3ನೇ ಬಾರಿ ಪ್ರಧಾನಿ ಆಗ್ತಿರೋ ಮೋದಿಗೆ ಅಭಿನಂದನೆ, ನಮ್ಮ ರಾಜ್ಯಕ್ಕೆ ಅನುಕೂಲವಾಗುವ ಖಾತೆ ಸಿಗಲಿ -ಡಾ.ಜಿ.ಪರಮೇಶ್ವರ್
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಅವರು 3ನೇ ಬಾರಿ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ನಮ್ಮ ರಾಜ್ಯಕ್ಕೆ ಉತ್ತಮ ಖಾತೆ ಸಿಗಲಿ, ಹೆಚ್ಚು ಸ್ಥಾನ ಸಿಗಲಿ ಎಂದು ಆಶಿಸಿದ್ದಾರೆ.
![3ನೇ ಬಾರಿ ಪ್ರಧಾನಿ ಆಗ್ತಿರೋ ಮೋದಿಗೆ ಅಭಿನಂದನೆ, ನಮ್ಮ ರಾಜ್ಯಕ್ಕೆ ಅನುಕೂಲವಾಗುವ ಖಾತೆ ಸಿಗಲಿ -ಡಾ.ಜಿ.ಪರಮೇಶ್ವರ್](https://images.tv9kannada.com/wp-content/uploads/2024/06/g-parameshwara-1.jpg?w=1280)
ಬೆಂಗಳೂರು, ಜೂನ್.09: ನರೇಂದ್ರ ಮೋದಿ (Narendra Modi) ಇಂದು ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗಣ್ಯರು, ಬಿಜೆಪಿ-ಜೆಡಿಎಸ್ ಕಾರ್ಯಕರ್ತರೆಲ್ಲರೂ ದೆಹಲಿಯತ್ತ ಮುಖ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwar) ಅವರು ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಅವರು, ಮೂರನೇ ಬಾರಿಗೆ ಪ್ರಧಾನಿ ಆಗ್ತಿರೋ ಮೋದಿಗೆ ಅಭಿನಂದನೆಗಳು. ಕಳೆದ 10 ವರ್ಷದಲ್ಲಿ ಜನ ಸಮುದಾಯಗಳು ತೊಂದರೆಗೆ ಈಡಾಗಿದ್ದಾರೆ. ಜನರ ದೃಷ್ಟಿಯಿಂದ ಕೆಲಸ ಮಾಡಬೇಕು. ಅದಕ್ಕೆ ವಿರುದ್ದವಾದ ತೀರ್ಮಾನ ಮಾಡಿದ್ದಾರೆ. ಹಿಂದೆ ಏನೆಲ್ಲಾ ತಪ್ಪುಗಳಾಗಿದೆ ಅದನ್ನ ಸರಿಪಡಿಸಿಕೊಳ್ಳಲಿ. ಕರ್ನಾಟಕಕ್ಕೆ ಹೆಚ್ಚು ಸ್ಥಾನ ಸಿಗಲಿ. ಮಂತ್ರಿಗಳು ರಾಜ್ಯದ ಹಿತವನ್ನು ಕಾಪಾಡಲು ವಿಫಲರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಸೇರಿ ಹಲವರು ವಿಫಲರಾಗಿದ್ದಾರೆ. ನಮ್ಮ ರಾಜ್ಯಕ್ಕೆ ಅನುಕೂಲವಾಗುವ ಖಾತೆ ಸಿಗಲಿ ಎಂದು ಡಾ.ಜಿ.ಪರಮೇಶ್ವರ್ ಹಾರೈಸಿದರು.
ರಾಜ್ಯದ ಅಭಿವೃದ್ಧಿ ಸಂಬಂಧ ಬಿಜೆಪಿ ಸಂಸದರು ಯಾರೂ ಧ್ವನಿ ಎತ್ತಿಲ್ಲ
ಕರ್ನಾಟಕದಿಂದ ಬಹಳ ಜನರು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ರಾಜ್ಯಕ್ಕೆ ಹೆಚ್ಚು ಸ್ಥಾನ ನೀಡಲಿ ಎಂದು ಅಪೇಕ್ಷಿಸುತ್ತೇನೆ. ಈವರೆಗೆ ಆದಂತಹ ಮಂತ್ರಿಗಳು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಸಂಬಂಧ ಬಿಜೆಪಿ ಸಂಸದರು ಯಾರೂ ಧ್ವನಿ ಎತ್ತಿಲ್ಲ. ಅನೇಕ ನೀತಿ ರಚಿಸುವಾಗ ಸಮುದಾಯದ ದೃಷ್ಟಿಯಿಂದ ಮಾಡಬೇಕು. ಅನೇಕ ಕಾನೂನು, ತೀರ್ಮಾನಗಳನ್ನ ವಿರುದ್ಧವಾಗಿ ಮೋದಿ ಮಾಡಿದ್ದಾರೆ. ಒಳ್ಳೆಯ ಜನಪರ ಆಡಳಿತ ಕೊಡಲಿ ಎಂಬುವುದು ನಮ್ಮ ನಿರೀಕ್ಷೆ & ಅಪೇಕ್ಷೆ ಎಂದರು.
ಇದನ್ನೂ ಓದಿ: ನನಗೆ ಕೃಷಿ ಖಾತೆ ಸಿಕ್ಕರೆ ರೈತರಿಗಾಗಿ ಕೆಲಸ ಮಾಡುವೆ: ಹೆಚ್ಡಿ ಕುಮಾರಸ್ವಾಮಿ
ಇನ್ನು ಲೋಕಸಭೆ ಫಲಿತಾಂಶದ ಕುರಿತು ಎಐಸಿಸಿ ಕಮಿಟಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪರಮೇಶ್ವರ್, ಅನೇಕ ಸಚಿವರ ಕ್ಷೇತ್ರದಲ್ಲಿ ಕಡಿಮೆ ಲೀಡ್ ಬಂದಿದೆ. ನನ್ನ ಕ್ಷೇತ್ರದಲ್ಲಿ ಕೂಡ ಕಡಿಮೇ ಲೀಡ್ ಬಂದಿದೆ. ಹೀಗಾಗಿ ಎಐಸಿಸಿ ನೇತೃತ್ವದಲ್ಲಿ ಕಮಿಟಿ ರಚನೆಯಾದ್ರೆ ಒಳ್ಳೆಯದು. ಎಲ್ಲಿ ಲೋಪ ಆಯ್ತು ಅಂತ ಮಾಹಿತಿ ಸಂಗ್ರಹವಾಗುತ್ತೆ ಎಂದರು. ಪೊಲೀಸ್ ಅಂತರ್ ಜಿಲ್ಲಾ ವರ್ಗಾವಣೆ ವಿಚಾರಣೆ ಸಂಬಂಧ ಮಾತನಾಡಿದ ಅವರು, ಚುನಾವಣೆ ಬಂತು ನೀತಿ ಸಂಹಿತೆ ಇತ್ತು. ಹೀಗಾಗಿ ಯಾವುದೇ ಕೆಲಸ ಆಗಿಲ್ಲ. ಈಗ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದರು.
ವಾಲ್ಮೀಕಿ ನಿಗಮ ಹಗರಣದಲ್ಲಿ ಸರ್ಕಾರವೇ ಭಾಗಿ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಸಚಿವರು, ಅವರು ಹೇಳ್ತಾ ಇರುತ್ತಾರೆ, ಎಲ್ಲದಕ್ಕೆಲ್ಲ ಹೌದು ಎನ್ನೋಕೆ ಆಗೊಲ್ಲ. ತನಿಖೆ ಪ್ರಾರಂಭ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ. ಬ್ಯಾಂಕಿನಲ್ಲಿ ಫ್ರಾಡ್ ಆಗಿದೆ ಅಂತ ಸಿಬಿಐ ಕೂಡ ಪ್ರವೇಶ ಮಾಡಿದ್ದಾರೆ. ತನಿಖೆ ಆಗಲಿ, ತನಿಖೆಯಲ್ಲಿ ಏನು ಬರುತ್ತೊ ನೋಡೋಣ. ಸಿಬಿಐ ಯಾವಾಗ ಮುಗಿಸುತ್ತೊ ಗೊತ್ತಿಲ್ಲ. ಎಸ್ಐಟಿಯವರಿಗೆ ಶೀಘ್ರವೇ ಮಾಡಿ ಅಂತ ಹೇಳಿದ್ದೇವೆ. ತನಿಖೆ ವಿಚಾರವಾಗಿ ಒತ್ತಾಯ ಮಾಡೋಕೆ ಆಗೊಲ್ಲ. ಇಷ್ಟೇ ದಿನದಲ್ಲಿ ತನಿಖೆ ಮಾಡಿ ಅಂತ ಹೇಳೋಕೆ ಆಗೊಲ್ಲ. ಅವರಿಗೂ ಸಮಯಾವಕಾಶ ಕೊಡಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹಿರಿಯ ನಾಯಕರನ್ನು ಕಡೆಗಣಿಸಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹಿರಿಯ ನಾಯಕರನ್ನು ಕಡೆಗಣಿಸಿಲ್ಲ. ಆ ರೀತಿ ಏನೂ ಇಲ್ಲ, ಸಂದರ್ಭನುಸಾರ ಆ ಮಾತುಗಳನ್ನು ಹೇಳ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಒಳಜಗಳ ಇಲ್ಲ. ಯಾವುದೇ ವಿಚಾರದಲ್ಲಾಗಲಿ ಭಿನ್ನವಾದ ಅಭಿಪ್ರಾಯ ಬರೋದು ಸಹಜ. ನೀವು ಹೇಳಿದ್ದೇ ಕೇಳಬೇಕೆಂದು ಇದ್ಯಾ?, ನನ್ನ ಅಭಿಪ್ರಾಯ ಬೇರೆ ಇರುತ್ತೆ. ಅಂತಹ ಸಂದರ್ಭ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯ ಆಡಳಿತದಲ್ಲಿ ಇಲ್ಲ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ