ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ; ಸರ್ಕಾರಕ್ಕೆ ಹೆಚ್ಚಿನ ವಿಪಕ್ಷಗಳ ಬೆಂಬಲ; ಬಿಜೆಪಿಯಿಂದ ಸಭಾತ್ಯಾಗ
Tamil Nadu Assembly Passes Resolution Against NEET, BJP Stages Walkout: ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲು ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿದೆ. ಸಿಎಂ ವಿಜಯ್ ನೇತೃತ್ವದ ಸರ್ಕಾರದ ಈ ನಿರ್ಣಯವನ್ನು ಡಿಎಂಕೆ, ಎಡಿಎಂಕೆ, ಪಿಎಂಕೆ ಇತ್ಯಾದಿ ಹೆಚ್ಚಿನ ವಿಪಕ್ಷಗಳು ಬಂಬಲಿಸಿವೆ. ಬಿಜೆಪಿ ಈ ನಿರ್ಣಯ ವಿರೋಧಿಸಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದೆ.

ನವದೆಹಲಿ, ಆಗಸ್ಟ್ 11: ತಮಿಳುನಾಡು ವಿಧಾನಸಭೆಯಲ್ಲಿ ನೀಟ್ (NEET) ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ಸಿಎಂ ವಿಜಯ್ ನೇತೃತ್ವದ ಸರ್ಕಾರವು ಇಂದು ಮಂಗಳವಾರ ಮಹತ್ವದ ನಿರ್ಣಯವನ್ನು ಮಂಡಿಸಿದೆ. ಬಿಜೆಪಿ ಹೊರತುಪಡಿಸಿ ಹೆಚ್ಚಿನ ವಿಪಕ್ಷಗಳು ಸರ್ಕಾರದ ಈ ನಿರ್ಣಯಕ್ಕೆ ಬೆಂಬಲ ನೀಡಿವೆ. ಬಿಜೆಪಿ ಸದಸ್ಯರು ಈ ನಿರ್ಣಯ ವಿರೋದಿಸಿ ಸದನದಿಂದ ಹೊರನಡೆದರು.
ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್’ ತಮಿಳುನಾಡಿನ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರ ವಾದಿಸಿ, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿತು.
ರಾಜ್ಯದ ಹಕ್ಕುಗಳ ಪ್ರತಿಪಾದನೆ: ಶಿಕ್ಷಣವು ರಾಜ್ಯ ಪಟ್ಟಿಯ ವಿಷಯವಾಗಿದ್ದು, ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ಹೇರಿರುವುದು ಫೆಡರಲ್ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದು ಸರ್ಕಾರದ ಮುಖ್ಯ ವಾದ. ತಮಿಳುನಾಡು ತನ್ನದೇ ಆದ ಪ್ರವೇಶ ಪರೀಕ್ಷಾ ವಿಧಾನವನ್ನು ಹೊಂದಲು ಬಯಸುತ್ತಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ
ಬಿಜೆಪಿಯಿಂದ ವಿರೋಧ ಮತ್ತು ಸಭೆತ್ಯಾಗ: ಈ ನಿರ್ಣಯಕ್ಕೆ ತಮಿಳುನಾಡು ಬಿಜೆಪಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿರ್ಣಯವನ್ನು ಮಂಡಿಸಿದ ತಕ್ಷಣ ಬಿಜೆಪಿ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿ, ಸಭಾಧ್ಯಕ್ಷರ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ, ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಿಂದ ವಾಕೌಟ್ ಮಾಡಿದರು.
ಸರ್ಕಾರದ ಸಮರ್ಥನೆ: ವಿರೋಧ ಪಕ್ಷದ ನಾಯಕರು ಈ ನಿರ್ಣಯವನ್ನು ಕೇವಲ ರಾಜಕೀಯ ಪ್ರೇರಿತ ಎಂದು ಟೀಕಿಸಿದರೆ, ಸಿಎಂ ವಿಜಯ್ ಅವರು, “ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ
ರಾಜ್ಯ ಸರ್ಕಾರವು ಮಂಡಿಸಿರುವ ಈ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು. ಅಲ್ಲಿಂದ ಇದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ರವಾನೆಯಾಗಬೇಕಿದೆ. ಈ ಪ್ರಕ್ರಿಯೆಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ನೀಟ್ ವಿರೋಧಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




