ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎಸ್​ಎಸ್​ಎಲ್​ಸಿ ಟಾಪರ್ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ

ವಿದ್ಯಾರ್ಥಿನಿಯು  625ಕ್ಕೆ 625 ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಸಂತಸದಿಂದ ಅಭಿನಂದಿಸಿದ ಬಾಗಲಕೋಟೆ ಶಾಸಕ  ವೀರಣ್ಣ ಚರಂತಿಮಠ, ಗಂಗಮ್ಮನಿಗೆ ಪಿಯುಸಿ, ಪದವಿ ಎಲ್ಲಾ ಶಿಕ್ಷಣ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ.

ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎಸ್​ಎಸ್​ಎಲ್​ಸಿ  ಟಾಪರ್ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ
ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ
Edited By:

Updated on: Aug 10, 2021 | 12:59 PM

ಬಾಗಲಕೋಟೆ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ತಾಲ್ಲೂಕಿನ ಮುಖಚಂಡಿ ತಾಂಡಾದ ದುರ್ಗಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ ಅವರಿಗೆ ಹೃದಯ ಸಂಬಂಧಿ ಇರುವ ಕಾಯಿಲೆ ದೃಢಪಟ್ಟ ಹಿನ್ನೆಲೆಯಲ್ಲಿ  ವಿದ್ಯಾರ್ಥಿನಿ ಯೋಗಕ್ಷೇಮ ವಿಚಾರಿಸಲು ಬಾಗಲಕೋಟೆ ಶಾಸಕ  ವೀರಣ್ಣ ಚರಂತಿಮಠ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ್ದಾರೆ. 

ವಿದ್ಯಾರ್ಥಿನಿಯು  625ಕ್ಕೆ 625 ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಸಂತಸದಿಂದ ಅಭಿನಂದಿಸಿದ ಬಾಗಲಕೋಟೆ ಶಾಸಕ  ವೀರಣ್ಣ ಚರಂತಿಮಠ, ಗಂಗಮ್ಮನಿಗೆ ಪಿಯುಸಿ, ಪದವಿ ಎಲ್ಲಾ ಶಿಕ್ಷಣ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ.

ಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣದ ಭರವಸೆ ನೀಡಿದ್ದಾರೆ. ತಮ್ಮ ಸಂಸ್ಥೆ ವೀರಣ್ಣ ಚರಂತಿಮಠ ಬಸವೇಶ್ವರ ವಿದ್ಯಾವರ್ಧಕ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಗಂಗಮ್ಮನಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನ ನೀಡಿದ್ದಾರೆ.

ಎಸ್​ಎಸ್​ಎಲ್​ಸಿ ಟಾಪರ್ ವಿದ್ಯಾರ್ಥಿನಿ ಮನೆಗೆ ಬಾಗಲಕೋಟೆ ಡಿಹೆಚ್​ಓ ಭೇಟಿ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಸೂಚನೆ ಮೇರೆಗೆ ಬಾಗಲಕೋಟೆ ಡಿಹೆಚ್​ಓ ಬಾಲಕಿ ಗಂಗಮ್ಮನ ಮನೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಬಾಲಕಿಯ ವೈದ್ಯಕೀಯ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಬಾಲಕಿಗೆ ಹೃದಯಕ್ಕೆ ಬಂಧಿಸಿದ ವಿಎಸ್​ಡಿ ಎನ್ನುವ ಕಾಯಿಲೆ ಇದೆ. ಈಗಾಗಲೇ ಅವರು ಬೆಂಗಳೂರಿನಲ್ಲಿ ತೋರಿಸಿದ್ದಾರೆ. ಈಗ ಸಚಿವರ ಆದೇಶದ ಪ್ರಕಾರ ಬಾಲಕಿ ಗಂಗಮ್ಮ ಹುಡೇದ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಡಿಎಚ್​ಓ ಅನಂತ ದೇಸಾಯಿ ಹೇಳಿಕೆ ನೀಡಿದ್ದಾರೆ.

ನೋವು ಮೆಟ್ಟಿನಿಂತು ಮಹತ್ವದ ಸಾಧನೆ ಮೆರೆದ ಬಾಲಕಿ
ಸಾಧನೆಗೆ ಬಡತನ, ಸೌಲಭ್ಯಗಳ ಕೊರತೆ ಮೊದಲಾದ ಸಂಗತಿಗಳು ಅಡ್ಡಿಯಾಗಲಾರವು ಅಂತ ಈ 15ರ ಪುಟ್ಟ ಬಾಲೆ ಸಾಬೀತು ಮಾಡಿದ್ದಾಳೆ. ನಾವು ಮಾತಾಡುತ್ತಿರುವ ಬಾಲಕಿಯ ಹೆಸರು ಗಂಗಮ್ಮ. ಅವಳ ಸಾಧನೆ ಅಸಾಧಾರಣವಾದದ್ದು. ಶಾಲೆಗಳು ಮುಚ್ಚಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳು ಓದಿನೆಡೆ ಗಮನ ಹರಿಸುತ್ತಿಲ್ಲ, ಈ ವರ್ಷ ಅವರು ಪಾಸಾಗೋದೇ ಕಷ್ಟ ಎಂದು ಸಾವಿರಾರು ಪೋಷಕರು ದೂರುತ್ತಿದ್ದಾರೆ. ಆದರೆ ಬಾಗಲಕೋಟೆ ತಾಲ್ಲೂಕಿನ ಗಂಗಮ್ಮ ಎಲ್ಲ ಕೊರತೆಗಳನ್ನು ಮೆಟ್ಟಿ ನಿಂತು ತನ್ನ ತಂದೆ-ತಾಯಿಗಳು ನಿರಂತರ ಖುಷಿ ಪಡುವ, ತಮ್ಮ ಬದುಕಿನುದ್ದಕ್ಕೂ ಹೆಮ್ಮೆಯಿಂದ ಬೀಗುವ ಸಾಧನೆ ಮಾಡಿದ್ದಾಳೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21 ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಗಂಗಮ್ಮ ಪಡೆದಿರುವ ಅಂಕಗಳು ಎಷ್ಟು ಗೊತ್ತಾ? 625/625! ಶತ ಪ್ರತಿಶತ, ಸೆಂಟ್ ಪರ್ಸೆಂಟ್! ಅವಳ ಸಾಧನೆ ಯಾಕೆ ಮಹತ್ಪಪೂರ್ಣ ಮತ್ತು ಅಸಾಮಾನ್ಯವೆನಿಸುತ್ತದೆ ಎಂದರೆ, ಆಕೆ ಉಳಿದವಂತೆ ಆರೋಗ್ಯ ಮತ್ತು ಸಾಮಾನ್ಯವಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಬಂದಿಲ್ಲ. ಗಂಗಮ್ಮ ಹೃದ್ರೋಗದಿಂದ ಬಳಲುತ್ತಿದ್ದಾಳೆ ಮತ್ತು ಅದರಿಂದ ಸದಾ ತೊಂದರೆ ಅನುಭವಿಸುತ್ತಲೇ ಇರುತ್ತಾಳೆ. ಈ ಪೀಡೆ ಅವಳನ್ನು ಪರೀಕ್ಷೆಯ ಸಂದರ್ಭದಲ್ಲೂ ಕಾಡಿತು.

ಇದನ್ನೂ ಓದಿ:

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ

ಮುಖಚಂಡಿಯ ಎಸ್​ಎಸ್​ಎಲ್​ಸಿ ಸಾಧಕಿಗೆ ಹೃದಯ ಕಾಯಿಲೆ: ಸಚಿವ ಗೋವಿಂದ ಕಾರಜೋಳ ಸ್ಪಂದನೆ

Published On - 11:26 am, Tue, 10 August 21

Web contact

TV9 Kannada

Read More
Follow Us