AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐವರು ಬಾಣಂತಿಯರು ಸಾವು: ಉಸ್ತುವಾರಿ ಸಚಿವ ಜಮೀರ್ ವಿರುದ್ಧ ಸ್ಥಳೀಯರ ಆಕ್ರೋಶ

ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳಿಗೆ ಆದೇನಾಗಿದೆಯೋ ಗೊತ್ತಿಲ್ಲ. ಬಾಣಂತಿಯರ ಸರಣಿ ಸಾವುಗಳಿಗೆ ಕಾರಣವಾಗುತ್ತಿದೆ. ಕಳೆದ ಒಂದ ವಾರದ ಅಂತರದಲ್ಲಷ್ಟೇ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸರಣಿ ಸಾವನ್ನಪ್ಪಿದ್ದರೂ, ಈ ಘಟನೆ ಮಾಸುವ ಮುನ್ನವೇ ಬುಧವಾರ ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಓರ್ವ ಬಾಣಂತಿ ಸಾವಾಗಿದೆ. ಬದುಕಿ ಬಾಳ ಬೇಕಿದ್ದ ಬಾಣಂತಿಯರ ಸರಣಿ ಸಾವು, ಇಡೀ ಬಳ್ಳಾರಿ ಜಿಲ್ಲೆಯನ್ನ ಬೆಚ್ಚಿ ಬಿಳಿಸಿದೆ. ವೈದ್ಯರ ಎಡವಟ್ಟಿನ ಆರೋಪ ಕೇಳಿಬಂದಿದ್ದು, ಆಕ್ರೋಶವೂ ವ್ಯಕ್ತವಾಗುತ್ತಿದೆ.

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐವರು ಬಾಣಂತಿಯರು ಸಾವು: ಉಸ್ತುವಾರಿ ಸಚಿವ ಜಮೀರ್ ವಿರುದ್ಧ ಸ್ಥಳೀಯರ ಆಕ್ರೋಶ
ಬಿಮ್ಸ್ ಆಸ್ಪತ್ರೆ
ವಿನಾಯಕ ಬಡಿಗೇರ್​
| Updated By: Ganapathi Sharma|

Updated on: Nov 28, 2024 | 9:27 AM

Share

ಬಳ್ಳಾರಿ, ನವೆಂಬರ್ 28: ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು ಮೃತಪಟ್ಟ ಸಂಬಂಧ ಇದೀಗ ಜಿಲ್ಲೆಯಲ್ಲಿ ಆಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾದರೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಮೃತರ ಪೈಕಿ ನಾಲ್ವರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿಸಿಕೊಂಡಿದ್ದರು.

ಏತನ್ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಣಂತಿಯರ ಸರಣಿ ಸಾವಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ವದ್ಯರು, ಬಾಣಂತಿಯರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಅದರೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚರಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಬಾಣಂತಿಯರ ಸಾವಿನ ಕೂಪವಾದ ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳು

ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳು ಅಕ್ಷರಶಃ ಬಾಣಂತಿಯರ ಸಾವಿನ ಕೂಪವಾಗಿವೆ. ಒಂದು ವಾರದ ಅಂತರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಬುಧವಾರ ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೆ ಓರ್ವ ಬಾಣಂತಿ ಸಾವನ್ನಪ್ಪಿದ್ದಾಳೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿಎಸ್‌ಪುರ ಗ್ರಾಮದ ಮಹಾಲಕ್ಷ್ಮಿ (20) ಎಂಬ ಗರ್ಭಿಣಿ, ರವಿವಾರ ಬಳ್ಳಾರಿಯ ಬಿಮ್ಸ್‌ ಆಸ್ಪತ್ರೆಗೆ ಹೆರಿಗೆ‌ಗೆ ದಾಖಲಾಗಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿಯೇ ಮಹಾಲಕ್ಷ್ಮಿ‌ಗೆ ನಾರ್ಮಲ್ ಹೆರಿಗೆ ಮಾಡಲಾಗಿತ್ತು. ಆದರೆ ಹೆರಿಗೆ ಬಳಿಕ ತೀವ್ರ ರಕ್ತ ಸ್ರಾವ ಹಾಗೂ ನಂಜಾಗಿ ಬಾಣಂತಿ‌ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಪೋಷಕರು ಆರೋಪ ಮಾಡಿದರೆ, ಇತ್ತ ತಾಯಿ ಕಳೆದುಕೊಂಡ ಮಗು ಮುಖ‌ನೋಡಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೆರಿಗೆ ವೇಳೆ ಏನೋ ವ್ಯತ್ಯಾಸವಾಗಿದೆ, ಇದರಿಂದ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಅಂತಾ ಒತ್ತಾಯಿಸಿದ್ದಾರೆ.

ಬಿಮ್ಸ್ ಆಡಳಿತ ಹೇಳಿದ್ದೇನು?

ಬಾಣಂತಿ ಮಹಾಲಕ್ಷ್ಮಿ ಸಾವಿನ ಬಗ್ಗೆ ಬಿಮ್ಸ್ ನಿರ್ದೇಶಕ ಡಾ. ಗಂಗಾಧರ್‌ಗೌಡ ಸ್ಪಷ್ಟನೆ ನೀಡಿದ್ದು, ಮಹಾಲಕ್ಷ್ಮಿ‌ಗೆ ಅನೀಮಿಯಾ ಇತ್ತು. ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆದು ಬಳಿಕ ಇಲ್ಲಿಗೆ ಬಂದಿದ್ದಾರೆ. ಬರುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ನಾವು ಹೆರಿಗೆ ಮಾಡುವ ಮೊದಲೇ ತಿಳಿಸಿದ್ದೆವು ತೊಂದರೆ ಇದೆ ಎಂಬುದಾಗಿ. ಎಲ್ಲ ಪ್ರಯತ್ನ ಮಾಡಿದ್ದೇವೆ. ಕೆಮ್ಮು ಹಾಗೂ ಬೇರೆ ಬೇರೆ ಕಾಯಿಲೆಯಿಂದಾಗಿ ಮಹಾಲಕ್ಷ್ಮಿ ಸಾವಾಗಿದೆ ಎಂದಿದ್ದಾರೆ.

ಆದರೆ, ಪೋಷಕರು ಮಾತ್ರ ಮಹಾಲಕ್ಷ್ಮಿ ಆರೋಗ್ಯವಾಗಿಯೇ ಇದ್ದಳು. ಮೊದಲೆಲ್ಲ ನಾವು ಆಸ್ಪತ್ರೆಗೆ ತೋರಿಸಿದ್ದೇವೆ, ಎಲ್ಲವೂ ನಾರ್ಮಲ್ ಇತ್ತು. ಹೆರಿಗೆ ಬಳಿಕ ತೀವ್ರ ರಕ್ತ ಸ್ರಾವ ಆಗಿದೆ. 18 ಬಾಟಲ್ ರಕ್ತ ಕೊಡಲಾಗಿದೆ. ಇದೆಲ್ಲ ನೋಡಿದರೆ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

Ballari, BIMS Hospital: Five woman died after giving birth to child in government hospital in 15 days

ಮೃತರ ಕುಟುಂಬದವರ ಆಕ್ರಂದನ

ಇನ್ನು ವಾರದ ಅಂತರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಹೀಗೆ ವೈದ್ಯರ ಎಡವಟ್ಟಿಗೆ ನಾಲ್ವರು ಬಾಣಂತಿಯರ ಸಾವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ನ.‌ 9 ನೇ ತಾರೀಖು 14 ಮಹಿಳೆಯರಿಗೆ ಸಿಸರಿನ್‌ ಆಗಿತ್ತು ಅದರಲ್ಲಿ ಏಳು ಬಾಣಂತಿಯರ ಆರೋಗ್ಯ ವ್ಯತ್ಯಾಸ ಆಗಿದ್ದು, ವಾರದ ಅಂತರದಲ್ಲಿ ನಾಲ್ವರು ಸಾವನ್ನಪಿದ್ದಾರೆ. ನಂದಿನಿ, ಲಲಿತಮ್ಮ, ರೋಜಮ್ಮ, ಮುಸ್ಕಾನ್ ಈ ನಾಲ್ವರು ಬಾಣಂತಿಯರ ಸಾವಾಗಿದೆ. ಈ ಘಟನೆ ಮಾಸುವ ಮುನ್ನವೇ, ಈ ರೀತಿ ಬಿಮ್ಸ್‌ನಲ್ಲಿ ಮಹಾಲಕ್ಷ್ಮಿ ಬಾಣಂತಿ ಸಾವಾಗಿದೆ.

ಇದನ್ನೂ ಓದಿ: ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ನಾಗೇಂದ್ರ ಅನ್ನುತ್ತಿದ್ದಂತೆ ಜನ ‘ಮಿನಿಸ್ಟ್ರು ನಾಗೇಂದ್ರ’ ಎಂದರು!

ಒಟ್ಟಿನಲ್ಲಿ ಗಣಿನಾಡು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳು ಅಕ್ಷರಶಃ ಬಾಣಂತಿ ಸಾವಿನ ಕೂಪಗಳಾಗಿವೆ. ಬಾಣಂತಿಯರ ಮರಣ ಮೃದಂಗ ಆಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಸರಿಯಾದ ರೀತಿ ತನಿಖೆ ಮಾಡಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ