ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ: ಬೈಲಹೊಂಗಲ ತಾಲೂಕಿನ 3 ಮನೆಗಳು ಕುಸಿತ; 13 ಜನರಿಗೆ ಗಾಯ

| Updated By: ವಿವೇಕ ಬಿರಾದಾರ

Updated on: Jul 22, 2023 | 9:51 AM

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಮೂರು ಮನೆಗಳು ಕುಸಿತವಾಗಿದ್ದು, ಮನೆಯಲ್ಲಿದ್ದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ: ಬೈಲಹೊಂಗಲ ತಾಲೂಕಿನ 3 ಮನೆಗಳು ಕುಸಿತ; 13 ಜನರಿಗೆ ಗಾಯ
ಮನೆ ಕುಸಿತ
Follow us on

ಬೆಳಗಾವಿ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೈಲಹೊಂಗಲ (Bailhongal) ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಮೂರು ಮನೆಗಳು (Home) ಕುಸಿತವಾಗಿದ್ದು, ಮನೆಯಲ್ಲಿದ್ದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓರ್ವ ಅಜ್ಜಿಗೆ ತೀವ್ರ ಗಾಯವಾದ ಹಿನ್ನೆಲೆ ಹುಬ್ಬಳ್ಳಿ (Hubli) ಕಿಮ್ಸ್​ (KIMS)​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈರಯ್ಯ ಪತ್ರಯ್ಯನವರ್, ಶಂಕ್ರಪ್ಪ, ಬಸವಣ್ಣಪ್ಪಗೆ ಸೇರಿದ ಮನೆಯ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದ ಹಿನ್ನೆಲೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬೈಲಹೊಂಗಲ ಎಸಿ, ಇಓ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಜಿಲ್ಲೆಯ ಖಾನಾಪುರ ತಾಲೂಕಿನ ‌ಕಣಕುಂಬಿ ಗ್ರಾಮದಲ್ಲಿ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. 200ಮಿಮೀ, 205ಮಿಮೀ, 235ಮಿಮೀನಷ್ಟು ಮಳೆಯಾಗಿದೆ. ಇದರಿಂದ ಮಲಪ್ರಭಾ ನದಿಯ ಒಳ ಹರಿವು ಹೆಚ್ಚಾಗಿದೆ. ಇನ್ನ ಭಾರಿ ಮಳೆಗೆ ರಸ್ತೆ ಮತ್ತು ಬ್ರಿಡ್ಜ್ ಕೊಚ್ಚಿ ಹೋಗುತ್ತಿವೆ. ಕಣಕುಂಬಿ – ಚಿಗಳೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕುಸಿಯುತ್ತಿದ್ದು, ಚಿಗಳೆ, ಮಾನ್ ಸೇರಿ ಮೂರು ಗ್ರಾಮಗಳ ಸಂಪರ್ಕ ಬಂದ್ ಆಗುವ ಆತಂಕ ಎದುರಾಗಿದೆ.

ವೇದಗಂಗಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಪ್ಪಾಣಿ ತಾಲೂಕಿನ ಅಕ್ಕೋಳ ಸಿದ್ನಾಳ ಸೇತುವೆ ಜಲಾವೃತಗೊಂಡಿದೆ. ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಜನರು ಪರ್ಯಾಯ ಮಾರ್ಗದ ಮೂಲಕ ಓಡಾಡುತ್ತಿದ್ದಾರೆ. ಈ ನಡುವೆ ರೈತರು ವೇದಗಂಗಾ ನದಿಗೆ ಬಾಗಿನ ಅರ್ಪಿಸಿ ನಮಿಸಿದ್ದಾರೆ.

ಇದನ್ನೂ ಓದಿ: Karnataka Weather: ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಮಹಾರಾಷ್ಟ್ರದ ಪಾಟಗಾಂವನಲ್ಲಿ ಸುಮಾರು 290 ಮಿಮೀ ನಷ್ಟು ಮಳೆಯಾಗುತ್ತಿದ್ದರಿಂದ ವೇದಗಂಗಾ ನದಿ ಮೈದುಂಬಿ ಹರಿಯುತ್ತಿದೆ. ಕಳೆದ ತಿಂಗಳವಷ್ಟೇ ಬತ್ತಿದ ವೇದಗಂಗಾಗೆ ನೀರು ಬಂದ ಹಿನ್ನೆಲೆ ನದಿ ಪಾತ್ರದ ಗ್ರಾಮಗಳ ಜನರು ಫುಲ್ ಖುಷ್ ಆಗಿದ್ದಾರೆ. ಗ್ರಾಮಸ್ಥರು ಕಳೆದ ತಿಂಗಳವಷ್ಟೇ ಕುಡಿಯುವ ನೀರಿಗಾಗಿಯೂ ಪರಿತಪಿಸುತ್ತಿದ್ದರು.

ಈ ವೇದಗಂಗಾ ನದಿ ಮುಂದೆ ದೂಧ್‌ಗಂಗಾ ನದಿ ಸೇರಿ ಕೃಷ್ಣೆಯಲ್ಲಿ ಲೀನವಾಗುತ್ತದೆ. ಇದರಿಂದ ಕೃಷ್ಣಾ ನದಿಗೆ ಪ್ರತಿದಿನ 90 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ.

ಅಧಿಕ ಮಳೆ: ಹಿಪ್ಪರಗಿ ಬ್ಯಾರೇಜ್​ಗೆ ಒಳ ಹರಿವು ಹೆಚ್ಚಳ

ಬಾಗಲಕೋಟೆ: ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದ್ದು ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್​​ನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. 6 ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್​ಗೆ ಸದ್ಯ 91,200 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೇ ಕ್ಯೂಸೆಕ್​ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಬಿಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ