
ದೇವನಹಳ್ಳಿ, ಸೆಪ್ಟೆಂಬರ್ 03: ಹೆಬ್ಬಾಳದಿಂದ ಯಲಹಂಕವರೆಗಿನ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್ ಸಂಚಾರ ನಿಷೇಧಿಸಿ ಆದೇಶ ಬೆನ್ನಲ್ಲೇ, ಯುವಕರ ಗುಂಪೊಂದು ನಿಯಮವನ್ನು ತಪ್ಪಾಗಿ ಗ್ರಹಿಸಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಮಧ್ಯರಾತ್ರಿ ಹುಚ್ಚಾಟ ಪ್ರದರ್ಶಿಸಿದೆ. ನೂರಾರು ಬೈಕರ್ಗಳು ಏಕಾಏಕಿ ವಿಮಾನ ನಿಲ್ದಾಣದ ಆವರಣಕ್ಕೆ ನುಗ್ಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಮಧ್ಯರಾತ್ರಿಯ ವೇಳೆ ಏರ್ಪೋರ್ಟ್ ಕಡೆಗೆ ದಂಡುದಂಡಾಗಿ ನುಗ್ಗುತ್ತಿರುವ ಬೈಕ್ ಸವಾರರು, ಪ್ರಯಾಣಿಕರ ಕ್ಯಾಬ್ಗಳ ಮಧ್ಯೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದಾರೆ. ಸೈಲೆನ್ಸರ್ಗಳ ಕಿವಿಗಡಚಿಕ್ಕುವ ಶಬ್ದ, ರಸ್ತೆಯುದ್ದಕ್ಕೂ ಗದ್ದಲ ಎಬ್ಬಿಸುತ್ತಾ ಹುಚ್ಚಾಟ ನಡೆಸಿದ್ದು, ವಿಮಾನ ಹಿಡಿಯಲು ಧಾವಿಸುತ್ತಿದ್ದ ಪ್ರಯಾಣಿಕರು ಹಾಗೂ ಸ್ಥಳೀಯ ಭದ್ರತಾ ಪಡೆಗಳು ಬೆಚ್ಚಿಬೀಳುವಂತಾಗಿದೆ. ಈ ಪುಂಡಾಟಿಕೆಯ ವಿಡಿಯೋಗಳನ್ನು ಕೆಲ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಾಸ್ತವವಾಗಿ ಸಂಚಾರ ಪೊಲೀಸರು ನಿರ್ಬಂಧ ವಿಧಿಸಿರುವುದು ಹೆಬ್ಬಾಳ ಫ್ಲೈಓವರ್ನಿಂದ ಯಲಹಂಕದ ಕೆಫೆ ಕಾಫಿ ಡೇ ವರೆಗಿನ ಮೇಲ್ಸೇತುವೆ ರಸ್ತೆಗೆ ಮಾತ್ರ. ಆದರೆ ಬೈಕ್ ಸವಾರರು ಇಡೀ ಏರ್ಪೋರ್ಟ್ ರಸ್ತೆಗೇ ನಿರ್ಬಂಧ ವಿಧಿಸಲಾಗಿದೆ ಎಂದು ತಪ್ಪಾಗಿ ಭಾವಿಸಿ, ‘ಕೊನೆಯ ಬಾರಿಯ ರೈಡ್’ ಎಂಬ ಹೆಸರಿನಲ್ಲಿ ಈ ರೀತಿ ತಂಡೋಪತಂಡವಾಗಿ ರಸ್ತೆಗಿಳಿದಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ಮಧ್ಯರಾತ್ರಿ ಇವರನ್ನು ತಡೆದು ನಿಲ್ಲಿಸಿದ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿ, ‘ಇದು ಅತ್ಯಂತ ಸೂಕ್ಷ್ಮ ಪ್ರದೇಶ, ಇಲ್ಲಿ ಇಂತಹ ಅಶಿಸ್ತು ಮತ್ತು ಹುಚ್ಚಾಟಕ್ಕೆ ಜಾಗವಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸೆ.1ರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ UDF ಪರಿಷ್ಕರಣೆ: ಹೊರಡುವ,ಬರುವ ಪ್ರಯಾಣಿಕರಿಗೆ ಎಷ್ಟು ಶುಲ್ಕ?
ಇನ್ನು ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ಸವಾರರು ವಿಮಾನ ನಿಲ್ದಾಣ ರಸ್ತೆಗೆ ಆಗಮಿಸುವ ಸಾಧ್ಯತೆಯಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ರಸ್ತೆಯುದ್ದಕ್ಕೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಿಯಮ ಮೀರಿ ಅಪಾಯಕಾರಿಯಾಗಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಪ್ರಕರಣ ದಾಖಲಿಸಲು ಹಾಗೂ ವಾಹನಗಳನ್ನು ಜಪ್ತಿ ಮಾಡಲು ಪೊಲೀಸರು ಸಜ್ಜಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:51 pm, Thu, 3 September 26