ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ

Edited By:

Updated on: Jul 23, 2026 | 11:18 AM

ಉಪಲೋಕಾಯುಕ್ತ ಬಿ. ವೀರಪ್ಪ ಅವರು ಬಾಗಲಕೋಟೆಯ ಬೇಕರಿಗಳಿಗೆ ದಿಢೀರ್ ಭೇಟಿ ನೀಡಿ ಆಹಾರ ತಿನಿಸುಗಳ ಪರಿಶೀಲನೆ ನಡೆಸಿದರು. ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರ, ಎಲ್‌ಪಿಜಿ ಸಿಲಿಂಡರ್ ಸುರಕ್ಷತೆ, ದಾಸ್ತಾನು ಮತ್ತು ಅವಧಿ ಮೀರಿದ ಉತ್ಪನ್ನಗಳ ಬಗ್ಗೆ ಪ್ರಶ್ನಿಸಿ, ಸುರಕ್ಷತಾ ಲೋಪಗಳಿಗಾಗಿ ಶೋ-ಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು.

ಬೆಂಗಳೂರು, ಜು.23: ಉಪಲೋಕಾಯುಕ್ತ ಬಿ. ವೀರಪ್ಪ ಅವರು ಬಾಗಲಕೋಟೆಗೆ ಭೇಟಿ ನೀಡಿ ಬೆಳ್ಳಂಬೆಳಗ್ಗೆ ವಿವಿಧ ಬೇಕರಿಗಳಿಗೆ ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಆಹಾರ ತಿನಿಸುಗಳ ಗುಣಮಟ್ಟ, ಸುರಕ್ಷತೆ ಹಾಗೂ ನೈರ್ಮಲ್ಯದ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಯಿತು. ತಪಾಸಣೆಯ ಸಂದರ್ಭದಲ್ಲಿ, ಬೇಕರಿ ಮಾಲೀಕರಿಗೆ ಎಫ್‌ಎಸ್‌ಎಸ್‌ಎಐ (FSSAI) ಪ್ರಮಾಣಪತ್ರದ ಲಭ್ಯತೆ ಕುರಿತು ಉಪಲೋಕಾಯುಕ್ತರು ಪ್ರಶ್ನಿಸಿದರು. ಅಲ್ಲದೆ, ಬೇಕರಿಯ ಒಳಗಿದ್ದ ಎಲ್‌ಪಿಜಿ ಸಿಲಿಂಡರ್ ಸುರಕ್ಷಿತವಲ್ಲ ಎಂದು ಗಮನಿಸಿ, “ಸಿಲಿಂಡರ್ ಅನ್ನು ಹೊರಗೆ ಇಡಿ, ಇದು ಅಪಾಯಕಾರಿ. ಅಗತ್ಯವಿದ್ದರೆ ಒಳಗೆ ದೀಪ ಇಟ್ಟುಕೊಳ್ಳಿ, ಆದರೆ ಸಿಲಿಂಡರ್ ಅನ್ನು ಹೊರಗೆ ಕಂಬಿ ಹಾಕಿ ಸುರಕ್ಷಿತವಾಗಿಡಿ” ಎಂದು ಸೂಚಿಸಿದರು. ಸಿಲಿಂಡರ್‌ನಿಂದ ಪೈಪ್ ಅನ್ನು ಸರಿಯಾಗಿ ಅಳವಡಿಸುವಂತೆ ಸಲಹೆ ನೀಡಿದರು. ದಾಸ್ತಾನು ಕುರಿತು ಪರಿಶೀಲನೆ ನಡೆಸಿದಾಗ, “ಇದು ಹೋಲ್ ಸೇಲ್ ದಾಸ್ತಾನೇ? ನಿಮ್ಮದೇ ದಾಸ್ತಾನೇ?” ಎಂದು ಕೇಳಿದರು. ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ ಅವರು, “ಪ್ರತಿದಿನ ಹೊಸ ಉತ್ಪನ್ನಗಳನ್ನು ಇರಿಸಿ” ಎಂದು ತಿಳಿಸಿದರು. ಉಪಯೋಗಿಸುತ್ತಿರುವ ಎಣ್ಣೆಯು ತಾಜಾ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಲೋಪಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಶೋ-ಕಾಸ್ ನೋಟಿಸ್ ನೀಡಲು ಉಪಲೋಕಾಯುಕ್ತ ಬಿ. ವೀರಪ್ಪ ಆದೇಶಿಸಿದರು. ಈ ತಪಾಸಣೆಯು ಗ್ರಾಹಕರಿಗೆ ಸುರಕ್ಷಿತ ಆಹಾರ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us