಗಳ ಲಾಗಿನ್ ಐಡಿ ರದ್ದುಗೊಳಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ.

Gruha Lakshmi: ಅರ್ಜಿ ಸಲ್ಲಿಸಲು ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದು
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಬಾಗಲಕೋಟೆಯ ಗ್ರಾಮ ಒನ್ ಕೇಂದ್ರಗಳ ಸಿಬ್ಬಂದಿ ಲಾಗಿನ್ ಐಡಿ ರದ್ದು (ಸಾಂದರ್ಭಿಕ ಚಿತ್ರ)
Follow us on

ಬಾಗಲಕೋಟೆ, ಜುಲೈ 22: ಗೃಹಲಕ್ಷ್ಮೀ ಯೋಜನೆಗೆ (Gruha Lakshmi) ಅರ್ಜಿ ಸಲ್ಲಿಸಲು ಹಣ ಪಡೆದ ಹಿನ್ನೆಲೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಗ್ರಾಮ ಒನ್ ಸಿಬ್ಬಂದಿ ದಾನಯ್ಯ ಮಠಪತಿ ಅವರ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬಾಗಲಕೋಟೆ (Bagalkot) ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ.

ಅಲ್ಲದೆ, ರಬಕವಿಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಸಿದ್ದಪ್ಪ ಪೂಜಾರಿ ಅವರ ಐಡಿಯನ್ನೂ ರದ್ದುಗೊಳಿಸಲಾಗಿದೆ. ಅರ್ಜಿ ಹಾಕಿದ ನಂತರ ಹಣ ಕೇಳಿದ್ದಕ್ಕೆ ಸಿದ್ದಪ್ಪ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧಾರಿಸಿ ಬಾಗಲಕೋಟೆ ಡಿಸಿ ಕೆ.ಎಂ.ಜಾನಕಿ ಅವರು ಕ್ರಮಕ್ಕೆ ಸೂಚಿಸಿದ್ದರು.

ಇದನ್ನೂ ಓದಿ: Gruha Lakshmi Scheme: ಯಜಮಾನಿಗೆ 2000 ರೂ. ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಒಮ್ಮೆ ನೋಡಿ

ಹಣ ವಸೂಲಿ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ

ವಿಜಯಪುರ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಆರೋಪ ವಿಜಯಪುರ ಜಿಲ್ಲೆಯಲ್ಲೂ ಕೇಳಿಬಂದಿದೆ. ಬಬಲೇಶ್ವರ ತಾಲೂಕಿನ ಶಿಬರೂರು ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವಾಗ 50 ರಿಂದ 100 ರೂಪಾಯಿ ವಸೂಲಿ‌ ಮಾಡುತ್ತಿರುವ ಆರೋಪ ಮಾಡಲಾಗಿದೆ. ಕೇಂದ್ರದ ಶ್ರೀಪತಿ ಹಾಗೂ ಇತರರು ಹಣ ವಸೂಲಿ ಮಾಡುತ್ತಿರುವ ‌ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಹಣ ವಸೂಲಿ ಮಾಡುತ್ತರುವ ಸಿಬ್ಬಂದಿಗಳನ್ನು ತಡೆದ ಗ್ರಾಮ ಪಂಚಾಯತ್ ಅಧ್ಯಕ್ಷ ರವಿಕುಮಾರ್ ಜಮಾದಾರ ಹಾಗೂ ಸದಸ್ಯ ಭೀಮಪ್ಪ ಅವರು ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅರ್ಜಿ ಸಲ್ಲಿಸಲು ಹಣ ಪಡೆಯಬಾರದೆಂದು ಸ್ಥಳಿಯರು ಕೂಡ ಎಚ್ಚರಿಕೆ‌ ನೀಡಿದ್ದಾರೆ.

ಪೊನ್ನಂಪೇಟೆ ಗ್ರಾಮ ಒನ್ ಕೇಂದ್ರದ ಪರವಾನಗಿ ಅಮಾನತು

ಮಡಿಕೇರಿ: ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಹಣ ವಸೂಲಿ ಮಾಡಿದ ಆರೋಪ ಸಂಬಂಧ ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಒನ್ ಕೇಂದ್ರದ ಪರವಾನಗಿ ಅಮಾನತು ಮಾಡಿ ಎಸಿ ಯತೀಶ್ ಉಲ್ಲಾಳ್ ಆದೇಶಿಸಿದ್ದಾರೆ. ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ವ್ಯಕ್ತಿಯೊಬ್ಬರಿಂದ 100 ರೂ. ಪಡೆದಿದ್ದರು. ಅಲ್ಲದೆ, ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರಲಾರಂಭಿಸಿದ ಹಿನ್ನೆಲೆ ಕೇಂದ್ರದ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ವರದಿ: ಅಶೋಕ್, ವಿಜಯಪುರ, ಗೋಪಾಲ ಸೋಮಯ್ಯ ಮಡಿಕೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Sat, 22 July 23