Bengaluru Water Crisis: ಕಾವೇರಿ ಐದನೇ ಹಂತದ ನೀರು ಬಳಕೆಗೆ ಟ್ಯಾಂಕರ್ಗಳಿಗೆ ಅನುಮತಿ, ಜಲ ಮಂಡಳಿ ಚಿಂತನೆ
ಕಾವೇರಿ ಐದನೇ ಹಂತದ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದಾಗ್ಯೂ ತಾತಗುಣಿ ಅಥವಾ ಹಾರೋಹಳ್ಳಿ ನಿಲ್ದಾಣದವರೆಗೆ ನೀರು ದೊರೆಯುವಂತಾದರೆ ಪಂಪ್ ಸ್ಟೇಷನ್ಗಳಿಂದ ಟ್ಯಾಂಕರ್ಗಳ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಬಗ್ಗೆ ಜಲ ಮಂಡಳಿ ಚಿಂತನೆ ನಡೆಸಿದೆ. ಆ ಮೂಲಕ ಬೆಂಗಳೂರು ನೀರಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಬೆಂಗಳೂರು, ಏಪ್ರಿಲ್ 18: ಬೆಂಗಳೂರು ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿರುವ ಕಾರಣ ಕಾವೇರಿ 5 ನೇ ಹಂತದ ಯೋಜನೆಯ (Cauvery phase 5 Project) ಪಂಪಿಂಗ್ ಸ್ಟೇಷನ್ಗಳಿಂದ ಈಗಲೇ ನೀರನ್ನು ಬಳಸಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚಿಂತನೆ ನಡೆಸಿದೆ. ಕಾವೇರಿ 5 ನೇ ಹಂತದ ಯೋಜನೆಯು ಮೇ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಜಾರಿಯಾಗಲಿದೆ. ಆದರೆ ಅದಕ್ಕೂ ಮುನ್ನ, ಮೇ ತಿಂಗಳಿನಲ್ಲಿ ಹೆಚ್ಚುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪಂಪಿಂಗ್ ಸ್ಟೇಷನ್ಗಳಿಂದ ನೀರನ್ನು ಬಳಸಿಕೊಳ್ಳಲು ಟ್ಯಾಂಕರ್ಗಳಿಗೆ ಅನುಮತಿ ನೀಡಲು ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.
ತಾತಗುಣಿ ಅಥವಾ ಹಾರೋಹಳ್ಳಿ ಪಂಪಿಂಗ್ ಸ್ಟೇಷನ್ಗಳಿಗೆ ನೀರನ್ನು ಪಂಪ್ ಮಾಡಲು ಸಾಧ್ಯವಾದರೆ ನಗರಕ್ಕೆ ನೀರು ಪೂರೈಕೆ ಸುಲಭವಾಗಲಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಹೇಳಿದ್ದಾರೆ.
ನೀರು ಸಂಸ್ಕರಣಾ ಘಟಕಗಳು ಏಪ್ರಿಲ್ ಅಂತ್ಯದ ವೇಳೆಗೆ ಸಿದ್ಧವಾಗಲಿದ್ದು, ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತದೆ. ಆದಾಗ್ಯೂ, ಕೊನೆಯ ಹಂತದ ಪೈಪ್ಲೈನ್ ಸಂಪರ್ಕದ ಸಮಸ್ಯೆಗಳಿಂದಾಗಿ, ನಾವು ಮನೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗದಿರಬಹುದು. ತಾತಗುಣಿ ಅಥವಾ ಹಾರೋಹಳ್ಳಿ ನಿಲ್ದಾಣದವರೆಗೆ ನೀರು ಲಭ್ಯವಾದರೆ, ಟ್ಯಾಂಕರ್ಗಳನ್ನು ಬಳಸಿ ನಗರಕ್ಕೆ ಸುಲಭವಾಗಿ ಕೊಂಡೊಯ್ಯಬಹುದು ಎಂದು ಅವರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮೇ ತಿಂಗಳಲ್ಲಿ ನಗರದಲ್ಲಿ ಪರಿಸ್ಥಿತಿ ಹದಗೆಟ್ಟರೆ ಕೈಗೊಳ್ಳಲು ಉದ್ದೇಶಿಸಿರುವ ಹಲವು ಕ್ರಮಗಳಲ್ಲಿ ಇದೂ ಒಂದು ಎಂದು ಅವರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಇನ್ನಷ್ಟು ಬೋರ್ವೆಲ್ಗಳು ನಿಷ್ಕ್ರಿಯವಾಗಬಹುದು ಮತ್ತು ಇದು ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಹೆಚ್ಚಿಸಬಹುದು. ಹೀಗಾಗಿ, ನೀರಿನ ಕೊರತೆಯಾಗದಂತೆ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ನಗರದ ಅಗತ್ಯಗಳಿಗೆ ಅನುಗುಣವಾಗಿ, ಜಲ ಮಂಡಳಿಯ ಪಂಪಿಂಗ್ ಸ್ಟೇಷನ್ಗಳಿಂದ 30-40 ಎಂಎಲ್ಡಿ ನೀರನ್ನು ಹೊರತೆಗೆಯಬಹುದು. ಇದಲ್ಲದೆ, ಪ್ರಸ್ತುತ 0.3 ಟಿಎಂಸಿ ನೀರಿರುವ ಹೆಸರಘಟ್ಟ ಕೆರೆಯಿಂದ ಕನಿಷ್ಠ 10 ಎಂಎಲ್ಡಿ ನೀರನ್ನು ಪಡೆಯಲು ಮಂಡಳಿ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗೆ ಸಿಗುತ್ತಿಲ್ಲ ಕಾರ್ಮಿಕರು, ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ
ಜಲ ಮಂಡಳಿಯು ಈಗಾಗಲೇ ದೊಡ್ಡ ಪ್ರಮಾಣದ ಬಳಕೆದಾರರಿಗೆ ನೀರಿನ ಪೂರೈಕೆ ಶೇ 20 ರಷ್ಟು ಕಡಿತಗೊಳಿಸಿ, ಸಂಸ್ಕರಿಸಿದ ನೀರನ್ನು ಒದಗಿಸುವ ಮೂಲಕ ಮತ್ತು ಟ್ಯಾಪ್ಗಳಿಗೆ ಏರಿಯೇಟರ್ಗಳ ಬಳಕೆಯಂತಹ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಗಣನೀಯವಾಗಿ ನೀರು ಉಳಿಸುವಲ್ಲಿ ಯಶಸ್ವಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ