ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್
ಗಾಯಕ ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದು ಅಭಿಮಾನಿಗಳಿಗೆ ಬೇಸರ ಆಗಿತ್ತು. ಈಗ ಶ್ರೇಯಾ ಘೋಷಲ್ ಅವರು ಅದೇ ರೀತಿ ಮಾತನಾಡಿ ಫ್ಯಾನ್ಸ್ ಚಿಂತೆಗೆ ಕಾರಣ ಆಗಿದ್ದಾರೆ. ತಮಗೂ ಕೂಡ ವಿರಾಮ ಪಡೆಯಬೇಕು ಎನಿಸುತ್ತಿದೆ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ.

ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಿಂದ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಖ್ಯಾತ ಗಾಯಕ ಅರಿಜಿತ್ ಸಿಂಗ್ (Arijit Singh) ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿರುವ ನಿರ್ಧಾರವನ್ನು ಶ್ರೇಯಾ ಬೆಂಬಲಿಸಿದ್ದಾರೆ. ಅಲ್ಲದೇ, ತಮಗೂ ಅಂತಹ ಆಲೋಚನೆ ಬಂದಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ‘ಎಬಿಪಿ ನ್ಯೂಸ್’ ಜೊತೆ ಮಾತನಾಡಿದ ಶ್ರೇಯಾ ಘೋಷಾಲ್ ಅವರು ಈ ವಿಷಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
‘ಕೆಲವೊಮ್ಮೆ ನನಗೂ ಸಂಗೀತದಿಂದ ವಿರಾಮ ಪಡೆಯಬೇಕು ಅನಿಸುತ್ತದೆ. ನಿರಂತರ ಕೆಲಸದ ನಡುವೆ ವಿಶ್ರಾಂತಿಯ ಅಗತ್ಯವಿರುತ್ತದೆ’ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ‘ಅರಿಜಿತ್ ಸಿಂಗ್ ಅವರು ಅಂತಹ ದೊಡ್ಡ ನಿರ್ಧಾರವನ್ನು ಅತ್ಯಂತ ಧೈರ್ಯದಿಂದ ತೆಗೆದುಕೊಂಡಿದ್ದಾರೆ. ಅವರ ಸಂಗೀತವು ಹೃದಯದಿಂದ ಬರುತ್ತದೆ. ಅವರು ಯಾವುದೋ ಲಾಭಕ್ಕಾಗಿ ಅಥವಾ ಸಾಧನೆಗಾಗಿ ಸಂಗೀತ ಮಾಡುವುದಿಲ್ಲ, ಬದಲಾಗಿ ತಮ್ಮ ಸಂತೋಷಕ್ಕಾಗಿ ಮಾಡುತ್ತಾರೆ. ಅದಕ್ಕಾಗಿಯೇ ಜನರು ಅವರ ಹಾಡುಗಳನ್ನು ಅಷ್ಟೊಂದು ಪ್ರೀತಿಸುತ್ತಾರೆ’ ಎಂದು ಶ್ಲಾಘಿಸಿದ್ದಾರೆ.
ವೇದಿಕೆಯ ಮೇಲೆ ಲಿಪ್-ಸಿಂಕ್ ಮಾಡುವುದರ ಬಗ್ಗೆ ಶ್ರೇಯಾ ಘೋಷಾಲ್ ಅವರು ಖಡಕ್ ಆಗಿ ಮಾತನಾಡಿದ್ದಾರೆ. ‘ವೇದಿಕೆಯ ಮೇಲೆ ಹಾಡುವಾಗ ಲಿಪ್-ಸಿಂಕ್ ಮಾಡುವುದರ ಬಗ್ಗೆ ನನಗೆ ತುಂಬಾ ಅಸಮಾಧಾನ ಇದೆ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ, ನಾನು ಅಂದೇ ಹಾಡುವುದನ್ನು ನಿಲ್ಲಿಸಿಬಿಡುತ್ತೇನೆ’ ಎಂದು ತಮ್ಮ ವೃತ್ತಿಪರತೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಶ್ರೇಯಾ ಘೋಷಾಲ್, ಅವರು ಆ ಸಿನಿಮಾದಲ್ಲಿನ ಗಾಯನಕ್ಕಾಗಿ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದರು. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಯ ಸಿನಿಮಾಗಳ ಹಾಡುಗಳಿಗೆ ಧ್ವನಿ ನೀಡಿ ದೇಶಾದ್ಯಂತ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅವರು ಅರಿಜಿತ್ ಸಿಂಗ್ ರೀತಿ ವಿರಾಮದ ಬಗ್ಗೆ ಮಾತಾಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇದನ್ನೂ ಓದಿ: ‘ಚಿಕ್ನಿ ಚಮೇಲಿ’ ಹಾಡಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ಗಾಯಕಿ ಶ್ರೇಯಾ ಘೋಷಾಲ್
ಅರಿಜಿತ್ ಸಿಂಗ್ ನಿವೃತ್ತಿ: ಜನವರಿ 27ರಂದು ಅರಿಜಿತ್ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಚ್ಚರಿಯ ಪೋಸ್ಟ್ ಒಂದನ್ನು ಹಾಕಿದ್ದರು. ‘ಇನ್ನು ಮುಂದೆ ನಾನು ಯಾವುದೇ ಸಿನಿಮಾಗಳಿಗೆ ಹೊಸದಾಗಿ ಹಾಡುವುದಿಲ್ಲ. ಈ ಸುದೀರ್ಘ ಪಯಣ ಅದ್ಭುತವಾಗಿತ್ತು’ ಎಂದು ಬರೆಯುವ ಮೂಲಕ ಹಿನ್ನೆಲೆ ಗಾಯನಕ್ಕೆ ಗುಡ್ಬೈ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




