ದಿ.ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವ ಪ್ರಲ್ಹಾದ್ ಜೋಶಿ

ಉಮೇಶ್ ಕತ್ತಿಯವರು ನಿಧನರಾದ ದಿನ ಸಚಿವ ಪ್ರಲ್ಹಾದ್ ಜೋಶಿಯವರು ದೆಹಲಿಯಲ್ಲಿದ್ದ ಕಾರಣ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮನೆಗೆ ಭೇಟಿ ನೀಡಿದ್ರು.

ದಿ.ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವ ಪ್ರಲ್ಹಾದ್ ಜೋಶಿ
ಸಚಿವ ಪ್ರಲ್ಹಾದ್ ಜೋಶಿ
Updated By: ಆಯೇಷಾ ಬಾನು

Updated on: Sep 08, 2022 | 10:27 PM

ಬೆಳಗಾವಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರು ಇಂದು ಉಮೇಶ್ ಕತ್ತಿ(Umesh Katti) ಅವರ ಮನೆಗೆ ಭೇಟಿ ನೀಡಿ, ಕತ್ತಿ ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಉಮೇಶ್ ಕತ್ತಿಯವರು ನಿಧನರಾದ ದಿನ ಸಚಿವ ಪ್ರಲ್ಹಾದ್ ಜೋಶಿಯವರು ದೆಹಲಿಯಲ್ಲಿದ್ದ ಕಾರಣ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮನೆಗೆ ಭೇಟಿ ನೀಡಿದ್ರು.

ಇಂದು ದಿ.ಉಮೇಶ್ ಕತ್ತಿಯವರ ಬೆಲ್ಲದ ಬಾಗೇವಾಡಿ ಮನೆಗೆ ಭೇಟಿ ನೀಡಿದ ಪ್ರಲ್ಹಾದ್ ಜೋಶಿ, ಕತ್ತಿಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ವೇಳೆ ದಿವಂಗತ ಉಮೇಶ್ ಕತ್ತಿಯವರ ಕುಟುಂಬಸ್ಥರು, ಬಂಧುಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಜೋಶಿಯವರು ಸಾಂತ್ವಾನ ಹೇಳಿದರು. ರಾಜ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದ ಉಮೇಶ್ ಕತ್ತಿಯವರು 8 ಬಾರಿ ಶಾಸಕರಾದವರು. ಕತ್ತಿಯವರಿಗೆ ಕ್ಷೇತ್ರದ ಜನರಿಂದ ಹೆಚ್ಚಿನ ಬೆಂಬಲವಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಉಮೇಶ್ ಕತ್ತಿಯವರು ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಿದ್ದರು ಎಂದು ಜೋಶಿ ತಮ್ಮ ಹಾಗು ಕತ್ತಿಯವರ ನಡುವಿನ ಆತ್ಮೀಯತೆಯನ್ನ ಅವರ ಬೆಂಬಲಿಗರೊಂದಿಗೆ ಹಂಚಿಕೊಂಡರು.

ಕೇವಲ ಹಳೇ ಮೈಸೂರು ಭಾಗ ಒಂದೇ ಕರ್ನಾಟಕವಲ್ಲ ಎಂದು ಯಾವಾಗಲು ಹೇಳುತ್ತಿದ್ದ ಉಮೇಶ್ ಕತ್ತಿಯವರ ಅಗಲಿಕೆ, ಉತ್ತರ ಕರ್ನಾಟಕ ಭಾಗದ ಒಂದು ಧ್ವನಿಯನ್ನ ಕಳೆದುಕೊಂಡಂತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅಭಿಪ್ರಾಯಪಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:41 pm, Thu, 8 September 22