ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನಾಚರಣೆ: 46 ಎಂಇಎಸ್​ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕೇಸ್​​

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ವೇಳೆ ಕರಾಳ ದಿನಾಚರಣೆ ಮಾಡಿದ ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನಾಚರಣೆ: 46 ಎಂಇಎಸ್​ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕೇಸ್​​
ಬೆಳಗಾವಿ ಮಾರ್ಕೆಟ್​ ಪೊಲೀಸ್​ ಠಾಣೆ
Edited By:

Updated on: Nov 03, 2024 | 12:59 PM

ಬೆಳಗಾವಿ, ನವೆಂಬರ್​ 03: ಕನ್ನಡ ರಾಜ್ಯೋತ್ಸವ (Kannada Rajyotsava) ದಿನ ಕರಾಳ ದಿನ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿ (MES​)ಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಜಿ ಶಾಸಕ ಮನೋಹರ ಕಿಣೇಕರ, ಎಮ್​ಇಡಿ ಮುಖಂಡ ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ, ವಿಕಾಸ ಕಲಘಟಗಿ ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಎಂಇಎಸ್​ ಕಾರ್ಯಕರ್ತರು ನವೆಂಬರ್ 1ರಂದು ಜಿಲ್ಲಾಡಳಿತ ಅನುಮತಿ ಇಲ್ಲದೇ ಕರಾಳ‌ ದಿನ ಮೆರವಣಿಗೆ ಮಾಡಿದ್ದರು. ನಗರದ ಧರ್ಮವೀರ ಸಂಭಾಜಿ ಮೈದಾನದಿಂದ ಮರಾಠಾ ಮಂದಿರವರೆಗೂ ಮೆರವಣಿಗೆ ಮಾಡಿದ್ದರು. ಎಂಇಎಸ್​​ ಕಾರ್ಯಕರ್ತರು ಮೆರವಣಿಗೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಭೌಮತ್ವ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಘೋಷಣೆ ಕೂಗಿದ್ದರು. ಕಾರ್ಯಕರ್ತರು ಬೆಳಗಾವಿ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರ ಸೇರಿಸುವಂತೆ ನಾಡದ್ರೋಹಿ ಘೋಷಣೆ ಹಾಕಿದ್ದರು.

ಇದನ್ನೂ ಓದಿ: ಮಾಜಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಗನ ಆಸ್ತಿಗೂ ಈಗ ವಕ್ಫ್ ಕಂಟಕ!

ಸಾರ್ವಜನಿಕವಾಗಿ ಶಾಂತಿ ಭಂಗ, ನಗರದಲ್ಲಿ ದೊಂಬಿ ಎಬ್ಬಿಸಲು ಪ್ರಚೋದನೆ, ಅಕ್ರಮವಾಗಿ ಕೂಟ ಸೇರಿ ಸಭೆ ನಡೆಸಿದಕ್ಕೆ ಬಿಎನ್ಎಸ್ ಕಾಯ್ದೆ 189(2),192, 292, 285, 190 ಕಲಂ ಅಡಿ ಪ್ರಕರಣ ದಾಖಲಾಗಿದೆ. ಮಾರ್ಕೆಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ