ಹೆಣ್ಣು ಭ್ರೂಣ ಹತ್ಯೆ, ಮಕ್ಕಳ ಸಾಗಾಟ ದಂಧೆ: ಬೆಂಗಳೂರು ಪೊಲೀಸ್​ ಕಮಿಷನರ್​ ಹೇಳಿದ್ದಿಷ್ಟು

ಕಳೆದ ಮೂರು ತಿಂಗಳ ಅವಧಿಯಲ್ಲಿ ಆರೋಪಿಗಳು 342 ಭ್ರೂಣ ಹತ್ಯೆ ಮಾಡಿದ್ದಾರೆ. ಒಂದು ಕೃತ್ಯವೆಸಗಲು 20 ಸಾವಿರದಿಂದ 25 ಸಾವಿರ ಪಡೆಯುತ್ತಿದ್ದರು. ಬಂಧಿತ ವೀರೇಶ್​, ಸಿದ್ದೇಶ್​ ಈ ಹಿಂದೆ ಕಿಡ್ನ್ಯಾಪ್ ಕೇಸ್​ನಲ್ಲಿ ಭಾಗಿಯಾಗಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ​ದಯಾನಂದ್ ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ, ಮಕ್ಕಳ ಸಾಗಾಟ ದಂಧೆ: ಬೆಂಗಳೂರು ಪೊಲೀಸ್​ ಕಮಿಷನರ್​ ಹೇಳಿದ್ದಿಷ್ಟು
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ ದಯಾನಂದ
Follow us
| Updated By: ವಿವೇಕ ಬಿರಾದಾರ

Updated on: Nov 28, 2023 | 12:21 PM

ಬೆಂಗಳೂರು ನ.28: ಹೆಣ್ಣು ಭ್ರೂಣ ಹತ್ಯೆ (Feticide) ಮಾಡುತ್ತಿದ್ದ ಜಾಲವನ್ನು ಬೈಯ್ಯಪ್ಪನಹಳ್ಳಿ ಪೊಲೀಸರು (Police) ಭೇದಿಸಿದ್ದಾರೆ. ಅಕ್ಟೋಬರ್​​ 15ರಂದು ಅನುಮಾನದ ಮೇಲೆ ಪೊಲೀಸರು ವಾಹನ ತಪಾಸಣೆ ಮಾಡಿದ್ದರು. ಬಳಿಕ ವಾಹನ ಚೇಸ್ ಮಾಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣು ಮಗು ಎಂದು ಆರೋಪಿಗಳು ಭ್ರೂಣ ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ವೈದ್ಯರು, ಮೂವರು ಲ್ಯಾಬ್​ ಟೆಕ್ನಿಷಿಯನ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ​ದಯಾನಂದ್​ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಮೂರು ತಿಂಗಳ ಅವಧಿಯಲ್ಲಿ ಆರೋಪಿಗಳು 342 ಭ್ರೂಣ ಹತ್ಯೆ ಮಾಡಿದ್ದಾರೆ. ಒಂದು ಕೃತ್ಯವೆಸಗಲು 20 ಸಾವಿರದಿಂದ 25 ಸಾವಿರ ಪಡೆಯುತ್ತಿದ್ದರು. ಬಂಧಿತ ವೀರೇಶ್​, ಸಿದ್ದೇಶ್​ ಈ ಹಿಂದೆ ಕಿಡ್ನ್ಯಾಪ್ ಕೇಸ್​ನಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.

ಆರ್​.ಆರ್.ನಗರದಲ್ಲಿನ ಹಸುಗೂಸು ಮಾರಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಮಕ್ಕಳ ಮಾರಾಟದ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಿಫ್ಟ್​​ ಕಾರಿನಲ್ಲಿ ಮಗು ಸಾಗಿಸುತ್ತಿದ್ದಾಗ ಸಿಸಿಬಿ ತಂಡ ದಾಳಿ ಮಾಡಿತ್ತು. ಇಪತ್ತು ದಿನದ ಗಂಡು ಮಗುವನ್ನು ರಕ್ಷಣೆ ಮಾಡಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರುತ್ತಿದ್ದರು ಎಂದರು.

8 ರಿಂದ 10 ಲಕ್ಷಕ್ಕೆ ಮಗು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ತಮಿಳುನಾಡಿನ ಆಸ್ಪತ್ರೆಗಳು, ವೈದ್ಯರು ಮತ್ತು ಬೆಂಗಳೂರಿನ ಓರ್ವ ಮಹಿಳೆ ಮಕ್ಕಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಳು. ಹತ್ತಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ. ತಮಿಳುನಾಡಿನ 4 ಆಸ್ಪತ್ರೆಗಳಲ್ಲಿ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು: 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ: 2 ವೈದ್ಯರು ಸೇರಿದಂತೆ 9 ಆರೋಪಿಗಳ ಬಂಧನ

ರಾಕ್​ಲೈನ್ ಸಹೋದರ ಭ್ರಮರೇಶ್ ಮನೆಯಲ್ಲಿ ವಸ್ತುಗಳು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು​ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಂದೂವರೆ ಕೋಟಿ ಮೌಲ್ಯದ ಚಿನ್ನ, ವಾಚ್​, ಬೆಳ್ಳಿ ವಸ್ತುಗಳು ವಶಕ್ಕೆ ಪಡೆದಿದ್ದೇವೆ. ಭ್ರಮರೇಶ್ ಕುಟುಂಬ ಪ್ರವಾಸಕ್ಕೆ ಹೋಗಿದ್ದ ವೇಳೆ ಕಿಟಕಿ ಒಡೆದು ಕಳ್ಳತನ ಮಾಡಲಾಗಿತ್ತು. ದೂರಿನಲ್ಲಿ ಐದು ಕೆಜಿಗೂ ಹೆಚ್ಚು ಚಿನ್ನ ಕಳ್ಳತನವಾಗಿದೆ ಎಂದು ಉಲ್ಲೇಖವಾಗಿದೆ. ಆರೋಪಿಗಳು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದರು.

ಕಾರಿನ ಗಾಜುಗಳನ್ನು ಒಡೆದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ ಹದಿನೆಂಟು ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಗಲೂರು ಠಾಣೆ ಪೊಲೀಸರು ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಐವರ ಗ್ಯಾಂಗ್ ಕೃತ್ಯ ಎಸಗುತ್ತಿತ್ತು. ಆರೋಪಿಗಳು ಒಂಬತ್ತು ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದರು.

ಅನ್ಲೈನ್ ಜಾಬ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಆರ್​ಟಿನಗರ, ಭಾರತಿನಗರ ಮತ್ತು ಕಾವೇರಿನಗರ ನಿವಾಸಿಗಳಾದ ನಾಲ್ವರನ್ನು ಬಂಧಿಸಲಾಗಿದ್ದು, 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳು ಒಟ್ಟು 40 ಕೋಟಿ ರೂ. ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ