Belagavi Shivaji Statue: ರಿಬ್ಬನ್ ಕಟ್ ಮಾಡುವ ಮೂಲಕ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ, ಲಕ್ಷ್ಮೀ ಹೆಬ್ಬಾಳ್ಕರ್ ಗೈರು

|

Updated on: Mar 02, 2023 | 12:51 PM

ಸಿಎಂ ಬೊಮ್ಮಾಯಿ ರಿಬ್ಬನ್ ಕಟ್ ಮಾಡುವುದರ ಮೂಲಕ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಶಿವಾಜಿ ಪ್ರತಿಮೆ ಎದುರು ನಗಾರಿ ಬಾರಿಸಿ ಪ್ರತಿಮೆಗೆ ಹೂವು ಸಮರ್ಪಿಸಿದ್ದಾರೆ.

ಬೆಳಗಾವಿ: ಜಿಲ್ಲೆಯ ರಾಜಹಂಸಗಡ ಕೋಟೆಯಲ್ಲಿರುವ ಶಿವಾಜಿ ಪ್ರತಿಮೆಯ ಕ್ರೆಡಿಟ್(Shivaji Statue) ಪಡೆಯಲು ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಮತ್ತು ರಮೇಶ್ ಜಾರಕಿಹೊಳಿ(Ramesh Jarkiholi) ನಡುವೆ ಭಾರೀ ಪೈಪೋಟಿ ಇತ್ತು. ಸದ್ಯ ಇಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ರಿಬ್ಬನ್ ಕಟ್ ಮಾಡುವುದರ ಮೂಲಕ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಶಿವಾಜಿ ಪ್ರತಿಮೆ ಎದುರು ನಗಾರಿ ಬಾರಿಸಿ ಪ್ರತಿಮೆಗೆ ಹೂವು ಸಮರ್ಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಅಭಯ್ ಪಾಟೀಲ್, ಅನಿಲ್ ಬೆನಕೆ ಭಾಗಿ‌ಯಾಗಿದ್ದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ದಾರೆ.

ಇನ್ನು ರಾಜಹಂಸಗಡ ಕೋಟೆಯಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಲಾಗಿದೆ. ಗಾರ್ಡನ್, ಕೋಟೆ ನವೀಕರಣ, ನೀರಿನ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಇನ್ನು ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಶಿವಾಜಿ ಈ ದೇಶ ಕಂಡ ಅಪ್ರತಿಮ ನಾಯಕ‌. ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗಿದೆ. ಹಿಂದೂ ಸಾಮ್ರಾಜ್ಯ ಉಳಿಸಲು ಶಿವಾಜಿ ಮಹಾರಾಜರ ಪಾತ್ರ ದೊಡ್ಡದು. ತಮ್ಮ ಹೃದಯದಲ್ಲಿ ಛಲ, ಧೈರ್ಯ ಎಲ್ಲವನ್ನೂ ತುಂಬಿಕೊಂಡಿದ್ದರು. ದೇಶ ಕಾಪಾಡಲು ಮೊಟ್ಟ ಮೊದಲು ಹೋರಾಟ ಮಾಡಿದ್ದು ಶಿವಾಜಿ. ರಾಜಹಂಸಗಡ ಶಿವಾಜಿ ಮಹಾರಾಜರು ಕಟ್ಟಿದ ಕೋಟೆ. ಅಭಿವೃದ್ಧಿಗಾಗಿ 2008ರಲ್ಲೇ B.S​.ಯಡಿಯೂರಪ್ಪ ಅನುದಾನ ನೀಡಿದ್ರು. 2008ರಲ್ಲೇ 4.5 ಕೋಟಿ ರೂಪಾಯಿ ಬಿಡುಗಡೆ ಆಗಿತ್ತು. ಕೆಲವರ ಕಾಲದಲ್ಲಿ ಅಭಿವೃದ್ಧಿ ಆಗಲ್ಲ, ಮಾತಾಡುವುದೇ ಕೆಲಸ. ಕೋಟೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ ಕೊಡ್ತೇನೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಇದನ್ನೂ ಓದಿ: Poster war: ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ; ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬ್ಯಾನರ್ ಪೈಪೋಟಿ!

ಶಿವಾಜಿ ಕ್ರೆಡಿಟ್ ವಾರ್

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿವಾಜಿ ಮೂರ್ತಿ ಉದ್ಘಾಟನೆ ಕ್ರೆಡಿಟ್ ಗಾಗಿ ಹೆಬ್ಬಾಳ್ಕರ್ ಹಾಗೂ ರಮೇಶ್ ನಡುವೆ ಫೈಟ್ ನಡೆದಿದ್ದು ಕಡೆಗೂ ಸಾಹುಕಾರ್ ಸರ್ಕಾರದಿಂದ ಕಾರ್ಯಕ್ರಮ ಮಾಡಿಸುತ್ತಿದ್ರೇ ಇತ್ತ ಹೆಬ್ಬಾಳ್ಕರ್ ರಮೇಶ್ ಗೆ ತಿರುಗೇಟು ನೀಡಲು ಮಾ.5ರಂದು ಮತ್ತೊಮ್ಮೆ ಉದ್ಘಾಟನೆ ಮಾಡಲಿದ್ದಾರೆ.

ಚುನಾವಣೆಗೂ ಮುನ್ನವೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವರ್ಸಸ್ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ನೇರಾ ನೇರ ಕ್ರೆಡಿಟ್ ಪೈಟ್ ಆರಂಭವಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ಜಿದ್ದಿಗೆ ಬಿದ್ದು ಅತೀ ಹೆಚ್ಚು ಮತದಾರರಿರುವ ಮರಾಠಿಗರನ್ನ ಸೆಳೆಯಲು ನಾನಾ ಕಸರತ್ತು ಮಾಡ್ತಿದ್ದಾರೆ. ಬೆಳಗಾವಿ ತಾಲೂಕಿನ ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣವಾಗಿರುವ ಶಿವಾಜಿ ಮೂರ್ತಿ ಉದ್ಘಾಟನೆಗೆ ಇದೀಗ ಸಜ್ಜಾಗಿರುವಂತಹದ್ದು. ಶಿವಾಜಿ ಪ್ರತಿಮೆ ನಾವೇ ಮಾಡಿದ್ದೇವೆ ಅಂತಾ ಬಿಂಬಿಸಿ ಮರಾಠಿಗರ ಓಲೈಕೆ ಮಾಡಲು ಮುಂದಾಗಿದ್ದ ಹೆಬ್ಬಾಳ್ಕರ್ ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಮಾರ್ಚ್ 5ರಂದು ದಿನಾಂಕ ನಿಗದಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರನ್ನ ಕರೆತಂದು ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್ ಪ್ಲ್ಯಾನ್ ಮಾಡಿದ್ದರು.

ಇದರಿಂದ ಅಲರ್ಟ್ ಆದ ಸಾಹುಕಾರ್ ಫೆ.18ರಂದು ಪಕ್ಷದ ಕಾರ್ಯಕರ್ತರ ಜತೆಗೆ ರಾಜಹಂಸಗಡದಲ್ಲಿರುವ ಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ರಮೇಶ್ ಆಗಮನಕ್ಕೂ ಮುನ್ನವೇ ಕೋಟೆಗೆ ಭೇಟಿ ನೀಡಿ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ ವಾಪಾಸ್ ಆಗಿದ್ದರು. ಈ ವೇಳೆ ರಮೇಸ್ ಹಾಗೂ ಚನ್ನರಾಜ ಕಾರು ಮುಖಾಮುಖಿಯಾಗಿ ಇಬ್ಬರ ಬೆಂಬಲಿಗರು ಪರಸ್ಪರ ಘೋಷಣೆ ಕೂಗಿದ್ದರು. ಅವತ್ತೇ ಮಾತಾಡಿದ ರಮೇಶ್ ಯಾವುದೇ ಕಾರಣಕ್ಕೂ ಇದನ್ನ ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಸರ್ಕಾರದಿಂದ ಮೂರ್ತಿ ಉದ್ಘಾಟನೆ ಮಾಡಿಸುವ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ದರು. ಅದರಂತೆ ಕೆಲ ದಿನಗಳ ಹಿಂದೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಮಾ.2ರಂದು ಸಮಯ ಕೊಟ್ಟು ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮಾ.2ರಂದು ಸಯಮ ರಾಜಹಂಸಗಡ ಕೋಟೆಗೆ ಆಗಮಿಸಿ ಶಿವಾಜಿ ಮೂರ್ತಿಯನ್ನ ಲೋಕಾರ್ಪಣೆ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:42 pm, Thu, 2 March 23