AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಲ್ಲೇ ಸುರಿಯಬಹುದು ರಾಶಿ ರಾಶಿ ತ್ಯಾಜ್ಯ!

ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್​ಗಟ್ಟಲೆ ಕಸ ಸುರಿಯಲು ತೀರ್ಮಾನಿಸಿದೆ. ಜೊತೆಗೆ ದಂಡವನ್ನೂ ವಿಧಿಸಲಿದೆ.

ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಲ್ಲೇ ಸುರಿಯಬಹುದು ರಾಶಿ ರಾಶಿ ತ್ಯಾಜ್ಯ!
ಸಾಂದರ್ಭಿಕ ಚಿತ್ರ
ಪ್ರಸನ್ನ ಹೆಗಡೆ
|

Updated on:Oct 26, 2025 | 8:31 AM

Share

ಬೆಂಗಳೂರು, ಅಕ್ಟೋಬರ್​ 26: ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದಾರೆ ನಿಮ್ಮ ಮನೆ ಮುಂದೆಯೇ ಇನ್ನು ಲೋಡ್​ಗಟ್ಟಲೆ ಕಸ ಬಂದು ಬೀಳಲಿದೆ. ಹೌದು, ಸಾಕಷ್ಟು ಜನಜಾಗೃತಿ ಬಳಿಕವೂ ಹಲವು ಮಂದಿ ತಮಗೆ ಖುಷಿ ಬಂದಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿರುವ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (GBA) ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿಯುವ ಜೊತೆಗೆ ದಂಡ ವಿಧಿಸಲು ತೀರ್ಮಾನಿಸಿದೆ.

ಕಸ ಎಸೆದು ಹೋಗುವುದನ್ನು ಮೊದಲು ಮಾರ್ಷಲ್​ಗಳು ವಿಡಿಯೋ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತವರ ಮನೆಗಳನ್ನು ಶೀಘ್ರ ಪತ್ತೆಮಾಡಿ ಅವರ ಮನೆ ಮುಂದೆಯೇ ಕಸ ಸುರಿಯಲಾಗುತ್ತೆ. ಇಷ್ಟೇ ಅಲ್ಲ, ಮನೆ ಮುಂದೆ ಸರಿಯಲಾದ ಕಸದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲೂ ತೀರ್ಮಾನಿಸಲಾಗಿದ್ದು, ಆ ಮೂಲಕ ಕಸ ಎಸೆಯುವವರನ್ನು ಜಗಜ್ಜಾಹೀರಗೊಳಿಸಲು ಜಿಬಿಎ ಮುಂದಾಗಿದೆ. ವಿಂಗಡಣೆ ಮಾಡದ ತ್ಯಾಜ್ಯ, ಪ್ಲ್ಯಾಸ್ಟಿಕ್​ ಮತ್ತು ಬಾಕ್ಸ್​ಗಳನ್ನ ಎಸೆದು ಹೋಗುವವರ ವಿಡಿಯೋಗಳನ್ನ ದಾಖಲಿಸುವ ಕೆಲಸ ಈಗಾಗಲೇ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಈ ಬಗ್ಗೆ ಮಾರ್ಷಲ್​ಗಳು ಕಾರ್ಯನಿರತರಾಗಿದ್ದಾರೆ. ಕಸ ಎಸೆದು ಹೋಗುವವರ ಮನೆಗಳನ್ನ ಸ್ಥಳೀಯ ಪೊಲೀಸರ ಜೊತೆಗೆ ಮಾರ್ಷಲ್​ಗಳು ತಲುಪಲಿದ್ದು, ಅವರ ಮನೆ ಬಾಗಿಲಲ್ಲೇ ಕಸದ ಲೋಡ್​ ಅನ್ನು ಹಾಕಲಾಗುತ್ತೆ. ಇದರ ಜೊತೆಗೆ ದಂಡವನ್ನೂ ವಿಧಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಸ್ಲೋಚ್ ಹ್ಯಾಟ್​ಗೆ ಕೊಕ್: ಅ 28ರಿಂದಲೇ ಕರ್ನಾಟಕ ಪೊಲೀಸರ ಕೈಸೇರಲಿವೆ ಹೊಸ ಟೋಪಿ

2-10 ಸಾವಿರ ರೂ.ವರೆಗೆ ದಂಡ

ಮನೆಮುಂದೆ ಸುರಿಯಲಾದ ಕಸವನ್ನ ಕೆಲ ಗಂಟೆಗಳ ಬಳಿಕ ತೆರವು ಮಾಡಲಾಗುತ್ತದೆ. ಆದರೆ 2 ರಿಂದ 10 ಸಾವಿರ ರೂಪಾಯಿಗಳ ವರೆಗಿನ ದಂಡವನ್ನು ಎಲ್ಲೆಂದರಲ್ಲಿ ಕಸ ಹಾಕುವವರು ಪಾವತಿಸಬೇಕು. ಈ ಬಗ್ಗೆ ತಕರಾರು, ವಾದ ಮಾಡುವಂತೆಯೂ ಇಲ್ಲ. ನಾವು ಕಸ ಎಸೆದಿಲ್ಲ ಎಂದರೂ ಮಾರ್ಷಲ್​ ಗಳು ಅದಾಗಲೇ ಸೆರೆ ಹಿಡಿದ ನೀವು ಕಸ ಎಸೆಯುವ ವಿಡಿಯೋ ತೋರಿಸಲಿದ್ದಾರೆ. ಜನ ಜಾಗೃತಿ ಕೆಲಸಗಳ ಮೂಲಕ ನಗರದಲ್ಲಿದ್ದ 869 ಬ್ಲ್ಯಾಕ್​ ಸ್ಪಾಟ್​ಗಳನ್ನ 150ಕ್ಕೆ ಇಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಈಗಾಗಲೇ ಸಫಲವಾಗಿದೆ. ಈ ನಡುವೆ ನಗರವನ್ನು ಸ್ವಚ್ಛವಾಗಿ ಇರಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​ ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಕಸ ಎಸೆಯುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು BSWML ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:20 am, Sun, 26 October 25