ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ: ಕ್ರಿಕೆಟ್ ನೋಡಲು ಹೋಗಿದ್ದ ಯುವತಿ ಶವವಾಗಿ ವಾಪಸ್
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಕ್ರಿಕೆಟ್ ನೋಡಲು ಹೋಗಿದ್ದ ಯುವತಿ ಶವವಾಗಿ ಮನೆಗೆ ಹಿಂದಿರುಗಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಮ್ಯಾಚ್ ನೋಡಿಕೊಂಡು ಸ್ನೇಹಿತೆಯ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮರ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಮತ್ತೊಬ್ಬ ಬೈಕ್ ಸವಾರನಿಗೂ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ.

ಬೆಂಗಳೂರು, ಅಕ್ಟೋಬರ್ 06: ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬೃಹತ್ ಗಾತ್ರದ ಅರಳಿಮರ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ ಸೋಲದೇವನಹಳ್ಳಿ (Soladevanahalli) ಪೋಲಿಸ್ ಠಾಣೆ ಸಮೀಪ ನಡೆದಿದೆ. ಮೃತ ಯುವತಿಯನ್ನ ಹೆಬ್ಬಾಳ ನಿವಾಸಿ ಕೀರ್ತನಾ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಮತ್ತೋರ್ವ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಏನು?
ಕ್ರಿಕೆಟ್ ಪ್ರಿಯೆ ಆಗಿದ್ದ ಕೀರ್ತನಾ, ಖಾಸಗಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ಮ್ಯಾಚ್ ನೋಡಿಕೊಂಡು ಸ್ನೇಹಿತೆಯ ಜೊತೆ ಖುಷಿಯಿಂದ ಮನೆ ಕಡೆ ಹೊರಟಿದ್ದಳು. ಇನ್ನೇನು ಸ್ವಲ್ಪ ದೂರ ಪ್ರಯಾಣಿಸಿದ್ದರೆ ಮನೆಯನ್ನೂ ಸೇರುತ್ತಿದ್ದಳು. ಆದ್ರೆ ವಿಧಿಯಾಟ ಬೇರೆಯದ್ದೇ ಇತ್ತು. ಸೋಲದೇವನಹಳ್ಳಿ ಪೋಲಿಸ್ ಠಾಣೆ ಸಮೀಪ ಬರುತ್ತಿದ್ದಂತೆ ಬೃಹತ್ ಗಾತೃದ ಅರಳಿಮರ ಬಿದ್ದಿದೆ. ಈ ವೇಳೆ ದ್ವಿಚಕ್ರ ವಾಹನದ ಹಿಂಬದಿ ಕೂತಿದ್ದ ಕೀರ್ತನಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಮತ್ತೊಂದು ಬೈಕ್ನಲ್ಲಿದ್ದ ಭಾಸ್ಕರ್ ರಾವ್ ಎಂಬವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಕೀರ್ತನಾ ಭರತನಾಟ್ಯ,ಕಲೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಆಕ್ಟೀವ್ ಆಗಿದ್ದಳಂತೆ. ಬಿ.ಇ ವ್ಯಾಸಂಗ ಮಾಡುತ್ತಿದ್ದು, ಕ್ಲಾಸ್ನಲ್ಲಿ ಕೂಡ ಟಾಪರ್ ಆಗಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಮುಡಾ ಹಗರಣ ಕೇಸಿನಲ್ಲಿ ಮಹತ್ವದ ಬೆಳವಣಿಗೆ: 440 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು
ಈ ಮರದ ಕೆಳಗೆ ಪ್ರತಿದಿನ ಪೋಲಿಸರು ನಿಲ್ಲುತ್ತಿದ್ದರಂತೆ. ಮರ ಬಿದ್ದ ಶಬ್ದ ಕೇಳಿ ಪೊಲೀಸರು ಓಡೋಡಿ ಬಂದಿದ್ದು, ಸ್ಥಳೀಯರ ಜೊತೆ ಗಾಯಾಳು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಮರ ಬಿದ್ದ ಪರಿಣಾಮ ಕರೆಂಟ್ ಲೈನ್ಗಳು ಕಟ್ ಆಗಿದ್ದು, ತಕ್ಷಣ ಬೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೀರ್ತನಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



