ಬೆಳಗಾವಿಯಲ್ಲಿ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ

ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯದ ವೇಳೆ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ
ಬೆಳಗಾವಿಯಲ್ಲಿ ಡಬಲ್ ಮರ್ಡರ್ (ಫೋಟೋ: ಸಾಂದರ್ಭಿಕ ಚಿತ್ರ)
Follow us
| Updated By: Rakesh Nayak Manchi

Updated on:Dec 26, 2022 | 7:28 AM

ಬೆಳಗಾವಿ: ಚಳಿಗಾಲದ ಅಧಿವೇಶನದ ಸಮಯದಲ್ಲೇ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ (Double murder in Belagavi) ಮಾಡಿದ ಘಟನೆ ಜಿಲ್ಲೆಯಲ್ಲಿ ತಡರಾತ್ರಿ ನಡೆದಿದೆ. ಬಸವರಾಜ್ ಬೆಳಗಾಂವ್ಕರ್(23), ಗಿರೀಶ್ ನಾಗಣ್ಣವರ(34) ಸಾವನ್ನಪ್ಪಿದ ವ್ಯಕ್ತಿಗಳಾಗಿದ್ದಾರೆ. ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ (Cricket Match) ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಅವರು ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳು ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾಸ್ಪತ್ರೆ ಬಳಿ KSRP ತುಕಡಿ ನಿಯೋಜಿಸಲಾಗಿದೆ.

ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಯುವಕರು ಒಟ್ಟು ಸೇರಿಕೊಂಡು ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ವಾಹನ ಮೈದಾನಕ್ಕೆ ನುಗ್ಗಿಸಿದ್ದಾನೆ. ಇದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಚಾಲಕ ಸಿಟ್ಟಾಗಿದ್ದಾನೆ. ಕೂಡಲೇ ಚಾಕುವನ್ನು ಕೈಗೆತ್ತಿಕೊಂಡು ವಾಹನದಿಂದ ಕೆಳಗಿಳಿದು ಇಬ್ಬರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳು ಬಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ಓದಿ: Kalaburgi: ಚಾಕೊಲೇಟ್ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ

Mysore: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಮೈಸೂರು: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ನಡೆದಿದೆ. ಯುವೀನ್ ಬಸವಣ್ಣ ಎಂಬುವರ ಪುತ್ರ ಯುವೀನ್(7)​ ಸಾವನ್ನಪ್ಪಿದ ಬಾಲಕ. ಕುಡಿಯುವ ನೀರಿನ ಘಟಕದಲ್ಲಿ ವಿದ್ಯುತ್​ ಪ್ರವಹಿಸಿ ಈ ದುರ್ಘಟನೆ ನಡೆದಿದೆ. ಬಸವಣ್ಣ ಕುಟುಂಬ ಮೊರಾರ್ಜಿ ವಸತಿಶಾಲೆಯಲ್ಲಿ ವಾಸವಿದ್ದರು. ಅದರಂತೆ ತಂದೆಯ ಜೊತೆ ನೀರು ತರಲು ಹೋಗಿದ್ದಾಗ ಆಕಸ್ಮಿಕವಾಗಿ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿದೆ. ಘಟನೆಯಿಂದ ಅಸ್ವಸ್ಥಗೊಂಡಿದ್ದ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುದ್ದ ಕುಡಿಯುವ ನೀರಿ‌ನ ಘಟಕದಲ್ಲಿ ಬಸವಣ್ಣ ನೀರು ತುಂಬಿಸಲು ಇಟ್ಟು ಮಗನನ್ನು ಬಿಟ್ಟು ಬಂದಿದ್ದರು. ಅವರು ವಾಪಸ್ಸಾಗುವಷ್ಟರಲ್ಲಿ ಯುವೀನ್​ಗೆ ವಿದ್ಯುತ್​ ಸ್ಪರ್ಷವಾಗಿ ಅಸ್ವಸ್ತನಾಗಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿರೂ ಪ್ರಯೋಜನವಾಗಿಲ್ಲ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Mon, 26 December 22