Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯ

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿ.ಪಂ.ಅಧ್ಯಕ್ಷೆ ಬರೆದಿದ್ದ ಪತ್ರ ಉಡುಪಿ ಪೊಲೀಸರಿಗೆ ಲಭ್ಯವಾಗಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯ
ಆಶಾ ಐಹೊಳೆ
Follow us
TV9 Web
| Updated By: ಆಯೇಷಾ ಬಾನು

Updated on:Apr 21, 2022 | 1:28 PM

ಬೆಳಗಾವಿ: ಜಿಲ್ಲೆಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ಗೆ ದಿನಕ್ಕೊಂದು ತಿರುವು ಸಿಗ್ತಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಳಗಾವಿಯಲ್ಲೇ ಠಿಕಾಣಿ ಹೂಡಿರೋ ಉಡುಪಿ ಪೊಲೀಸ್‌ ತಂಡ, ಏಪ್ರಿಲ್ 20ರಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್‌ನನ್ನ ವಿಚಾರಣೆ ನಡೆಸಿತ್ತು. ಈ ವೇಳೆ ಕೆಲ ದಾಖಲೆ ವಶಪಡಿಸಿಕೊಂಡಿದ್ದು ಈ ಪೈಕಿ ಸಿಕ್ಕಿರೋ ಅದೊಂದು ದಾಖಲೆ ಕೇಸ್‌ಗೆ ತಿರುವು ನೀಡಿದೆ. ಸಂತೋಷ್‌ ಪಾಟೀಲ್‌ಗೆ ಹಣ ನೀಡಿರೋ ನಾಗೇಶ್‌ ಅದಕ್ಕೆ ಪ್ರತಿಯಾಗಿ ಸಂತೋಷ್‌ ಪಾಟೀಲ್‌ನ ಮನೆಯನ್ನ 32 ಲಕ್ಷ ರೂಪಾಯಿಗೆ ಜಿಪಿಎ ಮಾಡಿಕೊಂಡಿದ್ದಾರೆ. ಒಂದ್ಕಡೆ ಮನೆ ಜಿಪಿಎ ಮತ್ತೊಂದ್ಕಡೆ ಕಾಮಗಾರಿಯ ಬಿಲ್‌ ಆಗದೇ ಇರೋದು. ಹೀಗೆ ಒತ್ತದಲ್ಲಿದ್ದ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡನಾ ಅನ್ನೋ ಅನುಮಾನ ಶುರುವಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ನಾಗೇಶ್‌, ಜಿಪಿಎಗೂ ಕಾಮಗಾರಿಗೂ ಯಾವ ಸಂಬಂಧ ಇಲ್ಲ ಅಂತಿದ್ದಾರೆ. ಇನ್ನು ಮತ್ತೊಂದು ಕಡೆ 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಅನುಮೋದನೆಗಾಗಿ ಆದೇಶಿಸಲಾಗಿದೆ ಎನ್ನಲಾದ ಸಹಿ ಪತ್ರ ಲಭ್ಯವಾಗಿದೆ.

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿ.ಪಂ.ಅಧ್ಯಕ್ಷೆ ಬರೆದಿದ್ದ ಪತ್ರ ಪೊಲೀಸರಿಗೆ ಲಭ್ಯವಾಗಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು. 2021ರ ಫೆ.15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಪತ್ರ ಬರೆದಿದ್ದರು. ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು 2022ರ ಫೆಬ್ರವರಿ 26ರಂದು ಸಹಿ ಮಾಡಿರುವ ಲೆಟರ್ ಲಭ್ಯವಾಗಿದೆ. ಮಾ.5ರಂದು ಆದೇಶದ ಪ್ರತಿ ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸೀಲ್ ಹಾಕಲಾಗಿದೆ.

ಇನ್ನು ಹಿಂಡಲಗಾ ಗ್ರಾಮದಲ್ಲಿ ನಡೆದ ಕಾಮಗಾರಿ ಸಂಬಂಧ‌ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗೆ ಪತ್ರ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಜಿ.ಪಂ.ಸಿಇಒ ದರ್ಶನ್ ಹೆಚ್‌.ವಿ. ಹೇಳಿಕೆ ನೀಡಿದ್ದಾರೆ. 2021ರ ಫೆಬ್ರವರಿ 15ರಂದು ಹಿಂದಿನ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಪತ್ರ ಕಳಿಸಿದ್ದಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್ ಸರ್‌ಗೆ ಫಾರ್ವರ್ಡ್ ಮಾಡಿದ್ದಾರೆ. ಆ ಪತ್ರದ ಕೆಳಗೆ 108 ಕಾಮಗಾರಿಗಳ ಪಟ್ಟಿ ಇದೆ. ಅದರಲ್ಲೂ ಸಹ ಅಂದಿನ ಜಿ.ಪಂ.ಅಧ್ಯಕ್ಷರು ಸಹಿ ಮಾಡಿದ್ದಾರೆ. ಆದ್ರೆ ಮೊದಲನೇ ಹಾಗೂ ಕೊನೆಯ ಪುಟದಲ್ಲಿ ಹಸಿರು ಶಾಹಿಯಲ್ಲಿ ಬರೆದಿದ್ದಾರೆ. ಅನುಮೋದಿಸಲಾಗಿದೆ, ಆದೇಶ ಪ್ರತಿ 5-3-2021ರಂದು ಅಂತೆಲ್ಲಾ ಬರೆದಿದ್ದಾರೆ. ಇದು ನನ್ನ ಹಸ್ತಾಕ್ಷರ ಅಲ್ಲ ಅಂತಾ ಹಿಂದಿನ ಜಿ.ಪಂ.ಅಧ್ಯಕ್ಷರು ಹೇಳಿದ್ದಾರೆ. ಯಾವುದಾದರೂ ಕಾಮಗಾರಿಗೆ ಅನುಮೋದನೆ ಕೊಡಬೇಕಾದ್ರೆ ಈ ರೀತಿ ನೋಟ್‌ನಲ್ಲಿ ಬರೆಯಲ್ಲ. ಅದಕ್ಕೊಂದು ಪ್ರೊಸೆಸ್ ಅಂತಾ ಇರುತ್ತೆ, ಫೈಲ್ ನೋಟಿಂಗ್ ಆಗಬೇಕು. ಅದಾದ ಮೇಲೆ ಇಲಾಖೆ ಮುಖ್ಯಸ್ಥರು ಅದಕ್ಕೆ ಅನುಮೋದನೆ ಕೊಡಬೇಕು. ಆ ಒಂದು ಅನುಮೋದನೆ ಪ್ರಕಾರ ಪ್ರತ್ಯೇಕ ಸರ್ಕಾರಿ ಆದೇಶ ಬರುತ್ತೆ. ಇದರಲ್ಲಿ ಅನುಮೋದನೆ ಕೊಡಲು ಅಧಿಕಾರ ಇರೋದು ಹಿಂದಿನ ಪ್ರಧಾನ ಕಾರ್ಯದರ್ಶಿ ಅತಿಕ್‌ ಅವರಿಗೆ ಮಾತ್ರ. ಆದ್ರೆ ಅವರಿಂದ ಅನುಮೋದನೆ ಆಗಿಲ್ಲ, ನನ್ನಿಂದ ಕೂಡ ಅನುಮೋದನೆ ಆಗಿಲ್ಲ. ಯಾರು ಮಾಡಿದ್ದಾರೆ ಅನ್ನೋದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಾಗುತ್ತೆ. ಮೇಲಿನ ಅಧಿಕಾರಿಗಳು ಈ ರೀತಿ ಅನುಮೋದನೆ ಮಾಡೋದಕ್ಕೆ ಬರೋದಿಲ್ಲ. ಮತ್ತು ಈ ಸಹಿ ಕೂಡ ನಮ್ಮ ಜಿಲ್ಲೆಯಿಂದ ಅಥವಾ ಆರ್‌ಡಿಪಿಆರ್ ಆಫೀಸ್‌ನಿಂದ ಮಾಡಿದ್ದಲ್ಲಾ. ಯಾರು ಮಾಡಿದ್ದಾರೆ ಇದು ಫೋರ್ಜರಿ ಅಂತಾ ಕನ್ಸಿಡರ್ ಆಗುತ್ತೋ ಅಥವಾ ಯಾರಾದರೂ ತಿದ್ದಿದ್ದಾರಾ ತನಿಖೆ ಮೂಲಕ ಗೊತ್ತಾಗಬೇಕಾಗುತ್ತೆ ಎಂದು ಬೆಳಗಾವಿಯಲ್ಲಿ ಜಿ.ಪಂ.ಸಿಇಒ ದರ್ಶನ್ ಹೆಚ್‌.ವಿ. ತಿಳಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡಕ್ಕೆ ಡಬ್​ ಮಾಡಲ್ಲ, ಕನ್ನಡಿಗರು ತೆಲುಗಿನಲ್ಲೇ ನೋಡ್ತಾರೆ’; ಟಾಲಿವುಡ್​​ ನಟ ನಾನಿ ಹೇಳಿಕೆಗೆ ಕರುನಾಡು ಗರಂ

Published On - 9:31 am, Thu, 21 April 22