ಬೆಳಗಾವಿ: ಪಿಚ್ಡಿ ಗೈಡ್ನಿಂದ ಲೈಂಗಿಕ ಕಿರುಕುಳ, 19ಕ್ಕೂ ಹೆಚ್ಚು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಪಿಚ್ಡಿ ಗೈಡ್ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ದೂರು ನೀಡಿದ್ದನ್ನೇ ಮುಂದಿಟ್ಟುಕೊಂಡು ಪದವಿ ನೀಡದೆ ಸತಾಯಿಸಿದ ಆರೋಪದಲ್ಲಿ, ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಗೈಡ್ ಕೆ.ಎಲ್.ಎನ್. ಮೂರ್ತಿ, ಕುಲಪತಿ ಸಿ.ಎಂ. ತ್ಯಾಗರಾಜ್ ಮತ್ತು ರಿಜಿಸ್ಟರ್ ಸಂತೋಷ ಕಾಮೇಗೌಡ ವಿರುದ್ಧ ಆರೋಪ ಕೇಳಿಬಂದಿದೆ.

ಬೆಳಗಾವಿ, ಡಿಸೆಂಬರ್ 1: ಬೆಳಗಾವಿ (Belagavi) ಜಿಲ್ಲೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ಪಿಎಚ್ಡಿ ಪದವಿ ನೀಡದೆ ಸತಾಯಿಸಿದ್ದರಿಂದ ಬೇಸರಗೊಂಡು ಅವರು ಚಿಕ್ಕೋಡಿ ಪಟ್ಟಣದಲ್ಲಿರುವ ಮನೆಯಲ್ಲಿ 19ಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ತಕ್ಷಣ ಆಕೆಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ಚಿಕಿತ್ಸೆ ನೀಡಲಾಗಿದೆ ಮತ್ತು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿನಿ ಪಿಎಚ್ಡಿ ಪೂರ್ಣಗೊಳಿಸಿ ಆರು ತಿಂಗಳ ಹಿಂದೆ ಸಬ್ಮಿಟ್ ಮಾಡಿದ್ದರು. ಆದರೆ, ವಿನಾ ಕಾರಣ ಪದವಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯ ಗೈಡ್ ಕೆ.ಎಲ್.ಎನ್. ಮೂರ್ತಿ, ಕುಲಪತಿ ಸಿ.ಎಂ. ತ್ಯಾಗರಾಜ್ ಮತ್ತು ರಿಜಿಸ್ಟರ್ ಸಂತೋಷ ಕಾಮೇಗೌಡ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಟಾರ್ಗೆಟ್ ಮಾಡಿರುವ ಆರೋಪಗಳು ಕೇಳಿಬಂದಿವೆ.
ಗೈಡ್ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ದೂರು ನೀಡಿದ್ದ ವಿದ್ಯಾರ್ಥಿನಿ
ಗೈಡ್ ಕೆಎಲ್ಎನ್ ಮೂರ್ತಿ ಲೈಂಗಿಕ ಕಿರುಕುಳ ನೀಡಿದ್ದ ವಿಚಾರವಾಗಿ ಕುಲಪತಿಯವರಿಗೆ ಹಾಗೂ ರಿಜಿಸ್ಟ್ರಾರ್ಗೆ ವಿದ್ಯಾರ್ಥಿನಿ ದೂರು ನೀಡಿದ್ದರು. ನಂತರ ಗೈಡ್ ಸಂಬಂಧಿತ ಸಮಸ್ಯೆ ಬಗೆಹರಿಸಲಾಗಿತ್ತು. ಆದರೂ ತಮ್ಮನ್ನು ಟಾರ್ಗೆಟ್ ಮಾಡಿ ಪಿಎಚ್ಡಿ ನೀಡಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಹೊಡೆದು, ತುಳಿದು ಕೊಂದ ಶಾಲಾ ಸಿಬ್ಬಂದಿ
ಎಲ್ಲ ಸಮಸ್ಯೆ ಪರಿಹರಿಸಿದರೂ ಕೂಡ, ಪಿಎಚ್ಡಿ ಪದವಿ ನೀಡಲಿಲ್ಲ ಎಂಬ ಆರೋಪವನ್ನು ವಿದ್ಯಾರ್ಥಿನಿ ಮಾಡಿದ್ದಾರೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ವಿವಿ ಕುಲಪತಿ ಸಿ.ಎಂ ತ್ಯಾಗರಾಜ ಕೊಟ್ಟ ಸ್ಪಷ್ಟನೆ ಏನು?
ಈ ಮಧ್ಯೆ, ರಾಣಿ ಚನ್ನಮ್ಮ ವಿವಿ ಕುಲಪತಿ ಸಿ.ಎಂ ತ್ಯಾಗರಾಜ ಸುದ್ಧಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಇತಿಹಾಸ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಶೋಧನೆ ನಡೆಸಿ ಪ್ರಬಂಧ ಸಲ್ಲಿಕೆ ಮಾಡಿದ್ದರು. ಭಾನುವಾರ ಸಂಜೆ ವಿದ್ಯಾರ್ಥಿನಿ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿರುವ ವಿಚಾರ ತಿಳಿಯಿತು. 2021ರಲ್ಲಿ ಸಂಶೋಧನೆ ಆರಂಭ ಮಾಡಿ 2025ರಲ್ಲಿ ಆ ವಿದ್ಯಾರ್ಥಿ ಸಂಶೋಧನೆ ಪೂರ್ಣ ಆಗಿದೆ. ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿನಿ ಕಿರುಕುಳ ಆರೋಪ ಮಾಡಿದ್ದರು. ಸಿಂಡಿಕೇಟ್ನಲ್ಲಿ ವಿಚಾರ ಮುಂದಿಟ್ಟು ವರದಿ ನೀಡಲು ಸೂಚಿಸಲಾಗಿತ್ತು. ಆಗ ಪ್ರಾಧ್ಯಾಪಕ ಕೆಎನ್ ಮೂರ್ತಿ ಕಿರುಕುಳ ನೀಡಿದ್ದು ಪ್ರಾಥಮಿಕವಾಗಿ ತಿಳಿದುಬಂದಿತ್ತು. ಅವರ ವಿರುದ್ಧ ಕ್ರಮಕ್ಕೆ ತೀರ್ಮಾನ ಕೈಗೊಂಡಿದ್ದೆವು. ಕೆಲಸದಿಂದ ಅಮಾನತು ಮಾಡಿ ಆದೇಶ ಮಾಡಲಾಗಿತ್ತು. ಇದಾದ ಬಳಿಕ ವಿದ್ಯಾರ್ಥಿನಿ ತಮ್ಮ ದೂರು ವಾಪಾಸ್ ಪಡೆದಿದ್ದಳು. ಇಷ್ಟಾದರೂ ಮತ್ತೊಮ್ಮೆ ಸಿಂಡಿಕೇಟ್ನಲ್ಲಿ ಚರ್ಚೆ ಮಾಡಿ ಪ್ರಮಾಣ ಪತ್ರ ನೀಡಲು ಮುಂದಾಗಿದ್ದೆವು. ತೀರ್ಮಾನ ಆಗದ ಹಿನ್ನೆಲೆ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್ಡಿ ಪದವಿ ನೀಡಲು ಆಗಲಿಲ್ಲ. 4ರಂದು ತುರ್ತು ಸಿಂಡಿಕೇಟ್ ಸಭೆ ಕರೆಯಲಾಗಿದ್ದು ಅದರಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Mon, 1 December 25



