ಜೈ ಶ್ರೀರಾಮ್​ ಎಂದಿದ್ದಕ್ಕೆ ಹಲ್ಲೆ​​: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು

ನಾಡಿನೆಲ್ಲೆಡೆ ನಿನ್ನೆ ದಶರಥಸುತನ ಗುಣಗಾನ ಮಾಡಲಾಗಿದೆ. ಶ್ರೀರಾಮನವಮಿಯ ಸಂಭ್ರಮ ಮನೆ ಮಾಡಿತ್ತು. ಆದರೆ ಇದರ ಮಧ್ಯೆ ಬೆಂಗಳೂರಿನಲ್ಲಿ ರಾಮನವಮಿ ಮುಗಿಸಿ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಕೆಲ ಅನ್ಯಕೋಮಿನ ಯುವಕರು ಪುಂಡಾಟ ಮೆರೆದಿದ್ದರು. ಸದ್ಯ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸರಿಂದ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.

ಜೈ ಶ್ರೀರಾಮ್​ ಎಂದಿದ್ದಕ್ಕೆ ಹಲ್ಲೆ​​: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು
ಜೈ ಶ್ರೀರಾಮ್​ ಎಂದಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ
Edited By:

Updated on: Apr 18, 2024 | 10:41 AM

ಬೆಂಗಳೂರು, ಏಪ್ರಿಲ್​ 18: ನಗದರಲ್ಲಿ ಜೈಶ್ರೀರಾಮ್‌ (Jai Sriram) ಎಂದಿದ್ದಕ್ಕೆ ಹಲ್ಲೆ ಮಾಡಿದ ಕೇಸ್​ಗೆ ಬಂಧಿಸಿದಂತೆ ಈಗಾಗಲೇ ಪೊಲೀಸರು (Police) ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ನಿನ್ನೆ ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಭೇಟಿ ನೀಡಿದ್ದು, ನಾಲ್ವರು ಆರೋಪಿಗಳ ವಿಚಾರಣೆ ಮಾಡಿದ್ದಾರೆ. ಯಾವುದೇ ಪ್ರೀಪ್ಲ್ಯಾನ್​ ಕೂಡ ಇರಲಿಲ್ಲ. ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.

ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೈಕ್​​ನಲ್ಲಿ ಬರುತ್ತಿದ್ದೆವು. ಎಂಎಸ್ ಪಾಳ್ಯ ರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಲ್ಲಿ 3-4 ಯುವಕರು ಬಂದು ನಮ್ಮ ಬಳಿ ನಿಲ್ಲಿಸಿದರು. ಆಗ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತಾ ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಕೂಗಿ ಅಂತಾ ಹೇಳಿದರು. ಅದಕ್ಕೆ ನಾವು ನೀವೇ ಅಲ್ಲಾಹು ಅಕ್ಬರ್‌ ಅಂತಾ ಕೂಗಿ ಎಂದೆವು. ನಾವು ಯಾಕೆ ಕೂಗಬೇಕು ಅಂತಾ ಮಾತಿಗೆ ಮಾತು ಬೆಳೆಯಿತು. ಆಗ ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ ಸರ್​​. ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಹಳೇ ಕೇಸ್ ಇರುವ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ: ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ: ಕಾರಿನಲ್ಲಿ ಹೋಗ್ತಿದ್ದವರನ್ನ ಅಡ್ಡಗಟ್ಟಿದ್ದ ಯುವಕರು ಅಂದರ್

ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ದು, ನಾಲ್ವರ ಪೈಕಿ ಇಬ್ಬರು ಅಪ್ರಾಪ್ತರು ಮದ್ಯ ಸೇವಿಸಿರುವುದು ದೃಢವಾಗಿದೆ. ಗಾಂಜಾ ಸೇವನೆ ಬಗ್ಗೆ ಯಾವುದೇ ವರದಿ ಬಂದಿಲ್ಲ. ಇನ್ನು ವಿದ್ಯಾರಣ್ಯಪುರ ಪೊಲೀಸ್ ಠಾಣೆ ಎದುರು ಬಿಗಿ ಭದ್ರತೆ ಒದಗಿಸಲಾಗಿದ್ದು, ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿ 30ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿದ್ದು

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್​ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ, ಪ್ರಮುಖ ಆರೋಪಿ ಫರ್ಮಾನ್. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಇನ್ನೂ ಯಾರಾದ್ರು ಭಾಗಿಯಾಗಿದ್ದಾರಾ ಅಂತಾ ಪರಿಶೀಲಿಸಲಾಗುತ್ತಿದೆ. ಆರೋಪಿಗಳು ರಸ್ತೆಯಲ್ಲಿ ಹೋಗುವಾಗ ಕಾರನ್ನು ಗಮನಿಸಿದ್ದಾರೆ. ಬಾವುಟ ಹಿಡಿದು ಹೋಗ್ತಿರೋದನ್ನು ನೋಡಿ ವಾಪಸ್ ಬಂದಿದ್ದಾರೆ. ಬಳಿಕ ಕಾರು ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಲ್ಲೆಗೊಳಗಾದ ಯುವಕರ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಭೇಟಿ

ಪ್ರಕರಣದಲ್ಲಿ ಹಲ್ಲೆಗೊಳಗಾದ ಪವನ್, ವಿನಾಯಕ್, ರಾಹುಲ್ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಕಾರಿನಲ್ಲಿ ಹೋಗುತ್ತಿದ್ದಾಗ ಮೂವರನ್ನೂ ತಡೆದು ಹಲ್ಲೆ ನಡೆಸಿದ್ದಾರೆ. ಯುವಕರ ಮೇಲಿನ ಹಲ್ಲೆ ಖಂಡಿಸುತ್ತೇನೆ. ಶ್ರೀರಾಮನವಮಿ ಇಡೀ ದೇಶದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಹಿಂದೂ ಯುವಕರು ಬೇರೆ ಬೇರೆ ರೀತಿಯಲ್ಲಿ ಆಚರಣೆ ಮಾಡ್ತಾರೆ. ಪೂಜೆ ಹಾಗೂ ಮೆರವಣಿಗೆ ಮೂಲಕ ಶ್ರೀರಾಮನವಮಿ ಆಚರಿಸುತ್ತಾರೆ. ಹಲ್ಲೆಗೊಳಗಾದವರು ಭಗವಾಧ್ವಜ ಹಿಡಿದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಮನವಮಿ ಮುಗಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಓನ್ಲೀ ಅಲ್ಲಾ ಹು ಅಕ್ಬರ್ ಎಂದ ಅನ್ಯಕೋಮಿನ ಯುವಕರು

ಹಲ್ಲೆಗೊಳಗಾದ ಯುವಕರು ಯಾವುದೇ ಘೋಷಣೆಗಳನ್ನ ಕೂಗಿಲ್ಲ. ಚುನಾವಣೆ ವೇಳೆ ಗಲಭೆ ಎಬ್ಬಿಸಿ ಮತ್ತಷ್ಟು ತೊಂದರೆಗೆ ಪ್ರಯತ್ನ ಮಾಡಲಾಗಿದೆ. ಎಂ.ಎಸ್.ಪಾಳ್ಯದ ಕಾಂಗ್ರೆಸ್​ ಮುಖಂಡರ ಕುಮ್ಮಕ್ಕಿನಿಂದ ನಡೆದಿದ್ದರೆ ಖಂಡಿತ ನಾವು ಸುಮ್ಮನೆ ಇರುವುದಿಲ್ಲ, ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

BJP ಮುಖಂಡರಿಂದ ದೂರು

ಪ್ರಕರಣ ವಿಚಾರವಾಗಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್​ಗೆ BJP ಮುಖಂಡರು ದೂರು ನೀಡಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಎದುರು ಧರಣಿ ಮಾಡಲಾಗಿದೆ. ಟಿವಿ9ಗೆ ಆರೋಪಿ ಸಮೀರ್​ ತಂದೆ ಆಯೂಬ್​ ಹೇಳಿಕೆ ನೀಡಿದ್ದು, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನನ್ನ ಮಗ ಎಲ್ಲೂ ಹೋಗಿರಲಿಲ್ಲ ಮನೆಯಲ್ಲಿಯೇ ಇದ್ದ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:39 am, Thu, 18 April 24

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us