ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ
Air India flight incident, technical failure reason: ಕೆಲ ದಿನಗಳ ಹಿಂದೆ ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ದಿಢೀರ್ ಆಗಿ 300 ಅಡಿ ಕೆಳಗೆ ಕುಸಿದ ಘಟನೆ ಸಂಭವಿಸಿತ್ತು. ಪೈಲಟ್ ನಶೆಯಲ್ಲಿದ್ದಿರಬಹುದು, ಅದರಿಂದ ವಿಮಾನ ನಿಯಂತ್ರಣ ತಪ್ಪಿರಬಹುದು ಎನ್ನುವ ಶಂಕೆಗಳಿದ್ದವು. ಆದರೆ, ತನಿಖೆ ವೇಳೆ, ಈ ಘಟನೆಗೆ ತಾಂತ್ರಿಕ ದೋಷಗಳು ಕಾರಣ ಎನ್ನುವುದು ಗೊತ್ತಾಗಿದೆ.

ನವದೆಹಲಿ, ಆಗಸ್ಟ್ 11: ಇತ್ತೀಚೆಗೆ ಫುಕೆಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ (A320 – Flight AI2379) ಆಕಾಶದಲ್ಲೇ ಹೊಯ್ದಾಡಿ 300 ಅಡಿಗಳಷ್ಟು ಕೆಳಗೆ ಕುಸಿದ ಘಟನೆಗೆ ಕಾರಣ ಬೆಳಕಿಗೆ ಬಂದಿದೆ. ಹಲವು ಪ್ರಯಾಣಿಕರು ಮತ್ತು ಸಿಬ್ಬದಿ ಗಾಯಗೊಂಡಿದ್ದ ಈ ಘಟನೆಗೆ ಟ್ರಿಪಲ್ ಹೈಡ್ರಾಲಿಕ್ ವಿಫಲತೆ (Triple Hydraulic Failures) ಮತ್ತು ಅನೇಕ ತಾಂತ್ರಿಕ ದೋಷಗಳು ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಪೈಲಟ್ ಮದ್ಯಸೇವನೆಯಿಂದಲೋ ಅಥವಾ ಮತ್ತೊಂದರಿಂದಲೋ ನಶೆಯಲ್ಲಿದ್ದುದ್ದರಿಂದ ವಿಮಾನ ಭೀಕರವಾಗಿ ಹೊಯ್ದಾಡಿತ್ತು ಎನ್ನುವ ಅನುಮಾನವಿತ್ತು. ಆದರೆ, ತನಿಖೆಯು ಸದ್ಯಕ್ಕೆ ಈ ಅನುಮಾನವನ್ನು ದೂರ ಮಾಡಿದೆ.
ತ್ರಿಪಲ್ ಹೈಡ್ರಾಲಿಕ್ ವೈಫಲ್ಯ ಮತ್ತು ತಾಂತ್ರಿಕ ದೋಷಗಳು
ವಿಮಾನವು ಪ್ರಯಾಣದ ಹಂತದಲ್ಲಿದ್ದಾಗ (Cruising Altitude) ವಿಮಾನದ ಅತ್ಯಂತ ಪ್ರಮುಖ ನಿಯಂತ್ರಣ ವ್ಯವಸ್ಥೆಯಾದ ‘ಹೈಡ್ರಾಲಿಕ್ ಸಿಸ್ಟಮ್’ ಮೂರು ಹಂತಗಳಲ್ಲಿ ವಿಫಲವಾಗಿತ್ತು. ಇದರೊಂದಿಗೆ ಆಟೋ-ಪೈಲಟ್ (Autopilot) ತಾನಾಗಿಯೇ ಡಿಸ್ಕನೆಕ್ಟ್ (Disconnect) ಆಗಿ, ಹಲವು ತಾಂತ್ರಿಕ ಸ್ವಿಚ್ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು.
ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ
ಪೈಲಟ್ ಮದ್ಯಪಾನ ಮಾಡಿರಲಿಲ್ಲ
ಆರಂಭದಲ್ಲಿ ಈ ಘಟನೆಗೆ ಪೈಲಟ್ಗಳ ನಿರ್ಲಕ್ಷ್ಯ ಅಥವಾ ಮದ್ಯಪಾನ/ಮಾದಕ ದ್ರವ್ಯ ಸೇವನೆ ಕಾರಣವಿರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆಯಲ್ಲಿ ಇದು ಪೈಲಟ್ನ ತಪ್ಪು ಅಥವಾ ಮದ್ಯಪಾನದ ಪರಿಣಾಮವಲ್ಲ, ಬದಲಿಗೆ ವಿಮಾನದಲ್ಲಾದ ಸಂಪೂರ್ಣ ಯಾಂತ್ರಿಕ ಮತ್ತು ತಾಂತ್ರಿಕ ವೈಫಲ್ಯ ಎಂದು ಸ್ಪಷ್ಟವಾಗಿದೆ.
ಆಟೋ-ಪೈಲಟ್ ವೈಫಲ್ಯದ ನಂತರ ಮ್ಯಾನುಯಲ್ ನಿಯಂತ್ರಣ
ಆಟೋ-ಪೈಲಟ್ ಸಂಪರ್ಕ ಕಡಿತಗೊಂಡ ತಕ್ಷಣ ಕೋ-ಪೈಲಟ್ ವಿಮಾನವನ್ನು ಮ್ಯಾನುಯಲ್ (Manual Control) ಆಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಆದರೆ ಅದೇ ಸಮಯದಲ್ಲಿ ಗಾಳಿಯ ಒತ್ತಡ/ಟರ್ಬುಲೆನ್ಸ್ (Turbulence) ಮತ್ತು ಹೈಡ್ರಾಲಿಕ್ ವೈಫಲ್ಯದಿಂದಾಗಿ ವಿಮಾನ ಕ್ಷಣಮಾತ್ರದಲ್ಲಿ 300 ಅಡಿ ಕೆಳಕ್ಕೆ ಕುಸಿಯಿತು.
17 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಗಾಯ
ದಿಢೀರ್ ಆಘಾತ ಹಾಗೂ ಕುಸಿತದಿಂದಾಗಿ ವಿಮಾನದಲ್ಲಿದ್ದ ಕನಿಷ್ಠ 17 ಪ್ರಯಾಣಿಕರು ಹಾಗೂ ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.
ಇದನ್ನೂ ಓದಿ: ಅಮೆರಿಕ ಕೋರ್ಟ್ನಿಂದ ಎಲ್ಲಾ ಆರೋಪ ವಜಾ; ಸತ್ಯಕ್ಕೆ ಸಿಕ್ಕ ಜಯ ಎಂದ ಗೌತಮ್ ಅದಾನಿ
ತನಿಖೆ ಕಾಯ್ದುಕೊಂಡ ಆಡಳಿತ ಮಂಡಳಿ
ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಮತ್ತು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ಘಟನೆಯನ್ನು “ಗಂಭೀರ ಘಟನೆ” (Serious Incident) ಎಂದು ಪರಿಗಣಿಸಿ ಸುದೀರ್ಘ ತನಿಖೆ ನಡೆಸುತ್ತಿವೆ.
ಏರ್ಬಸ್ (Airbus) ಕಂಪನಿ ಮತ್ತು ಫ್ರೆಂಚ್ ತನಿಖಾ ತಂಡಗಳು ಕೂಡ ಈ ತಾಂತ್ರಿಕ ದೋಷ ಹೇಗೆ ಸಂಭವಿಸಿತು ಎಂಬುದನ್ನು ಪರಿಶೀಲಿಸಲು ಭಾರತೀಯ ತನಿಖಾಧಿಕಾರಿಗಳಿಗೆ ನೆರವು ನೀಡುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




