AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ; ಮೂವರ ಸುಳಿವೇ ಇಲ್ಲ!

ಬೆಂಗಳೂರಿನ ನಿಮ್ಹಾನ್ಸ್ ಮತ್ತು ಕಿದ್ವಾಯಿ ಆಸ್ಪತ್ರೆಗಳಿಂದ ಕಳೆದ 20 ತಿಂಗಳಲ್ಲಿ 55 ರೋಗಿಗಳು ನಾಪತ್ತೆಯಾಗಿದ್ದು, 3 ಮಂದಿ ಇನ್ನೂ ಪತ್ತೆಯಾಗಿಲ್ಲ. ಮಾನಸಿಕ ಅಸ್ವಸ್ಥರು ಮತ್ತು ಕ್ಯಾನ್ಸರ್ ರೋಗಿಗಳು ಆಸ್ಪತ್ರೆ ಆವರಣದಲ್ಲೇ ಕಾಣೆಯಾಗಿರುವುದು ಆತಂಕ ಮೂಡಿಸಿದೆ. ರೋಗಿಗಳ ಸುರಕ್ಷತೆ, ಆರೈಕೆದಾರರ ಜವಾಬ್ದಾರಿ ಹಾಗೂ ಆಸ್ಪತ್ರೆಗಳ ಮೇಲ್ವಿಚಾರಣೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ; ಮೂವರ ಸುಳಿವೇ ಇಲ್ಲ!
ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ
ಭಾವನಾ ಹೆಗಡೆ
|

Updated on: Jan 03, 2026 | 2:15 PM

Share

ಬೆಂಗಳೂರು, ಜನವರಿ 03: ಬೆಂಗಳೂರಿನ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS ) ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗಳಿಂದ ಸಮಾಲೋಚನೆ ಮತ್ತು ಚಿಕಿತ್ಸೆಗೆ ಬಂದಿದ್ದ ಒಟ್ಟು 55 ರೋಗಿಗಳು ನಾಪತ್ತೆಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸುಮಾರು 20 ತಿಂಗಳ ಅವಧಿಯಲ್ಲಿ ಈ ಎಲ್ಲಾ ರೋಗಿಗಳು ನಾಪತ್ತೆಯಾಗಿದ್ದು, ಈ ಪೈಕಿ ಇದುವರೆಗೂ ಮೂವರು ರೋಗಿಗಳ ಸುಳಿವೇ ಸಿಕ್ಕಿಲ್ಲವೆಂಬ ಮಾಹಿತಿ ಬಹಿರಂಗವಾಗಿದೆ.

ಅನಿರೀಕ್ಷಿತ ಸಂದರ್ಭಗಳಲ್ಲಿ ನಾಪತ್ತೆ

2024ರ ಜನವರಿ 1ರಿಂದ 2025ರ ಆಗಸ್ಟ್ 14ರವರೆಗೆ ನಾಪತ್ತೆಯಾದ ಹೆಚ್ಚಿನ ರೋಗಿಗಳು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ರೋಗಿಗಳ ಪೋಷಕರು ಬಿಲ್‌ಗಳನ್ನು ಪಾವತಿಸಲು, ಔಷಧಿ ಖರೀದಿಸಲು, ಫೋನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರರೋಗಿ ವಿಭಾಗದಲ್ಲಿ (OPD) ಇತರರೊಂದಿಗೆ ಅನುಭವ ಹಂಚಿಕೊಳ್ಳುವ ವೇಳೆ ಈ ಘಟನೆಗಳು ನಡೆದಿವೆ ಎಂದು ದಾಖಲೆಗಳು ತಿಳಿಸುತ್ತವೆ.

ಪತ್ತೆಯಾಗದ ಮೂವರು

ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಯ ನಾಪತ್ತೆ ಪ್ರಕರಣಗಳ ದಾಖಲೆ ಪ್ರಕಾರ,

  • ಕಾಡಪ್ಪ ರೋಡನ್ನವರ್ (81) – 23 ಮೇ 2024ರಂದು ನಿಮ್ಹಾನ್ಸ್‌ನಿಂದ ನಾಪತ್ತೆ
  • ಮುನಿಕೃಷ್ಣಪ್ಪ (70) – 6 ನವೆಂಬರ್ 2025ರಂದು ನಾಪತ್ತೆ
  • ಶಾಂತಸ್ವಾಮಿ (52) – 30 ಏಪ್ರಿಲ್ 2025ರಂದು ಕಿದ್ವಾಯಿ ಆಸ್ಪತ್ರೆ ಆವರಣದಿಂದ ನಾಪತ್ತೆ

ಈ ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಮಾನಸಿಕ ಅಸ್ವಸ್ಥರಿಗೆ ಓಡಿಹೋಗುವ ಪ್ರವೃತ್ತಿ

ನಿಮ್ಹಾನ್ಸ್‌ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಚ್.ಆರ್ ಮಾತನಾಡಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೆಲವರಿಗೆ ಓಡಿಹೋಗುವ ಪ್ರವೃತ್ತಿ ಇರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ನಾವು ಅವರನ್ನು ಪತ್ತೆಹಚ್ಚಿ ಕುಟುಂಬಗಳಿಗೆ ಹಿಂತಿರುಗಿಸುತ್ತೇವೆ. ಆಸ್ಪತ್ರೆಯಲ್ಲಿ ನಾಪತ್ತೆಯಾದವರ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಘಟನೆ ವರದಿ ಸಮಿತಿಯಿದೆ ಎಂದರು. ನಾಪತ್ತೆಯಾಗುವವರಲ್ಲಿ ಹೆಚ್ಚಿನವರು ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಸ್ವಸ್ಥತೆಗಳಿಂದ ಬಳಲುತ್ತಿದ್ದು, ಕೆಲವರಿಗೆ ಬುದ್ಧಿಮಾಂದ್ಯತೆ ಇರುವುದೂ ಕಂಡುಬಂದಿದೆ ಎಂದು ತಿಳಿಸಿದರು.

ಸಮವಸ್ತ್ರ ನೀಡಲು ಅವಕಾಶವಿಲ್ಲ

ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ–2017ರ ಪ್ರಕಾರ, ಮಾನಸಿಕ ಅಸ್ವಸ್ಥ ರೋಗಿಗಳನ್ನು ಗುರುತಿಸಲು ಯಾವುದೇ ಸಮವಸ್ತ್ರ ನೀಡುವಂತಿಲ್ಲ ಎಂದು ಡಾ. ಅರವಿಂದ್ ಸ್ಪಷ್ಟಪಡಿಸಿದ್ದಾರೆ. ಈ ಕಾಯ್ದೆಯಂತೆ ಆಸ್ಪತ್ರೆಗಳು ಇನ್ನು ಅಸೈಲಮ್​ಗಳಲ್ಲ. ರೋಗಿಗಳ ಗೌರವ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು. ರೋಗಿಗಳನ್ನು OPDಗೆ ಕರೆತರುವಾಗ ಆರೈಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆವರಣದೊಳಗಿನ ಚಲನವಲನಗಳ ಮೇಲೂ ನಿಗಾ ಇಡುತ್ತಾರೆ ಎಂದರು.

ಕಿದ್ವಾಯಿ ನಿರ್ದೇಶಕರ ಪ್ರತಿಕ್ರಿಯೆ

ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ ಮಾತನಾಡಿ, ನಮ್ಮ ಬಳಿ ಬರುವ ಹೆಚ್ಚಿನ ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಭರವಸೆ ಕಳೆದುಕೊಳ್ಳದಂತೆ ಚಿಕಿತ್ಸೆ ಜೊತೆಗೆ ಮಾನಸಿಕ ಬೆಂಬಲ ನೀಡಲಾಗುತ್ತದೆ. ರೋಗಿಗಳು ಕಾಣೆಯಾಗದಂತೆ ಮತ್ತು ಚಿಕಿತ್ಸೆ ತಪ್ಪಿಸಿಕೊಳ್ಳದಂತೆ ರಾಜ್ಯ ಸರ್ಕಾರ 16 ಜಿಲ್ಲೆಗಳಲ್ಲಿ ಜಿಲ್ಲಾ ಡೇಕೇರ್ ಕಿಮೊಥೆರಪಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.

ಅಪಾಯದಲ್ಲಿರುವ ರೋಗಿಗಳು

ಬೆಂಗಳೂರಿನ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಸೈಕಿಯಾಟ್ರಿಸ್ಟ್ ಡಾ. ಎಚ್. ಚಂದ್ರಶೇಖರ್ ಮಾತನಾಡಿ, ಒಮ್ಮೆ ರೋಗಿಗಳು ಮನೆ ಅಥವಾ ಆಸ್ಪತ್ರೆಯಿಂದ ಕಾಣೆಯಾದರೆ, ಅವರು ದೈಹಿಕ ಮತ್ತು ಮಾನಸಿಕ ಅಪಾಯಕ್ಕೆ ಒಳಗಾಗುತ್ತಾರೆ. ಪುರುಷರು ಹಲ್ಲೆಗೆ ಒಳಗಾಗುವ ಸಾಧ್ಯತೆ ಇದ್ದರೆ, ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯವೂ ಇದೆ. ಅಪರೂಪದ ಸಂದರ್ಭಗಳಲ್ಲಿ ಆರೈಕೆದಾರರೇ ಅವರನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವ ಘಟನೆಗಳೂ ಕಂಡುಬಂದಿವೆ ಎಂದು ಎಚ್ಚರಿಸಿದರು. ಮಾನಸಿಕ ಅಸ್ವಸ್ಥತೆಯ ರೋಗಿಗಳು ಕಾಣೆಯಾಗಲು ಅರಿವಿನ ಕೊರತೆ, ಚಿಕಿತ್ಸೆ ಸೌಲಭ್ಯಗಳ ಅಭಾವ, ಸಾಮಾಜಿಕ ಕಳಂಕ, ಕುಟುಂಬ ಸಮಸ್ಯೆಗಳು ಮತ್ತು ಬಡತನ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.

ನಾಪತ್ತೆಯಾದವರ ಸಂಖ್ಯೆ (ಡೇಟಾ)

2024

  • ನಿಮ್ಹಾನ್ಸ್: 27 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

2025

  • ನಿಮ್ಹಾನ್ಸ್: 22 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

ಪ್ರತಿಷ್ಠಿತ ಆಸ್ಪತ್ರೆಗಳಿಂದಲೇ ರೋಗಿಗಳು ನಾಪತ್ತೆಯಾಗುತ್ತಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮುಜುಗರ ತಂದಿದೆ. ರೋಗಿಗಳ ಸುರಕ್ಷತೆ, ಆರೈಕೆದಾರರ ಜವಾಬ್ದಾರಿ ಮತ್ತು ಸಂಸ್ಥಾತ್ಮಕ ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ