Jain Muni Murder: ಜೈನಮುನಿಗಳ ದೇಹ ತುಂಡು ತುಂಡಾಗಿ ಕತ್ತರಿಸಿ ಡೈರಿ ಸುಟ್ಟು ಹಾಕಿದ್ರು, ಎಫ್​ಐಆರ್​ನಲ್ಲಿ ದಾಖಲಾಗಿದೆ ಭಯಾನಕ ಸಂಗತಿ

| Updated By: ಆಯೇಷಾ ಬಾನು

Updated on: Jul 11, 2023 | 8:44 AM

ಚಿಕ್ಕೋಡಿ ಠಾಣೆಯಲ್ಲಿ ದಾಖಲಾದ ಎಫ್ಐಆರ್​ನಲ್ಲಿ(FIR) ಹಲವು ವಿಷಯಗಳು ಬಯಲಾಗಿವೆ. ಸ್ವಾಮೀಜಿ‌ ಕೊಲೆ ಮಾಡಿದ್ದು ನಾರಾಯಣ ಮಾಳಿ ಒಬ್ಬನೇ ಅಲ್ಲ. ಮತ್ತೋರ್ವ ಆರೋಪಿಯ ಹೆಸರು ಎಫ್​ಐಆರ್​ನಲ್ಲಿ ದಾಖಲಾಗಿದೆ.

Jain Muni Murder: ಜೈನಮುನಿಗಳ ದೇಹ ತುಂಡು ತುಂಡಾಗಿ ಕತ್ತರಿಸಿ ಡೈರಿ ಸುಟ್ಟು ಹಾಕಿದ್ರು, ಎಫ್​ಐಆರ್​ನಲ್ಲಿ ದಾಖಲಾಗಿದೆ ಭಯಾನಕ ಸಂಗತಿ
ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್
Follow us on

ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ(Acharya Sri Kamakumara Nandi Maharaj) ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿಕ್ಕೋಡಿ ಠಾಣೆಯಲ್ಲಿ ದಾಖಲಾದ ಎಫ್ಐಆರ್​ನಲ್ಲಿ(FIR) ಹಲವು ವಿಷಯಗಳು ಬಯಲಾಗಿವೆ. ಸ್ವಾಮೀಜಿ‌ ಕೊಲೆ ಮಾಡಿದ್ದು ನಾರಾಯಣ ಮಾಳಿ ಒಬ್ಬನೇ ಅಲ್ಲ. ಮತ್ತೋರ್ವ ಆರೋಪಿಯ ಹೆಸರು ಎಫ್​ಐಆರ್​ನಲ್ಲಿ ದಾಖಲಾಗಿದೆ. ಹಾಗೂ ಆರೋಪಿಗಳು ಜೈನಮುನಿಗಳನ್ನು ತುಂಡು ತುಂಡಾಗಿ ಕತ್ತರಿಸಿರುವ ಬಗ್ಗೆ FIR ನಲ್ಲಿ ದಾಖಲಾಗಿದೆ.

ಜುಲೈ 5 ರಾತ್ರಿಯವರೆಗೂ ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿದ್ದ ಕಾಮಕುಮಾರ ನಂದಿ ಮಹಾರಾಜರು ಮಲಗಲು ತಮ್ಮ ಕೋಣೆಗೆ ಹೋಗಿದ್ದರು. ಬಳಿಕ ಬೆಳಗ್ಗೆ ಒಂದೇ ಹೊತ್ತು ಊಟ ಮಾಡುವ ಜೈನಮುನಿಗಳಿಗೆ ದಿನಂಪ್ರತಿ ಅಡುಗೆ ಮಾಡಿಕೊಡುತ್ತಿದ್ದ ಸೇವಕಿ ಕುಸುಮಾ ಜುಲೈ 6ರ ಬೆಳಗ್ಗೆ ಕೋಣೆಗೆ ಆಗಮಿಸಿದಾಗ ಜೈನಮುನಿಗಳು ಕಾಣಲ್ಲ. ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ತಮ್ಮ ಪಿಂಚಿ, ಕಮಂಡಲು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ. ಆದ್ರೆ ಪಿಂಚಿ ಕಮಂಡಲು ಜೈನಮುನಿಗಳ ಕೋಣೆಯಲ್ಲಿಯೇ ಇರುತ್ತೆ. ಮುನಿಗಳು ಬಳಸುತ್ತಿದ್ದ ಎರಡು ಮೊಬೈಲ್ ಫೋನ್‌ಗಳು ಸಹ ಅಲ್ಲಿಯೇ ಇರುತ್ತೆ. ತಿಜೋರಿ ಬಾಗಿಲು ತೆರೆದಿರುತ್ತೆ. ಇದನ್ನೆಲ್ಲ ನೋಡಿದಾಗ ಆತಂಕಗೊಂಡ ಕುಸುಮಾ ಆಶ್ರಮದ ಟ್ರಸ್ಟಿಗಳಿಗೆ ಮಾಹಿತಿ ತಿಳಿಸುತ್ತಾರೆ.

ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣದಲ್ಲಿ ಒಂದು ನಿರ್ದಿಷ್ಟ ಕೋಮಿನ ಆರೋಪಿಯನ್ನು ಕಾಂಗ್ರೆಸ್ ಸರ್ಕಾರ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದೆ: ಬಸನಗೌಡ ಯತ್ನಾಳ್

ಜುಲೈ 6ರಂದು ದಿನಪೂರ್ತಿ ಆಶ್ರಮದ ಭಕ್ತಾದಿಗಳು ಹಾಗೂ ಟ್ರಸ್ಟ್ ಸದಸ್ಯರು ಆಶ್ರಮದ ಸುತ್ತಮುತ್ತ ಹುಡುಕಾಟ ನಡೆಸುತ್ತಾರೆ. ಆದ್ರೆ ಜೈನಮುನಿಗಳ ಯಾವುದೇ ಸುಳಿವು ಸಿಗುವುದಿಲ್ಲ. ಜೈನಮುನಿ ಕಾಮಕುಮಾರ ನಂದಿ‌ಮಹಾರಾಜರ ಪೂರ್ವಾಶ್ರಮದ ಅಣ್ಣನ ಮಗ ಹಾಗೂ ಕಾಮಕುಮಾರ ನಂದಿ ಮಹಾರಾಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಗೊಂಡ ಉಗಾರೆ ಜುಲೈ 7ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ಕೊಡುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಾಲ್ಕೆ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸ್ವಾಮೀಜಿಗೆ ಆಪ್ತನಾಗಿದ್ದ ನಾರಾಯಣ ಮಾಳಿ, ಹಸನ್ ಅಲಿಯಾಸ್ ಹುಸೇನ್ ದಲಾಯತ್‌ ಸೇರಿ ಜೈನಮುನಿಗಳ ಹತ್ಯೆ ಮಾಡಿದ್ದು ಬಯಲಾಗುತ್ತೆ.

ಎಫ್​ಐಆರ್​ನಲ್ಲಿ ಉಲ್ಲೇಖವಾದ ಸ್ಪೋಟಕ ಮಾಹಿತಿ

ನಾರಾಯಣ ಮಾಳಿ, ಹಸನ್ ದಲಾಯತ್ ಇಬ್ಬರು ಆರೋಪಿಗಳು ಸೇರಿ ಜೈನಮುನಿಗಳ ಹತ್ಯೆ ಮಾಡಿದ್ದಾರೆ. ಆರೋಪಿಗಳಿಬ್ಬರೂ ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿ ವಿಫಲರಾಗಿದ್ದಾರೆ. ಅದು ಸಾಧ್ಯವಾಗದಿದ್ದಾಗ ಇಬ್ಬರೂ ಸೇರಿಕೊಂಡೇ ಟವಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಜೈನಮುನಿಗಳು, ನಾರಾಯಣ ಮಾಳಿಗೆ ಕೊಟ್ಟ ಹಣ ವಾಪಸ್ ಕೇಳಿದ್ದರು. ಇದರಿಂದ ಕೋಪಿತಗೊಂಡಿದ್ದ ಎ1 ಆರೋಪಿ ನಾರಾಯಣ ಮಾಳಿ ತನ್ನ ಸ್ನೇಹಿತ ಲಾರಿ ಚಾಲಕನಾಗಿದ್ದ ಎ2 ಆರೋಪಿ ಹುಸೇನ್ ದಲಾಯತ್‌ ಜೊತೆ ಸೇರಿ ಕೊಲೆ‌ ಮಾಡಿದ್ದಾನೆ. ಕೊಲೆ ಮಾಡಿ ಮೃತದೇಹ ಗೋಣಿಚೀಲದಲ್ಲಿ ಕಟ್ಟಿ ಬೈಕ್‌ನಲ್ಲಿ ಶವ ಸಾಗಿಸಿ ಹಿರೇಕೋಡಿಯಿಂದ ಖಟಕಬಾವಿಯವರೆಗೂ ಸುಮಾರು 35 ಕಿಮೀ ಬೈಕ್ ಮೇಲೆ ತೆರಳಿ ಖಟಕಬಾವಿಯ ಕೊಳವೆ ಬಾವಿ ಬಳಿ ದೇಹ ಪೀಸ್ ಪೀಸ್ ಮಾಡಿ ಬಳಿಕ ತಮ್ಮ ರಕ್ತ ಸಿಕ್ತ ಬಟ್ಟೆಗಳನ್ನು ಹಾಗೂ ಜೈನಮುನಿಗಳಿಗೆ ಸೇರಿದ ಡೈರಿಯನ್ನು ಸುಟ್ಟು ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಜೈನಮುನಿಗಳು ಡೈರಿಯಲ್ಲಿ ಏನು ಬರೆದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊದಲು ಜೈನಮುನಿಗಳ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೊಲೆ ರಹಸ್ಯ ಬಯಲಾದ ಬಳಿಕ ಕೊಲೆ ಪ್ರಕರಣವಾಗಿ ಮಾರ್ಪಾಡು ಮಾಡಿ FIR ದಾಖಲಿಸಲಾಗಿದೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:10 am, Tue, 11 July 23