AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

CM Siddaramaiah: ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರೈತರಿಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡದ ಹಿನ್ನೆಲೆ ಹೆಸ್ಕಾಂ ವಿರುದ್ಧ ಆಕ್ರೋಶಗೊಂಡಿದ್ದು, ವಿದ್ಯುತ್ ನಿಗಮಗಳಲ್ಲಿ ವೈಫಲ್ಯಗಳಿವೆ. ಅದನ್ನ ಸರಿಪಡಿಸುವ ಕೆಲಸ ರಾಜ್ಯದ ಮುಖ್ಯಮಂತ್ರಿಯಾದವರು ಮಾಡಬೇಕು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  
Follow us
ಸಾಧು ಶ್ರೀನಾಥ್​
|

Updated on:Oct 03, 2023 | 3:15 PM

ಚಿಕ್ಕೋಡಿ, ಅಕ್ಟೋಬರ್ 3​: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರದ ವಿರುದ್ಧ (CM Siddaramaiah) ಅಪಸ್ವರಗಳು ಕೇಳಿಬರುವುದು ಹೆಚ್ಚಾಗುತ್ತಿದೆ. ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ (Kagawad Congress MLA Raju Kage) ಅವರು ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಅವರು ಮಾತನಾಡಿದ್ದಾರೆ.

ಹೆಸ್ಕಾಂ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡದ ಹಿನ್ನೆಲೆ ಅವರು ಆಕ್ರೋಶಗೊಂಡಿದ್ದು, ವಿದ್ಯುತ್ ನಿಗಮಗಳಲ್ಲಿ ವೈಫಲ್ಯಗಳಿವೆ. ಅದು ಸರ್ಕಾರದ ವೈಫಲ್ಯ, ನಮ್ಮ ವೈಫಲ್ಯವಲ್ಲ. ಅದನ್ನ ಸರಿಪಡಿಸುವ ಕೆಲಸ ರಾಜ್ಯದ ಮುಖ್ಯಮಂತ್ರಿಯಾದವರು ಮಾಡಬೇಕು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆಡಳಿತ ನಡೆಸಬೇಕಾದ್ರೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿರುವ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ರೆ ದೇಶ ಕಟ್ಟಲು ಸಾಧ್ಯ. ಆದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅವರ ಕರ್ತವ್ಯ ಸರಿಯಾಗಿ ಮಾಡ್ತಾ ಇಲ್ಲ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನ್ಯಾಯ ಕೊಡಲು ಸಾಧ್ಯ. ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ಮಾಡ್ತಿಲ್ಲ, ನಾವೂ ನಮ್ಮ ಕರ್ತವ್ಯ ಸರಿಯಾಗಿ ಮಾಡ್ತಿಲ್ಲ. ಸಾಮಾಜಿಕ ನ್ಯಾಯ ಕೊಡಲು ಆಗುತ್ತಿಲ್ಲ, ಹೀಗಾದ್ರೆ ದೇಶ ಕಟ್ಟಲು ಹೇಗೆ ಸಾಧ್ಯ? ಕೇವಲ ಭಾಷಣದಲ್ಲಿ ಬದಲಾವಣೆ ಆಗ್ತಿದೆ, ಅದನ್ನ ಕಾರ್ಯರೂಪಕ್ಕೆ ತರಲು ಆಗ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ವಿಭಜನೆ: ಬೈಲಹೊಂಗಲ ನಿವಾಸಿಗಳ ಆಗ್ರಹದ ಬಳಿಕ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಒತ್ತಾಯ

ನಾವು ಅಸಹಾಯಕರಾಗಿದ್ದೇವೆ. ಹಳ್ಳಿಗಳಲ್ಲಿ ಇನ್ನೂ ಮೂರು ಗಂಟೆ ವಿದ್ಯುತ್ ಕೊಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಮಳೆಗಾಲದಲ್ಲಿಯೇ ಈ ಪರಿಸ್ಥಿತಿ ಆದ್ರೆ ಬೇಸಿಗೆಯಲ್ಲಿ ಝೀರೋ ಕರೆಂಟ್ ಮಾಡ್ತಿದ್ದಾರೆ. ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ವಿದ್ಯುತ್ ನಿಯಮಗಳಲ್ಲಿ ಬಹಳ ನ್ಯೂನ್ಯತೆಗಳಿದ್ದು ಸರ್ಕಾರ ಸರಿಪಡಿಸಬೇಕು.

ರೈತ ಐದು/ ಹತ್ತು ಹೆಚ್‌ಪಿ ವಿದ್ಯುತ್ ಪಡೆಯಲು ಐದು ಲಕ್ಷ ರೂ ಎಸ್ಟಿಮೇಟ್ ಮಾಡಿ ಕೊಡ್ತಾರೆ. ರೈತನ ಬಳಿ ಐದು ಲಕ್ಷ ರೂಪಾಯಿ ಇದ್ರೆ ಆತ ಏಕೆ ರೈತ ಆಗುತ್ತಿದ್ದ? ಅಧಿಕಾರಿ ಆಗುತ್ತಿದ್ದ! ಸರ್ಕಾರವೇ ವಿದ್ಯುತ್ ಕಂಬ ಕೂರಿಸಿ, ಟಿಸಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇನ್ನಾದರೂ ಸರ್ಕಾರ ಎಚ್ಚೆತ್ತು ರೈತರಿಗೆ ಸತತವಾಗಿ ಏಳು ಗಂಟೆ ವಿದ್ಯುತ್ ನೀಡಬೇಕು ಎಂಬ ಬೇಡಿಕೆಯನ್ನೂ ಶಾಸಕ ರಾಜು ಕಾಗೆ ಇದೇ ಸಂದರ್ಭದಲ್ಲಿ ಮುಂದಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Tue, 3 October 23