ಗಿಡ ಬೆಳೆಸೋ ಭರದಲ್ಲಿ ಬಿಬಿಎಂಪಿ ಎಡವಟ್ಟು; ಬೆಂಗಳೂರಿಗೆ ಕಂಟಕವಾದ ದುಬೈ ಗಿಡ!

| Updated By: ಆಯೇಷಾ ಬಾನು

Updated on: Jun 09, 2024 | 9:14 AM

ರಾಜ್ಯ ರಾಜಧಾನಿಯನ್ನ ಗ್ರೀನ್ ಸಿಟಿ ಮಾಡೋ ಭರದಲ್ಲಿ ಪಾಲಿಕೆ ಹಾಗೂ ಅರಣ್ಯ ಇಲಾಖೆ ಯಡವಟ್ಟು ಮಾಡಿಕೊಂಡಿದೆ. ಬೆಂಗಳೂರಿನ ಪರಿಸರವನ್ನ ಹಸಿರಾಗಿಸಲು ಹೊರಟ ಪಾಲಿಕೆ, ಸಸ್ಯಗಳ ಅರಿವಿಲ್ಲದೇ ಉಸಿರಿಗೆ ಕಂಟಕವಾಗೋ ಗಿಡಗಳನ್ನ ನೆಟ್ಟು ಯಡವಟ್ಟು ಮಾಡಿಕೊಂಡಿದೆ.

ಗಿಡ ಬೆಳೆಸೋ ಭರದಲ್ಲಿ ಬಿಬಿಎಂಪಿ ಎಡವಟ್ಟು; ಬೆಂಗಳೂರಿಗೆ ಕಂಟಕವಾದ ದುಬೈ ಗಿಡ!
ಕೋನೋ ಕಾರ್ಪಸ್ ಗಿಡ
Follow us on

ಬೆಂಗಳೂರು, ಜೂನ್.09: ಸಿಲಿಕಾನ್ ಸಿಟಿಯ ಸೌಂದರ್ಯ ಹೆಚ್ಚಿಸೋ ಜೊತೆಗೆ ಗ್ರೀನ್ ಬೆಂಗಳೂರು ಮಾಡೋಕೆ ಹೊರಟಿರೋ ಬಿಬಿಎಂಪಿ (BBMP), ಗ್ರೀನ್ ಬೆಂಗಳೂರು ಅಡಿಯಲ್ಲಿ ಬೆಂಗಳೂರಿನಾದ್ಯಂತ 90 ಸಾವಿರ ಗಿಡಗಳನ್ನ ಬೆಳೆಸೋಕೆ ಮುಂದಾಗಿದೆ. ಸದ್ಯ ರಸ್ತೆಗಳ ಡಿವೈಡರ್, ಖಾಲಿ ಜಾಗಗಳಲ್ಲಿ ಗಿಡ ನೆಡಲು ಹೊರಟಿರೋ ಪಾಲಿಕೆ, ಇದೀಗ ತನಗರಿವಿಲ್ಲದೇ ಎಡವಟ್ಟು ಮಾಡಿಕೊಂಡಿದೆ. ರಸ್ತೆಬದಿ ಗಿಡಗಳನ್ನ ನೆಟ್ಟು ಪೋಷಿಸ್ತಿರೋ ಪಾಲಿಕೆ, ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗುವ ಕೋನೋ ಕಾರ್ಪಸ್ (Conocarpus) ಅನ್ನೋ ಗಿಡಗಳನ್ನ ರಸ್ತೆಬದಿ ನೆಟ್ಟಿದ್ದು, ಇದರಿಂದ ಪರಿಸರಕ್ಕೆ ಸಂಕಷ್ಟ ಸಮಸ್ಯೆ ಎದುರಾಗುವ ಲಕ್ಷಣಗಳು ಎದ್ದುಕಾಣ್ತಿವೆ.

ಇನ್ನು ಆಕ್ಸಿಜನ್ ಬದಲು ಕಾರ್ಬನ್ ಉತ್ಪಾದಿಸೋ ಈ ಸಸ್ಯಪ್ರಭೇದವನ್ನ ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅಲ್ಲದೇ ಗುಜರಾತ್, ತೆಲಂಗಾಣದಲ್ಲೂ ಈ ಗಿಡಕ್ಕೆ ನಿಷೇಧವಿದೆ, ಆದರೆ ಕೆಂಗೇರಿ ಮುಖ್ಯರಸ್ತೆ, ಯಲಹಂಕ ಸೇರಿದಂತೆ ಹಲವೆಡೆ ರಸ್ತೆಯುದ್ದಕ್ಕೂ ಈ ಗಿಡಗಳನ್ನ ಪಾಲಿಕೆ ನೆಟ್ಟಿದೆ. ಉಸಿರು ನೀಡಬೇಕಿದ್ದ ಹಸಿರೇ ಕುತ್ತು ತರುವಂತೆ ಮಾಡಿದೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹಿಂತಿರುಗಿಸುವಂತೆ ತೆಲಂಗಾಣ ಸಿಎಂಗೆ ಜೆಡಿಎಸ್​ ಪತ್ರ

ದುಬೈ ಗಿಡ ಅಂತಲೂ ಕರೆಯಲ್ಪಡೋ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೇ, ಮನುಷ್ಯರಿಗೆ ಆಸ್ತಮಾ, ಉಸಿರಾಟದ ಸಮಸ್ಯೆಗಳನ್ನ ತಂದಿಡುತ್ತೆ ಅನ್ನೋದು ವರದಿಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನೀರಿನಲ್ಲೇ ಹಚ್ಚ ಹಸಿರಾಗಿ ಕಂಗೊಳಿಸೋ ಈ ಗಿಡ, ನಿರ್ವಹಣೆ ಕೂಡ ಸುಲಭ ಇರೋದ್ರಿಂದ ಪಾಲಿಕೆ, ಅರಣ್ಯ ಇಲಾಖೆ ನರ್ಸರಿಗಳಲ್ಲೂ ಕೂಡ ಸ್ಟಾಕ್ ಇಟ್ಟು ನಾಟಿ ಮಾಡ್ತಿದೆ. ಗಾಳಿಯಲ್ಲಿ ಬೀಜಗಳು ಹರಡಿದ್ರೂ ಕೂಡ ಈ ಗಿಡ ವೇಗವಾಗಿ ಬೆಳೆಯೋ ಶಕ್ತಿ ಹೊಂದಿದ್ದು, ಆದಷ್ಟು ಬೇಗ ಗಿಡಗಳನ್ನ ತೆರವು ಮಾಡಿ ಎಂದು ಪರಿಸರ ಪ್ರೇಮಿಗಳು ಎಚ್ಚರಿಸುತ್ತಿದ್ದಾರೆ.

ಸದ್ಯ ಹಸಿರು ಬೆಂಗಳೂರಿನ ಕನಸನ್ನ ನನಸು ಮಾಡಲು ಹೊರಟಿರೋ ಪಾಲಿಕೆ, ನಗರದ ಹಲವೆಡೆ ಇನ್ನೂ ಹೆಚ್ಚು ಗಿಡಗಳನ್ನ ನೆಡೋಕೆ ಸಜ್ಜಾಗ್ತಿದೆ. ಇತ್ತ ಈಗಾಗಲೇ ಹಲವೆಡೆ ಹರಡಿರೋ ಈ ಡೇಂಜರಸ್ ದುಬೈ ಗಿಡಗಳ ತೆರವಿಗೆ ಪಾಲಿಕೆ ಇನ್ನಾದ್ರೂ ಕ್ರಮವಹಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ