ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್

ಬೆಂಗಳೂರಿನ ಬೇಬಿ ಡೇ ಕೇರ್ ಸೆಂಟರ್ ಒಂದರಲ್ಲಿ ಪುಟ್ಟ ಮಕ್ಕಳನ್ನು ವಾಷಿಂಗ್ ಮೆಷಿನ್‌ಗೆ ಹಾಕಿ ಹಿಂಸಿಸುತ್ತಿದ್ದ ಕ್ರೂರತನ ಬಯಲಾದ ಬೆನ್ನಲ್ಲೇ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಡೇ ಕೇರ್ ಸೆಂಟರ್ ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯೊಬ್ಬರನ್ನು ಸಂಸ್ಥೆಯು ಕೆಲಸದಿಂದಲೇ ವಜಾಗೊಳಿಸಿತ್ತು ಎಂಬ ಮಾಹಿತಿ ಬಯಲಾಗಿದೆ.

ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್
ಡೇ ಕೇರ್ ಸೆಂಟರ್​​ನಲ್ಲಿ ಕ್ರೌರ್ಯ
Image Credit source: tv9

Updated on: Jul 02, 2026 | 6:37 PM

ಮುಖ್ಯಾಂಶಗಳು

  • ವಾಷಿಂಗ್ ಮಷಿನ್ ಕ್ರೌರ್ಯದ ವಿರುದ್ಧ ಆಯೋಗ ಆಕ್ರೋಶ
  • ಡೇ ಕೇರ್ ತಪಾಸಣೆಗೆ ವಿಶೇಷ ತಂಡಕ್ಕೆ ಆಗ್ರಹ
  • ಸಿಬ್ಬಂದಿಯ ಪೊಲೀಸ್ ಹಿನ್ನೆಲೆ ಪರಿಶೀಲನೆ ಕಡ್ಡಾಯಕ್ಕೆ ಮನವಿ

ಬೆಂಗಳೂರು, ಜುಲೈ 2: ಬೆಂಗಳೂರಿನ (Bengaluru) ಪ್ರತಿಷ್ಠಿತ ಸಂಸ್ಥೆಯೊಂದರ ಆವರಣದಲ್ಲಿರುವ ಬೇಬಿ ಡೇ ಕೇರ್ ಸೆಂಟರ್ ಒಂದರಲ್ಲಿ ಎರಡು ವರ್ಷದ ಪುಟ್ಟ ಮಕ್ಕಳ ಮೇಲೆ ನಡೆದಿರುವ ಅಮಾನವೀಯ ದೌರ್ಜನ್ಯ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಅಳುವ ಮಕ್ಕಳ ಬಾಯಿ ಮುಚ್ಚಿಸಲು ಅವರನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು, ಬಾತ್‌ರೂಮ್‌ನಲ್ಲಿ ಕೂಡಿಹಾಕಿ ವಿಕೃತ ಆನಂದ ಪಡುತ್ತಿದ್ದ ಕೇರ್‌ಟೇಕರ್‌ಗಳ ಕ್ರೌರ್ಯದ ವಿಡಿಯೋಗಳು ವೈರಲ್ ಆಗಿದ್ದವು. ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮಕ್ಕಳ ಸುರಕ್ಷತೆಗೆ ತುರ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೂರು ನೀಡಿದ್ದ ಸಿಬ್ಬಂದಿ ಕೆಲಸದಿಂದಲೇ ವಜಾ!

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯ ಪ್ರಕಾರ, ಈ ಡೇ ಕೇರ್ ಸೆಂಟರ್‌ನಲ್ಲಿ 50 ರಿಂದ 60 ಮಕ್ಕಳು ದಾಖಲಾಗಿದ್ದರು. ನಿತ್ಯ 15 ರಿಂದ 20 ಮಕ್ಕಳು ಬರುತ್ತಿದ್ದರು. ಇಲ್ಲಿ ದೀರ್ಘಕಾಲದಿಂದಲೂ ಇಂತಹ ದೌರ್ಜನ್ಯ ನಡೆಯುತ್ತಿತ್ತು. ಈ ಹಿಂದೆ ಇಲ್ಲಿನ ಉಸ್ತುವಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯೊಬ್ಬರನ್ನು (ವಿಷಲ್​ಬ್ಲೋವರ್) ಸಂಸ್ಥೆಯು ಕೆಲಸದಿಂದಲೇ ವಜಾಗೊಳಿಸಿ ಸತ್ಯವನ್ನು ಮುಚ್ಚಿಹಾಕಲು ಯತ್ನಿಸಿತ್ತು ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಂದಿದೆ. ಸದ್ಯ ದೂರಿನ ಆಧಾರದ ಮೇಲೆ ಐದು ಮಂದಿ ಕೇರ್‌ಟೇಕರ್‌ಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ಕೇಸ್ ದಾಖಲಾಗಿದ್ದು, ಡೇ ಕೇರ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಸಿಎಂಗೆ ಪತ್ರ ಬರೆದ ಆಯೋಗದ ಅಧ್ಯಕ್ಷರು: ಕಠಿಣ ಮಾರ್ಗಸೂಚಿಗೆ ಆಗ್ರಹ

ಈ ಘಟನೆಯಿಂದ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ‘ಬೆಂಗಳೂರಿನಲ್ಲಿ ಉದ್ಯೋಗಸ್ಥ ಪೋಷಕರು ಹೆಚ್ಚಾಗುತ್ತಿರುವುದರಿಂದ ಡೇ ಕೇರ್ ಸೆಂಟರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದರೂ ಅವು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಮಕ್ಕಳ ಮೇಲಿನ ಮಾನಸಿಕ ಹಿಂಸೆ ಮತ್ತು ನಿರ್ಲಕ್ಷ್ಯವನ್ನು ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

ಮೇಲ್ವಿಚಾರಣೆಗೆ ವಿಶೇಷ ತಂಡದ ರಚನೆಗೆ ಆಗ್ರಹ

ಡೇ ಕೇರ್ ಸೆಂಟರ್‌ಗಳ ಕಾರ್ಯಾಚರಣೆಗೆ ಕಡ್ಡಾಯ ನೋಂದಣಿ, ಪರವಾನಗಿ, ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ತರಬೇತಿ ಮತ್ತು ಕಡ್ಡಾಯ ದೂರು ನಿವಾರಣಾ ವ್ಯವಸ್ಥೆ ಇರಬೇಕು. ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಅವರ ಪೊಲೀಸ್ ಪರಿಶೀಲನೆ (Police Verification) ಮಾಡುವುದನ್ನು ಕಡ್ಡಾಯಗೊಳಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕವಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಬೇಬಿ ಕೇರ್ ಸೆಂಟರ್ ಕ್ರೂರತನ ಬಯಲಿಗೆ

ಇದರೊಂದಿಗೆ ಬೆಂಗಳೂರಿನಾದ್ಯಂತ ಇರುವ ಡೇ ಕೇರ್ ಸೆಂಟರ್‌ಗಳ ನಿಯಮಿತ ಉಸ್ತುವಾರಿ ಮತ್ತು ಸಮಗ್ರ ಮೇಲ್ವಿಚಾರಣೆಗಾಗಿ ತಕ್ಷಣವೇ ಒಂದು ವಿಶೇಷ ತಂಡವನ್ನು ರಚಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us