ಡಿಸಿಎಂ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ; ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದ ಆರ್​ಟಿಐ ಕಾರ್ಯಕರ್ತ ಹೇಳಿದ್ದೇನು?

ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ.

ಡಿಸಿಎಂ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ; ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದ ಆರ್​ಟಿಐ ಕಾರ್ಯಕರ್ತ ಹೇಳಿದ್ದೇನು?
ಸಾಂದರ್ಭಿಕ ಚಿತ್ರ

Updated on: May 16, 2023 | 3:24 PM

ಬೆಳಗಾವಿ: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ (RTI Activist) ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜತೆಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ.

‘ಭಾರತದ ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಅವಕಾಶ ಇಲ್ಲ. ಸಂವಿಧಾನದ ಅನುಚ್ಛೇದ 163, 164ರಲ್ಲಿ ಎಲ್ಲಿಯೂ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಮಾಹಿತಿ ಹಕ್ಕಿನಡಿ ನಿರಂತರ ಹೋರಾಟ ಮಾಡಿದ್ದೇನೆ. ಇದಕ್ಕೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯವರು ಉತ್ತರ ನೀಡಿದ್ದಾರೆ. ಸಂವಿಧಾನದ ಅನುಚ್ಛೇದ 163 & 164ರಲ್ಲಿ ಎಲ್ಲಿಯೂ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಅದಾಗ್ಯೂ ಹಿಂದಿನ ಸರ್ಕಾರಗಳಲ್ಲಿ ಸಂಪ್ರದಾಯವಾಗಿ ಇದು ನಡೆದು ಬರ್ತಿದೆ ಅಂತಾ ಲಿಖಿತ ಹೇಳಿಕೆ ಕೊಟ್ಟಿದ್ದಾರೆ’ ಎಂದು ವಿಡಿಯೋ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಈ ಕಾರಣದಿಂದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದೇನೆ. ಈ ಸರ್ಕಾರ ಡಾ.ಬಿ.ಆರ್‌.ಅಂಬೇಡ್ಕರ್ ಬರೆದ ಸಂವಿಧಾನ ಪರ ನಡೆಯುತ್ತೋ? ಸಂಪ್ರದಾಯ ಮೇಲೆ ನಡೆಯುತ್ತೋ ಉತ್ತರ ನೀಡಿ ಎಂದು ಪತ್ರ ಬರೆದಿದ್ದೇನೆ. ಸಂವಿಧಾನ ಪ್ರಕಾರ ನಡೆದ್ರೆ ಹೊಸ ಸರ್ಕಾರದಲ್ಲಿ ಡಿಸಿಎಂ ನೇಮಕಕ್ಕೆ ಅವಕಾಶ ನೀಡಬಾರದು. ಅವಕಾಶ ನೀಡಿದಲ್ಲಿ ಇದು ಸಂವಿಧಾನ ವಿರೋಧಿ ಸರ್ಕಾರ, ಸಂವಿಧಾನ ವಿರೋಧಿ ಅಧಿಕಾರಿಗಳು ಎಂದು ಸುಪ್ರೀಂಕೋರ್ಟ್​​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವೆ. ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಇರಲಿ ಸಂವಿಧಾನ, ಕಾನೂನು ಅಡಿ ನಡೆಯಬೇಕು. ಸಂಪ್ರದಾಯ ಪರಂಪರೆ ಮೇಲೆ ನಡೆಯಬಾರದು ಎಂದು ಭೀಮಪ್ಪ ಗಡಾದ್ ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಡಿಸಿಎಂ ಆಯ್ಕೆ ಕಸರತ್ತು; ಕಾಂಗ್ರೆಸ್​ ಮೇಲೆ ಹೆಚ್ಚುತ್ತಿದೆ ಜಾತಿ ಮುಖಂಡರ ಒತ್ತಡ, ಯಾರು ಏನಂದ್ರು?

ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಇದ್ದು, ಇತರ ಹಲವು ಸಮುದಾಯಗಳಿಂದಲೂ ಪ್ರಮುಖ ಹುದ್ದೆಗಳಿಗೆ ಬೇಡಿಕೆ ಇದೆ. ಹೀಗಾಗಿ ಕೆಲವು ಸಮುದಾಯಗಳ ನಾಯಕರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ, ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಎಲ್ಲ ವರದಿಗಳ ಮಧ್ಯೆಯೇ ಭೀಮಪ್ಪ ಗಡಾದ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Tue, 16 May 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us