ರಾಜ್ಯೋತ್ಸವ ಹೊತ್ತಲ್ಲೇ ಬಾಲಬಿಚ್ಚಿದ ಎಂಇಎಸ್; ಖಡಕ್​ ಎಚ್ಚರಿಕೆ ಕೊಟ್ಟ ಜಿಲ್ಲಾಧಿಕಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 29, 2023 | 2:34 PM

ರಾಜ್ಯೋತ್ಸವ ಬಂದರೆ ಸಾಕು ನಾಡದ್ರೋಹಿ ಸಂಘಟನೆ ಎಂಇಎಸ್ ಆ್ಯಕ್ಟೀವ್ ಆಗಿ ಬಿಡುತ್ತದೆ. ಕನ್ನಡ ಹಬ್ಬದ ದಿನ ಕರಾಳ ದಿನಾಚರಣೆ ಆಚರಿಸಿ ಪುಂಡಾಟಿಕೆ ಪ್ರದರ್ಶಿಸುವ ಕೆಲಸ ಮಾಡುತ್ತಾರೆ. ಆದರೆ, ಈ ಬಾರಿ ಕರಾಳ ದಿನಾಚರಣೆಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದ ಮೇಲೆಯೂ ಎಂಇಎಸ್ ಪುಂಡರು ಸಭೆ ಸೇರಿ ಕರಾಳ ದಿನಾಚರಣೆ ಮಾಡಲು ನಿರ್ಣಯ ಮಾಡಿದ್ದಾರೆ. ಇದೇ ವೇಳೆ ಉರಿಯುವ ಬೆಂಕಿಗೆ ಮಹಾರಾಷ್ಟ್ರ ಸಿಎಂ ತುಪ್ಪ ಸುರಿದಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯೋತ್ಸವ ಹೊತ್ತಲ್ಲೇ ಬಾಲಬಿಚ್ಚಿದ ಎಂಇಎಸ್; ಖಡಕ್​ ಎಚ್ಚರಿಕೆ ಕೊಟ್ಟ ಜಿಲ್ಲಾಧಿಕಾರಿ
ಬೆಳಗಾವಿಯಲ್ಲಿ ಬಾಲ ಬಿಚ್ಚಿದ ಎಂಇಎಸ್​ ಪುಂಡರು
Follow us on

ಬೆಳಗಾವಿ, ಅ.29: ಕರ್ನಾಟಕ ರಾಜ್ಯೋತ್ಸವ ಬಂದ್ರೆ ಸಾಕು ಬೆಳಗಾವಿ(Belagavi)ಯಲ್ಲಿ ಎಂಇಎಸ್(MES) ಸಂಘಟನೆ ನಾಡದ್ರೋಹಿ ಕೆಲಸಕ್ಕೆ ಸಜ್ಜಾಗಿ ಬಿಡುತ್ತದೆ. ಹೌದು, ಕರಾಳ ದಿನಾಚರಣೆ ಹೆಸರಲ್ಲಿ ಕನ್ನಡಿಗರನ್ನ ಕೆರಳಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಈ ಬಾರಿ ರಾಜ್ಯೋತ್ಸವ ದಿನದಂದೂ ಎಂಇಎಸ್ ನ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಮೊನ್ನೆ ಕನ್ನಡಪರ ಹೋರಾಟಗಾರರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಡಿಸಿ ಅವರು ಕೂಡ ಕರಾಳ ದಿನಾಚರಣೆಗೆ ಈ ಬಾರಿ ಅನುಮತಿ ಇಲ್ಲ, ಅದರಂತೆ ಮಹಾರಾಷ್ಟ್ರ ಭಾಗದಿಂದ ಯಾವ ನಾಯಕರನ್ನೂ ಆ ದಿನ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರುತ್ತೇವೆ ಎಂದು ಹೇಳಿದ್ದರು.

ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ನಿರ್ಧಾರ

ಈ ಎಲ್ಲ ಬೆಳವಣಿಗೆ ಮಧ್ಯೆ ನಿನ್ನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಮಹಾ ಸಿಎಂ ಏಕನಾಥ ಶಿಂಧೆ ಅದೊಂದು ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದ್ರೇ ಇತ್ತ ನಾಡದ್ರೋಹಿಗಳು ಇನ್ನಷ್ಟು ಆ್ಯಕ್ಟೀವ್ ಆಗುವಂತೆ ಮಾಡಿದೆ. ಹೌದು ನಿನ್ನೆ ಮಾಧ್ಯಮದವರು ಮಾಹಾರಾಷ್ಟ್ರ ಸಿಎಂಗೆ, ‘ಕರಾಳ ದಿನಾಚರಣೆಗೆ ಯಾರನ್ನಾದ್ರೂ ಬೆಳಗಾವಿಗೆ ಕಳುಹಿಸುತ್ತೀರಾ ಎಂಬ ಪ್ರಶ್ನೆ ಉತ್ತರಿಸಿದ ಅವರು ‘ಬೆಳಗಾವಿಗೆ ನಮ್ಮ ಪ್ರತಿನಿಧಿ ಹೋಗುತ್ತಾರ ಎಂದು ಹೇಳುವ ಮೂಲಕ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಪ್ರತಿನಿಧಿಯನ್ನ ಕಳುಹಿಸಿಕೊಡುವ ಮಾತನ್ನ ಮಹಾ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಮರಾಠಿಯಲ್ಲಿ ಸಭೆಯ ನೋಟಿಸ್ ನೀಡಿಲ್ಲವೆಂದು ಕ್ಯಾತೆ ತೆಗೆದ ಎಂಇಎಸ್

ಕರಾಳ ದಿನಾಚರಣೆ ಆಚರಿಸಲು ಸಭೆ ಕರೆದ ಎಂಇಎಸ್ ಪುಂಡರು​

ಇನ್ನು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಕರಾಳ ದಿನಾಚರಣೆಗೆ ಪ್ರತಿನಿಧಿ ಕಳುಹಿಸುವುದಾಗಿ ಹೇಳ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೆ ಆಕ್ಟೀವ್ ಆಗಿದ್ದಾರೆ. ಇಂದು ಗೋವಾವೇಸ್ ಸರ್ಕಲ್ ನಲ್ಲಿರುವ ಮರಾಠಾ ಮಂದಿರದಲ್ಲಿ ಸಭೆ ಸೇರಿದ ಎಂಇಎಸ್ ಪುಂಡರು ಕರಾಳ ದಿನಾಚರಣೆಗೆ ನಿರ್ಣಯ ಮಾಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ನಾಯಕರಿಗೂ ಆಹ್ವಾನಕೊಟ್ಟು ಆ ದಿನ ಕರೆಸುವ ತೀರ್ಮಾನ ಕೂಡ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ನಾಳೆ ಭೇಟಿಯಾಗಿ ಕರಾಳ ದಿನಾಚರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಅನುಮತಿ ನೀರಾಕರಿಸಿದ್ರೂ ಕರಾಳ ದಿನಾಚರಣೆ ಮಾಡಲು ತೀರ್ಮಾನಿಸಿದ್ದು, ಅದಕ್ಕೆ ಬೇಕಾದ ಸಿದ್ದತೆಯನ್ನ ಇಂದಿನಿಂದ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಖಡಕ್​ ಎಚ್ಚರಿಕೆ ಕೊಟ್ಟ ಜಿಲ್ಲಾಧಿಕಾರಿ

ಇದು ಕನ್ನಡಪರ ಹೋರಾಟಗಾರರನ್ನ ಕೆರಳಿಸುವಂತೆ ಮಾಡಿದ್ದು, ಶಾಂತವಾಗಿರುವ ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತ ಡಿಸಿ ಮಾತ್ರ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲ್ಲ. ಇದಾಗಿಯೂ ಎಂಇಎಸ್ ಕಾರ್ಯಕರ್ತರು ಕರಾಳ ದಿನಾಚರಣೆಗೆ ಮುಂದಾದ್ರೇ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಸಭೆ ನಡೆಸಿದ ಎಂಇಎಸ್ ಸದಸ್ಯರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತಗಾದೆ ತೆಗೆಯುವ ಹುನ್ನಾರವೇ?

ಒಟ್ಟಿನಲ್ಲಿ ರಾಜ್ಯೋತ್ಸವ ಸಂದರ್ಭದಲ್ಲೇ ನಾಡದ್ರೋಹಿ ಎಂಇಎಸ್ ಪುಂಡಾಟಿಕೆ ಶುರು ಮಾಡುತ್ತೆ. ರಾಜ್ಯದಲ್ಲಿ ಸಂಭ್ರಮ ಇರುವ ದಿನದಂದೂ ಕರಾಳ ದಿನಾಚರಣೆ ಮಾಡುವ ಪುಂಡ ಎಂಇಎಸ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ ಎಂಬುದು ಕನ್ನಡಿಗರ ಆಗ್ರಹವಾಗಿದೆ. ಆದರೆ, ಇದೆಲ್ಲ ಬೆಳವಣಿಗೆ ಮಧ್ಯೆ ಇದೀಗ ಮಹಾ ಸಿಎಂ ಕೂಡ ತುಪ್ಪ ಸುರಿದಿದ್ದು, ಕರಾಳ ದಿನಾಚರಣೆಗೆ ಅದ್ಯಾವ ಪ್ರತಿನಿಧಿಯನ್ನ ಕಳುಹಿಸಿ ಕೊಟ್ಟು ಗಡಿಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ತಿರುಗೇಟು ನೀಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ