Belagavi Session: ರಾಜ್ಯದಲ್ಲಿ 26 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ: ಕೃಷ್ಣಬೈರೇಗೌಡ

| Updated By: ವಿವೇಕ ಬಿರಾದಾರ

Updated on: Dec 11, 2023 | 5:29 PM

ರಾಜ್ಯ ಸರ್ಕಾರ 236 ತಾಲೂಕುಗಳನ್ನು ಬರಪೀಡತ ಎಂದು ಘೋಷಿಸಿದೆ. ಬರಗಾಲ ಆವರಿಸಿದ್ದರಿಂದ ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಈಗಾಗಲೆ ಹಾಹಾಕಾರ ಆರಂಭವಾಗಿದೆ. ಬೆಳಗಾವಿ ಅಧಿವೇಶನದಲ್ಲಿಬರಗಾಲದ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಉತ್ತರ ಹೀಗಿದೆ.

Belagavi Session: ರಾಜ್ಯದಲ್ಲಿ 26 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ: ಕೃಷ್ಣಬೈರೇಗೌಡ
ಸಚಿವ ಕೃಷ್ಣಬೈರೇಗೌಡ
Follow us on

ಬೆಳಗಾವಿ, ಡಿಸೆಂಬರ್​ 11: ಮುಂಗಾರು ಮತ್ತು ಹಿಂಗಾರು ವಿಫಲವಾದ್ದರಿಂದ ರಾಜ್ಯದಲ್ಲಿ ತೀವ್ರ ಬರ (Drought) ಆವರಿಸಿದೆ. ರಾಜ್ಯ ಸರ್ಕಾರ 236 ತಾಲೂಕುಗಳನ್ನು ಬರಪೀಡತ ಎಂದು ಘೋಷಿಸಿದೆ. ಬರಗಾಲ ಆವರಿಸಿದ್ದರಿಂದ ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ (Drinking Water) ಈಗಾಗಲೆ ಹಾಹಾಕಾರ ಆರಂಭವಾಗಿದೆ. ಬೆಳಗಾವಿ ಅಧಿವೇಶನದಲ್ಲಿ (Belagavi Session) ಬರಗಾಲದ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಅವರು ಮಾತನಾಡಿ, ರಾಜ್ಯದ 26 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ್ನು ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ಕೆಲವು ಕಡೆ ಖಾಸಗಿ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುತ್ತದೆ ಅಂತ ಹಳ್ಳಿಗಳ ಪಟ್ಟಿ ಮಾಡಿದ್ದೇವೆ. ರಾಜ್ಯದಲ್ಲಿ 6237 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳಲ್ಲಿನ ಖಾಸಗಿ ಬೋರ್ ವೆಲ್​ಗಳನ್ನು​ ಸರ್ಕಾರದ ಸುಪರ್ದಿಗೆ ಪಡೆದು, ಆ ಗ್ರಾಮಕ್ಕೆ ನೀರು ಪೂರೈಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸಮಸ್ಯೆ ಬರುವುದಕ್ಕಿಂತ ಮೊದಲ ಕುಡಿಯುವ ನೀರಿನ ಸರಬರಾಜು ಮಾಡುವ ಟ್ಯಾಂಕರ್​ಗಳ ಪಟ್ಟಿ ಮಾಡಿ ಟೆಂಡರ್ ಕರೆಯಿರಿ ಅಂತ ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಆಗುವ ಗ್ರಾಮಗಳಲ್ಲಿ ಯಾವುದೆ ಸಮಸ್ಯೆಯಾಗದಂತೆ ತಯಾರಿ ನಡೆಸಿದ್ದೇವೆ. ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿಲ್ಲಿಸಲು ತೀರ್ಮಾನ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಬರಗಾಲಕ್ಕಿಂತ ಹೆಚ್ಚಾಗಿ ಅಕಾಲಿಕ ಮಳೆಗೆ ಭತ್ತ ಹಾನಿ! ಕಂಗಾಲಾದ ರೈತ

ಜೂನ್​ನಲ್ಲಿ ಶೇ 57 ರಷ್ಟು ಮಳೆ ಕಡಿಮೆ ಆಗಿದೆ. ಆಗಸ್ಟ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬಿತ್ತನೆ ಗುರಿ 82,95,000 ಹೆಕ್ಟೇರ್ ಪ್ರದೇಶದಲ್ಲಿ ಇತ್ತಾದರೂ, 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೂರು‌ ಹಂತಗಳಲ್ಲಿ ಬರ ಪೀಡಿತ ತಾಲೂಕು ಘೋಷಣೆ ಮಾಡಿದ್ದೇವೆ. ಒಟ್ಟು ಮೂರು ಮನವಿ ಸೇರಿ 18,171 ಕೋಟಿ ಅನುದಾನ ಎನ್​ಡಿಆರ್ಎಫ್ ನಿಯಮದ ಅಡಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಅಕ್ಟೋಬರ್​ ತಿಂಗಳಲ್ಲಿ ದಿನಾಂಕ​ 4 ರಿಂದ 9ರ ವರೆಗೆ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವರದಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕೊಟ್ಟಿರುವ ವಸ್ತುಸ್ಥಿತಿ ನ್ಯಾಯಯುತವಾಗಿ ಇದೆ ಅಂತ ಅವರು ಒಪ್ಪಿಗೆ ಮಾತು ಕೂಡ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಮುಂಗಾರು ಮಳೆ ಕೊರತೆ ನಮ್ಮ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಕಂಡು ಬಂದಿದೆ. 12 ರಾಜ್ಯಗಳಲ್ಲಿ ಬರ ಇದ್ದರೂ, ನಮ್ಮ ರಾಜ್ಯ ಮೊದಲಿಗೆ ಬರ ಘೋಷಣೆ ಮಾಡಿದೆ. ಸಿಎಂ ಈ ಬರಗಾಲದ ಅವಧಿಯಲ್ಲಿ 3 ಸಭೆ ಮಾಡಿದ್ದಾರೆ. ಬಿಜೆಪಿ ಒಂದೂ ಕ್ಯಾಬಿನೆಟ್ ಸಬ್​ ಕಮಿಟಿ ಸಭೆ ಮಾಡಿರಲಿಲ್ಲ. ಇವರು ಯಾವ ಸೀಮೆಯವರು? ಬುದ್ದಿ ಹೇಳಲು ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ