ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ; ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದ ಸಾರ್ವಜನಿಕರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 14, 2023 | 9:41 PM

ಆ ಜಿಲ್ಲೆಯ ಜನ ಉತ್ತಮ ಸೌಕರ್ಯ ಇರುವಂತಹ ಕೈಗಾರಿಕಾ ವಸಾಹತು ನಿರ್ಮಿಸುವಂತೆ ಹಾಗೂ ಇದ್ದ ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಪಡಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಆ ಜಿಲ್ಲೆಯ ಹಲವು ಕಾರ್ಮಿಕರು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದು, ಕೈಗಾರಿಕಾ ವಸಾಹತುಗಳ ನಿರ್ಮಾಣ ಆದರೆ ನಮ್ಮೂರಲ್ಲೇ ದುಡಿದು ಜೀವನ ಸಾಗಿಸಬಹುದು. ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದು ಆಗ್ರಹಿಸುತ್ತಿದ್ದಾರೆ‌. ಅಷ್ಟಕ್ಕೂ ಅಲ್ಲಿರುವ ಸಮಸ್ಯೆ ಏನು ಅಂತೀರಾ? ಇಲ್ಲಿದೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ; ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದ ಸಾರ್ವಜನಿಕರು
ಚಿಕ್ಕೋಡಿ
Follow us on

ಬೆಳಗಾವಿ, ನ.14: ಜಿಲ್ಲೆಯ ಚಿಕ್ಕೋಡಿ(Chikkodi) ಉಪವಿಭಾಗ ಮಹಾರಾಷ್ಟ್ರದ ಗಡಿ ಹಂಚಿಕೊಂಡಿದೆ.‌ ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನ ಅದೆಷ್ಟೋ ನುರಿತ ಕಾರ್ಮಿಕರು, ಕೆಲಸ ಅರಸಿ ಬೆಂಗಳೂರು, ಮಹಾರಾಷ್ಟ್ರದ ಕೊಲ್ಹಾಪುರ, ಮುಂಬೈ, ಪುಣೆ ಸೇರಿದಂತೆ ವಿವಿಧೆಡೆ ಹೋಗುತ್ತಾರೆ. ಅದರಲ್ಲೂ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನ ಅದೆಷ್ಟೋ ಕಾರ್ಮಿಕರು ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಕಾರಿಡಾರ್‌ನಲ್ಲಿ ಇರುವಂತಹ ಕಾರ್ಖಾನೆಗಳಿಗೆ ದುಡಿಯಲು ಹೋಗುತ್ತಾರೆ. ಕೇವಲ ಕಾಗಲ್ ಅಷ್ಟೇ ಅಲ್ಲ ಮಹಾರಾಷ್ಟ್ರದ ವಿವಿಧೆಡೆ ಎಂಐಡಿಸಿ ವತಿಯಿಂದ ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಔದ್ಯೋಗಿಕ ಅಭಿವೃದ್ಧಿಯಾಗಿ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಚಿಕ್ಕೋಡಿ ಉಪವಿಭಾಗದ ಜನ ಆಗ್ರಹಿಸುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿಯ ರೈತರ ಮಕ್ಕಳು ಉದ್ಯೋಗ ಅರಸಿ ಬೇರೆ ಊರುಗಳಿಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆ, ರಾಜ್ಯ ರಾಜಕಾರಣದ ಪವರ್ ಸೆಂಟರ್ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿಯ ರಾಜಕೀಯ ನಾಯಕರು ವೈಯಕ್ತಿಕ ಪ್ರತಿಷ್ಠೆ ಹಾಗೂ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೇಗೆ ಹೆಸರುವಾಸಿನೋ, ಅದೇ ರೀತಿ ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳನ್ನು ಜಾರಿ ಮಾಡಲಿ ಎಂದು ಜನ ಆಗ್ರಹಿಸುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ದೂಧ್‌ಗಂಗಾ, ವೇದಗಂಗಾ, ಕೃಷ್ಣಾ, ಹಿರಣ್ಯಕೇಶಿ, ಘಟಪ್ರಭಾ ಹೀಗೆ ಪಂಚನದಿಗಳು ಹರಿಯುತ್ತವೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾದ್ರೆ ಇಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಇಂತಹ ಸಂದರ್ಭದಲ್ಲಿ ಜನರು ಪರದಾಡುವ ಕಷ್ಟ ಅಷ್ಟಿಷ್ಟಲ್ಲ.

ಇದನ್ನೂ ಓದಿ:ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಭೀಕರ ಬರಗಾಲದಿಂದ ಚಿಕ್ಕೋಡಿ ತಾಲೂಕಿನ ಜನ ತತ್ತರ

ಇನ್ನು ಈ ವರ್ಷ ಭೀಕರ ಬರಗಾಲದಿಂದ ಚಿಕ್ಕೋಡಿ ಭಾಗದ ಆರು ತಾಲೂಕುಗಳ ಜನ ಕಂಗೆಟ್ಟಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಅದೆಷ್ಟೋ ರೈತರು ಕೂಲಿ ಕೆಲಸಕ್ಕೆ ಹೋದರೂ ಸರಿಯಾಗಿ ಸಂಬಳ ಆಗದೇ ಪರದಾಡುವ ಸ್ಥಿತಿ ಇದೆ.‌ ದುಡಿಯುವ ಕೈಗಳಿಗೆ ಕೆಲಸ ನೀಡಬೇಕಿರುವ ಸರ್ಕಾರ ದಿವ್ಯ ಮೌನ ವಹಿಸಿದೆ. ಬರಪೀಡಿತ ತಾಲೂಕು ಘೋಷಣೆ ಮಾಡಿರುವ ಸರ್ಕಾರ ಬರ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸರ್ಕಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಬರಪೀಡಿತ ತಾಲೂಕಿನ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಳ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಆಗ್ರಹಿಸಿದ್ದಾರೆ.

ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ಮಾಡಿದ್ರೆ, ಅಭಿವೃದ್ಧಿ ದೃಷ್ಟಿಯಿಂದ ಅನುಕೂಲ ಆಗುತ್ತದೆ. ಆದ್ರೆ, ಮೂರು ದಶಕಗಳ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಚಿಕ್ಕೋಡಿ ಉಪವಿಭಾಗ ದ ನಿಪ್ಪಾಣಿ ತಾಲೂಕಿನ ಬೋರಗಾಂವ ಬಳಿ ನಿರ್ಮಿಸಿದ ಟೆಕ್ಸ್ಟೈಲ್ ಪಾರ್ಕ್ ಹಾಗೂ ನಿಪ್ಪಾಣಿ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಕೆಐಎಡಿಬಿ ಜಮೀನು ಇದ್ದರೂ ಮೂಲಸೌಕರ್ಯ ಕೊರತೆಯಿಂದ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರುತ್ತಿಲ್ಲ. ಚಿಕ್ಕೋಡಿ ಜಿಲ್ಲೆ ಯಾವಾಗ ಮಾಡ್ತಿರೋ ಗೊತ್ತಿಲ್ಲ ಆದ್ರೆ, ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಿ ಜನರ ಹಿತ ಕಾಪಾಡಲಿ ಎಂಬುದು ಚಿಕ್ಕೋಡಿ ಉಪವಿಭಾಗ ಜನರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ