ಬೆಳಗಾವಿ: ಕೋರ್ಟ್ ಆದೇಶವಿದ್ದರೂ ನಿವೃತ್ತ ಯೋಧನಿಗೆ ಸರ್ಕಾರಿ ಜಮೀನು ನೀಡಲು ಅಧಿಕಾರಿಗಳ ಹಿಂದೇಟು

| Updated By: Rakesh Nayak Manchi

Updated on: Aug 07, 2023 | 4:36 PM

ಹೈಕೋರ್ಟ್ ಪೀಠದ ಆದೇಶವಿದ್ದರೂ ಬೆಳಗಾವಿಯ ಚಿಂಚಲಿ ಗ್ರಾಮದ ನಿವಾಸಿ ನಿವೃತ್ತ ಯೋಧ ಭರತ್ ಕುರಣಿ ಅವರಿಗೆ ನಿಯಮಾನುಸಾರ ಸರ್ಕಾರಿ ಜಮೀನು ಮಂಜೂರು ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ: ಕೋರ್ಟ್ ಆದೇಶವಿದ್ದರೂ ನಿವೃತ್ತ ಯೋಧನಿಗೆ ಸರ್ಕಾರಿ ಜಮೀನು ನೀಡಲು ಅಧಿಕಾರಿಗಳ ಹಿಂದೇಟು
ಹೈಕೋರ್ಟ್​​ನ ಧಾರವಾಡ ಪೀಠದ ಆದೇಶವಿದ್ದರೂ ಬೆಳಗಾವಿ ಜಿಲ್ಲೆಯ ನಿವೃತ್ತ ಯೋಧ ಭರತ್ ಕುರಣಿ ಅವರಿಗೆ ಜಮೀನಿ ಮಂಜೂರು ಮಾಡದ ಅಧಿಕಾರಿಗಳು
Follow us on

ಚಿಕ್ಕೋಡಿ, ಆಗಸ್ಟ್ 7: ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದ್ದರೂ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಯೋಧ ಭರತ್ ಕುರಣಿ ಅವರಿಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಬೆಳಗಾವಿ ಜಿಲ್ಲಾಡಳಿತ, ರಾಯಬಾಗ ತಹಶೀಲ್ದಾರ್ ವಿರುದ್ಧ ಭರತ್ ಆಕ್ರೋಶ ಹೊರಹಾಕಿದ್ದಾರೆ.

ದೇಶ ಸೇವೆಯಿಂದ ನಿವೃತ್ತಿ ಪಡೆದ ನಂತರ ಸರ್ಕಾರಿ ಜಮೀನಿಗಾಗಿ 2005 ಹಾಗೂ 2013ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿರಲಿಲ್ಲ. 2021ರಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಅರ್ಜಿ ಹಾಕಿ ಕೋರ್ಟ್‌ ಮೊರೆ ಹೋಗಿದ್ದೆ. ಅದರಂತೆ ಹೈಕೋರ್ಟ್​ನ ಧಾರವಾಡ ಪೀಠದಲ್ಲಿ ‌ನನ್ನ ಪರ ಆದೇಶ ಬಂದಿತ್ತು ಎಂದು ಭರತ್ ಕುರಣಿ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕಸ ವಿಲೇವಾರಿ ವಾಹನದಲ್ಲಿ ಆಯುಕ್ತರ ರೌಂಡ್ಸ್, ಪೌರ ಕಾರ್ಮಿಕರು ಸೂಕ್ತ ಸಮಯಕ್ಕೆ ಬಾರದಿದ್ದಕ್ಕೆ ಫುಲ್ ಕ್ಲಾಸ್

ಹೈಕೋರ್ಟ್ ಪೀಠ ಆದೇಶದ ನಂತರವೂ ಅಧಿಕಾರಿಗಳು ಜಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ 2022ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದ್ದೆ. ಆಗ ಜಮೀನು ಕೊಡುವುದಾಗಿ ಅಧಿಕಾರಿಗಳು ನನಗೆ ಹೇಳಿದ್ದರು. ನಂತರ ಆಗಿನ ತಹಶೀಲ್ದಾರ್ ಸ್ಪಂದಿಸದಿದ್ದಾಗ ಮತ್ತೆ ಕೋರ್ಟ್ ಮೊರೆ ಹೋದೆ. ಎರಡು ತಿಂಗಳಲ್ಲಿ ಜಮೀನು ನೀಡಿ 25 ಸಾವಿರ ದಂಡ ನೀಡುವಂತೆ ಫೆಬ್ರವರಿಯಲ್ಲಿ ಕೋರ್ಟ್ ಆದೇಶಿಸಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭರತ್ ಅಸಮಾಧಾನ ಹೊರಹಾಕಿದ್ದಾರೆ.

ಕೋರ್ಟ್ ಆದೇಶದಂತೆ ಜಮೀನು ನೀಡಲಿ ಎಂದು ನಾನು ಮನವಿ ಮಾಡುತ್ತೇನೆ. 27 ವರ್ಷ ಬಿಎಸ್‌ಎಫ್‌ನಲ್ಲಿ ದೇಶದೆಲ್ಲೆಡೆ ಸೇವೆ ಸಲ್ಲಿಸಿ ಬಂದಿದ್ದೇನೆ. ನನಗೆ ನಾಲ್ಕು ಮಂದಿ ಮಕ್ಕಳಿದ್ದಾರೆ, ನನ್ನ ಬಳಿ ಜಮೀನು ಇಲ್ಲ. ಸರ್ಕಾರಿ ಪಡ ಇದ್ದಿದ್ದನ್ನು ಗೈರಾಣು ಜಮೀನು ಮಾಡಿದಾಗ ಕೋರ್ಟ್‌‌ನಲ್ಲಿ ತಕರಾರು ಸಲ್ಲಿಸಿದ್ದೆವು. 2005ರಿಂದ ಜಮೀನಿಗಾಗಿ ಪರದಾಡುತ್ತಿದ್ದು ಈಗ ಇಲ್ಲಿಗೆ ಬಂದು ನಿಂತಿದೆ. ಫೆಬ್ರವರಿ 24 ರಂದೇ ನ್ಯಾಯಾಲಯದಲ್ಲಿ ಆದೇಶವಾಗಿದೆ, ಆದೇಶ ಪ್ರತಿ ತರಲು ನಮಗೂ ತಡವಾಯಿತು. ಕೋರ್ಟ್ ಆದೇಶ ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಭರತ್ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ