
ಚಿಕ್ಕೋಡಿ, ಆಗಸ್ಟ್ 10: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನೇ ಕೊಂದು, ಶವವನ್ನು ಜಮೀನಿನಲ್ಲಿ ಹೂತುಹಾಕಿದ್ದ ಪತ್ನಿ 6 ತಿಂಗಳ ಬಳಿಕ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ರಾಘು ಗಾವಡೆ(40) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಪತ್ನಿ ಬಂಗಾರಿ ಗಾವಡೆ, ಪ್ರಿಯಕರ ರಾಮು ರಾಣಗೆ ಬಂಧಿತ ಆರೋಪಿಗಳಾಗಿದ್ದಾರೆ. ಫೆ.7ರಂದೇ ರಾಘು ಗಾವಡೆ ಕೊಲೆ ನಡೆದಿದ್ದು, ಪತಿ ಪರ ಊರಿಗೆ ಹೋಗಿದ್ದಾನೆಂಬ ಪತ್ನಿಯ ನಾಟಕವನ್ನು ಪೊಲೀಸರು ಕುಟುಂಬಸ್ಥರ ಎದುರು ಕೊನೆಗೂ ಬಯಲು ಮಾಡಿದ್ದಾರೆ.
ಬಂಗಾರಿ ಗಾವಡೆಗೆ ರಾಮು ರಾಣ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ರಾಘು ಜಗಳ ಮಾಡುತ್ತಿದ್ದ. ಈ ನಡುವೆ ಫೆ.7ರಂದು ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡು ಪ್ರಿಯಕರ ರಾಮುಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ ಬಂಗಾರಿ, ಮಲಗಿದ್ದಾಗ ರಾಘುವಿನ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ನಂತರ ಮಧ್ಯರಾತ್ರಿ ಟಾಟಾಏಸ್ ವಾಹನದಲ್ಲಿ ಜಮೀನಿಗೆ ಶವ ಸಾಗಾಟ ಮಾಡಿದ್ದ ಆರೋಪಿಗಳು, ಫೆ.8ರಂದು ರಾತ್ರಿ ಕಬ್ಬಿನ ಗದ್ದೆಯಲ್ಲಿ ಶವ ಹೂತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಶಿವಾನಂದ ನೀಲಣ್ಣನವರ್ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ
ಗಂಡನನ್ನು ಪ್ರಿಯಕರನ ಜೊತೆ ಸೇರಿ ಕೊಂದ ಬಳಿಕ ಅದನ್ನು ಮರೆಮಾಚಲು ಆತ ಕುರಿ ಕಾಯಲು ಬೇರೆ ಊರಿಗೆ ಹೋಗಿದ್ದಾನೆಂದು ಪತ್ನಿ ಬಂಗಾರಿ ಹೇಳಿಕೊಂಡು ತಿರುಗಾಡಿದ್ದಳು. ಆದರೆ ಕೆಲ ತಿಂಗಳ ಹಿಂದೆ ರಾಘುವಿನ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರೂ, ಅಂತ್ಯಕ್ರಿಯೆಗೆ ಆತ ಬಾರದಿದ್ದಾಗ ಸಹೋದರನಿಗೆ ಸಂಶಯ ಬಂದಿದೆ. ಇದೇ ಕಾರಣಕ್ಕೆ ಖಡಕಲಾಟ ಠಾಣೆಗೆ ಹೋಗಿ ಆತ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಜೊತೆಗೆ ಅಣ್ಣನ ಪತ್ನಿ ಬಂಗಾರಿ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದ. ಹೀಗಾಗಿ ಬಂಗಾರಿಯನ್ನ ಕರೆದು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರೋದಾಗಿ ಆಕೆ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಘಟನೆ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.