AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದ ಅಧಿವೇಶನಕ್ಕೆ ಆಡಳಿತ ಪಕ್ಷದ ಶಾಸಕರು, ಸಚಿವರು ಗೈರು: ಗಡಿ ಚರ್ಚೆ ವೇಳೆ ಹಾಜರಾಗದ ಬೆಳಗಾವಿ ಜನಪ್ರತಿನಿಧಿಗಳು

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಶುಕ್ರವಾರದ ಮೊದಲಾರ್ಧ ಅಧಿವೇಶನಕ್ಕೆ ಆಡಳಿತ ಪಕ್ಷದ ಶಾಸಕರೇ ಹೆಚ್ಚು ಗೈರಾಗಿದ್ದರು.

ಚಳಿಗಾಲದ ಅಧಿವೇಶನಕ್ಕೆ ಆಡಳಿತ ಪಕ್ಷದ ಶಾಸಕರು, ಸಚಿವರು ಗೈರು: ಗಡಿ ಚರ್ಚೆ ವೇಳೆ ಹಾಜರಾಗದ ಬೆಳಗಾವಿ ಜನಪ್ರತಿನಿಧಿಗಳು
ಬೆಳಗಾವಿಯ ಚಳಿಗಾಲದ ಅಧಿವೇಶನ
TV9 Web
| Updated By: ವಿವೇಕ ಬಿರಾದಾರ|

Updated on:Dec 23, 2022 | 4:51 PM

Share

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Soudha) ಚಳಿಗಾಲದ ಅಧಿವೇಶನ (Belagavi Winter Session) ಪ್ರಾರಂಭವಾಗಿ 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ರಾಜ್ಯದ ಜನರ ಕಷ್ಟ-ಸುಖಗಳ ಬಗ್ಗೆ ಚರ್ಚಿಸಬೇಕಾದ ಭಾಗಶಃ ನಾಯಕರೇ ಅಧಿವೇಶನಕ್ಕೆ ಇಂದು (ಡಿ.23) ಹಾಜರಾಗಿಲ್ಲ. ಹೌದು ಇಂದಿನ ಅಧಿವೇಶನದ ಮೊದಲಾರ್ಧ ಪೂರ್ಣಗೊಂಡಿದ್ದು, ಅಧಿವೇಶನದಲ್ಲಿ ಆಡಳಿತ ಪಕ್ಷದ ಶಾಸಕರೇ (MLA) ಹೆಚ್ಚು ಗೈರಾಗಿದ್ದರು. ಅಲ್ಲದೇ ಗಡಿ ವಿಚಾರ ಬಗ್ಗೆ ಚರ್ಚೆ ವೇಳೆ ಬೆಳಗಾವಿ ಜಿಲ್ಲೆಯ ಶಾಸಕರೇ ಗೈರಾಗಿದ್ದು ಖೇದದ ಸಂಗತಿ.

ಬೆಳಗಾವಿ ಜಿಲ್ಲೆಯ ಹಾಲಿ 16 ಶಾಸಕರ ಪೈಕಿ 8 ಶಾಸಕರು ಮಾತ್ರ ಚರ್ಚೆ ವೇಳೆ ಸದನಕ್ಕೆ ಹಾಜರಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವೊಲಿಕೆ ಬಳಿಕ ಕೆ. ಎಸ್​ ಈಶ್ವರಪ್ಪ, ಸತೀಶ ಜಾರಕಿಹೊಳಿ ಸದನಕ್ಕೆ ಬಂದಿದ್ದರು. ಅಧಿವೇಶನದ ಮೊದಲಾರ್ಧ ಸದನಕ್ಕೆ ಮಾಜಿ ಹೆಚ್​​.ಡಿ.ಕುಮಾರಸ್ವಾಮಿ ಕೂಡ ಬಂದಿರಲಿಲ್ಲ.

ಇದನ್ನೂ ಓದಿ: ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸುವರ್ಣಸೌಧದ ಬಳಿ ಪ್ರತಿಭಟನೆ

ಜೆಡಿಎಸ್​​​ ಶಾಸಕರ ಪೈಕಿ ಪ್ರತಿ ದಿನ 7 ರಿಂದ 8 ಶಾಸಕರು ಮಾತ್ರ ಹಾಜರಾಗುತ್ತಿದ್ದಾರೆ. ಬಿಜೆಪಿ ಶಾಸಕರ ಪೈಕಿ ಅರ್ಧದಷ್ಟು ಶಾಸಕರು ಮಾತ್ರ ಸದನದಲ್ಲಿದ್ದರು. ಶಾಸಕರಷ್ಟೇ ಅಲ್ಲದೇ ಸಚಿವರು ಕೂಡ ಸದನಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಸಚಿವರ ಕಾರ್ಯವೈಖರಿಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಆಯ್ಕೆ

ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಆಯ್ಕೆಯಾಗಿದ್ದಾರೆ. ಇಂದು (ಡಿಸೆಂಬರ್ 23) ನಡೆದ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್‌ 39 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಅರವಿಂದ್‌ ಅರಳಿ 26 ಮತಗಳನ್ನ ಪಡೆದಿದ್ದಾರೆ.

ಜೆಡಿಎಸ್‌ ಸದಸ್ಯರು ಮತದಾನ ಮಾಡದೆ ತಟಸ್ಥರಾಗಿದ್ದರು. ಕೋಟಾ ಶ್ರೀನಿವಾಸ್ ಪೂಜಾರಿ, ಎಸ್. ರುದ್ರೇಗೌಡ,ತಳವಾರ್ ಸಾಬಣ್ಣ, ಅರುಣ್ ಡಿಎಸ್ ಅವರು ಬಿಜೆಪಿಯಿಂದ ಎಂ.ಕೆ ಪ್ರಾಣೇಶ್ ಹೆಸರು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದರು. ಇನ್ನು ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅರವಿಂದ ಕುಮಾರ್ ಅರಳಿ ಅವರ ಹೆಸರನ್ನು ಬಿ.ಕೆ. ಹರಿಪಸ್ರಾದ್ ಪ್ರಸ್ತಾಪ ಮಾಡಿದರು.

ಪ್ರಾಣೇಶ್ ಪರ ಮತ ಚಲಾಯಿಸುವವರು ಎದ್ದು ನಿಲ್ಲುವಂತೆ ಸೂಚಿಸಿದ್ದು ಪ್ರಾಣೇಶ್ ಪರ 39 ಮತಗಳು ಚಲಾವಣೆಗೊಂಡಿವೆ. ಇನ್ನೂ ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಕೂಡ ಮತ ಚಲಾಯಿಸಿರಲಿಲ್ಲ. ಪ್ರಸ್ತಾವದ ಪರವಾಗಿ 39 ಮತಗಳು ಬಂದಿವೆ. ಪ್ರಸ್ತಾವದ ವಿರೋಧವಾಗಿ 26 ಮತಗಳು ಬಂದವು. ಅಂತಿಮವಾಗಿ ಪ್ರಾಣೇಶ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಬಸವರಾಜ್ ಹೊರಟ್ಟಿ ಘೋಷಣೆ ಮಾಡಿದರು.

ಗುರುವಾರ ಬಿಜೆಪಿ-ಕಾಂಗ್ರೆಸ್‌ ನಾಯಕರು ವಿಧಾನಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀರವರಿಗೆ ನಾಮಪತ್ರವನ್ನ ಸಲ್ಲಿಸಿದ್ದರು. ಸಂಖ್ಯಾಬಲದ ಪ್ರಕಾರ ಬಿಜೆಪಿ 39, ಕಾಂಗ್ರೆಸ್‌ 26, ಜೆಡಿಎಸ್‌ 8 ಹಾಗೂ ಪಕ್ಷೇತರರು 2 ಸದಸ್ಯರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Fri, 23 December 22