ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೃತಿಕಾ ಸಹೋದರಿ

ಬೆಂಗಳೂರಿನಲ್ಲಿ ವೈದ್ಯ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಇಂಜೆಕ್ಷನ್ ನೀಡಿ ಕೊಲೆ ಮಾಡಿದ ವಿಚಾರ ಆರು ತಿಂಗಳ ನಂತರ ಬಯಲಾಗಿದ್ದು ಸಂಚಲನ ಸೃಷ್ಟಿಸಿದೆ. ಈ ಕೊಲೆಗೆ ಡಾ. ಕೃತಿಕಾ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು ಕಾರಣ ಎನ್ನಲಾಗಿತ್ತು. ಆದರೆ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅನೈತಿಕ ಸಂಬಂಧ, ಆಸ್ತಿ ಆಸೆಯಿಂದ ಮಹೇಂದ್ರ ಪೂರ್ವನಿಯೋಜಿತ ಕೊಲೆ ಮಾಡಿದ್ದಾನೆ ಎಂದು ಎಂದು ಕೃತಿಕಾ ಸಹೋದರಿ ಆರೋಪಿಸಿದ್ದಾರೆ. ವಿವರಗಳು ಇಲ್ಲಿವೆ.

ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೃತಿಕಾ ಸಹೋದರಿ
ಡಾ. ನಿಖಿತಾ, ಡಾ.ಕೃತಿಕಾ ರೆಡ್ಡಿ ಹಾಗೂ ಮಹೇಂದ್ರ ರೆಡ್ಡಿ

Updated on: Oct 16, 2025 | 7:29 AM

ಬೆಂಗಳೂರು, ಅಕ್ಟೋಬರ್ 16: ವೈದ್ಯ ಡಾ. ಮಹೇಂದ್ರ ರೆಡ್ಡಿ ಎಂಬಾತ ತನ್ನ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ವಿಚಾರ 6 ತಿಂಗಳ ನಂತರ ಬಯಲಾಗಿದ್ದು, ಸದ್ಯ ಆರೋಪಿ ಬೆಂಗಳೂರಿನ (Bengaluru) ಮಾರತಹಳ್ಳಿ ಪೊಲೀಸರ ವಶವಾಗಿದ್ದಾನೆ. ಮೃತ ಡಾ.ಕೃತಿಕಾ ರೆಡ್ಡಿಗೆ ಅನಾರೋಗ್ಯವಿತ್ತು. ಅದನ್ನು ಮುಚ್ಚಿಟ್ಟು ವಿವಾಹ ಮಾಡಿದ ಕಾರಣಕ್ಕೆ ಡಾ. ಮಹೇಂದ್ರ ರೆಡ್ಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ, ಈ ಕೊಲೆ ಪ್ರಕರಣ ಸಂಬಂಧ ಇದೀಗ ಸ್ಟೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಕುರಿತು ಕೃತಿಕಾ ಸಹೋದರಿ ಡಾ. ನಿಖಿತಾ ಅವರು ‘ಟಿವಿ9’ ಜತೆ ಮಾತನಾಡಿದ್ದು, ಅಕ್ಕನ ಸಾವಿಗೆ ಪತಿ ಮಹೇಂದ್ರನೇ ಕಾರಣ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ.

ಡಾ. ಮಹೇಂದ್ರ ರೆಡ್ಡಿಗೆ ಅನೈತಿಕ ಸಂಬಂಧ ಇತ್ತು: ಡಾ. ನಿಖಿತಾ ಆರೋಪ

ಕೃತಿಕಾ ಮೃತಪಟ್ಟ ದಿನವೇ ನಮಗೆ ಅನುಮಾನ ಬಂದಿತ್ತು. ಆಗಲೇ ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ ಮಹೇಂದ್ರ ಪೋಸ್ಟ್‌ಮಾರ್ಟಂ ಬೇಡ ಎಂದು ನಾಟಕ ಮಾಡಿದರು. ನಂತರ ತನಿಖೆಯ ವೇಳೆ ಮಹೇಂದ್ರಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಯಿತು ಎಂದು ನಿಖಿತಾ ಹೇಳಿದ್ದಾರೆ.

‘ಕೃತಿಕಾ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ ಮಹೇಂದ್ರ ಯಾವತ್ತೂ ಬೆಂಬಲ ನೀಡಲಿಲ್ಲ. ಮ್ಯಾರೇಜ್‌ ಸರ್ಟಿಫಿಕೇಟ್ ಮಾಡಿಸಲು ಸಹ ಒಪ್ಪಲಿಲ್ಲ. ಕೃತಿಕಾ ಅಸೌಖ್ಯದಲ್ಲಿದ್ದಾಗಲೂ ಪತಿಯೇ ಡ್ರಿಪ್ ಹಾಕುತ್ತಿದ್ದರು. ಮಹೇಂದ್ರ ನನಗೆ ಅನವಶ್ಯಕ ಚಿಕಿತ್ಸೆ, ಔಷಧ ಕೊಡುತ್ತಿದ್ದಾರೆ ಎಂದು ಆಕೆ ನನ್ನ ಬಳಿ ಹೇಳಿದ್ದಳು’ ಎಂದು ಡಾ. ನಿಖಿತಾ ಹೇಳಿದ್ದಾರೆ.

ಎಫ್​ಎಸ್​​ಎಲ್ ವರದಿಯ ಪ್ರಕಾರ, ಕೃತಿಕಾಗೆ ಪ್ರೊಪೊಫೋಲ್ ಎಂಬ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಗಿದೆ. ಇದು ಹೊರಗಿನಿಂದ ತರಿಸಿರಬಹುದು ಅಥವಾ ಕೆಲಸ ಮಾಡುವ ಸ್ಥಳದಿಂದ ಕೊಂಡಿರಬಹುದು ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಮಾರ್ಟಂ ಬೇಡವೆಂದು ನಾಟಕ ಮಾಡಿದ್ದ ಮಹೇಂದ್ರ

ಪೋಸ್ಟ್‌ಮಾರ್ಟಂ ವೇಳೆ ಮಹೇಂದ್ರ ಅತಿಯಾದ ನಾಟಕ ಮಾಡಿದ್ದ. ಕೃತಿಕಾ ದೇಹವನ್ನು ಕತ್ತರಿಸುವುದನ್ನು ನೋಡಲಾಗದು ಎಂದು ಕಣ್ಣೀರಿಟ್ಟು ದುಃಖ ವ್ಯಕ್ತಪಡಿಸಿದ್ದ. ಆ ಮೂಲಕ ಕೃತಿಕಾ ತಂದೆ-ತಾಯಿ ಎದುರು ಒಳ್ಳೆಯವನೆಂದು ಬಿಂಬಿಸಿದ್ದ ಎಂದು ನಿಖಿತಾ ಹೇಳಿದ್ದಾರೆ. ಆದರೂ ಅನುಮಾನ ಬಂದು ಪೋಸ್ಟ್ ಮಾರ್ಟಂಗೆ ಆಗ್ರಹಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.

ಕೃತಿಕಾಗೆ ಆರೋಗ್ಯ ಸಮಸ್ಯೆಯೇ ಇರಲಿಲ್ಲ: ನಿಖಿತಾ

ಕೃತಿಕಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ನಾನು ಆಕೆಯ ಅಕ್ಕ ಆಗಿರುವುದರಿಂದ ನನಗೆ ಎಲ್ಲಾ ಗೊತ್ತು. ಮಹೇಂದ್ರನನ್ನು ಸ್ವಂತ ಮಗನ ರೀತಿ ನಮ್ಮ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದರು. ನಾವಿಬ್ಬರು ಹೆಣ್ಣು ಮಕ್ಕಳು ಆಗಿರುವುದರಿಂದ ಆತನನ್ನೇ ಮಗ ಎಂದುಕೊಂಡಿದ್ದರು ಎಂದು ನಿಖಿತಾ ತಿಳಿಸಿದ್ದಾರೆ.

ಕ್ಲಿನಿಕ್ ಮಾಡಿಕೊಡುವಂತೆ ಮಹೇಂದ್ರ ಒತ್ತಾಯ ಮಾಡಿದ್ದ. ಮದುವೆ ಆದ ನಂತರ ಹಾಸ್ಪಿಟಲ್ ಮಾಡಿಕೊಡಿ ಎಂದಿದ್ದ. ಅಷ್ಟೆಲ್ಲ ಆಗಲ್ಲಪ್ಪ, ಕ್ಲಿನಿಕ್ ಮಾಡಿಕೊಡುತ್ತೇವೆ ಎಂದು ತಂದೆ ಹೇಳಿದ್ದರು. ಹಾಸ್ಪಿಟಲ್ ಮಾಡಿಕೊಟ್ಟಿಲ್ಲ ಎಂಬುದು ಕೂಡ ಕಾರಣ ಇರಬಹುದು ಎಂದು ನಿಖಿತಾ ಹೇಳಿದ್ದಾರೆ.

ಇದನ್ನೂ ಓದಿ: ಇಂಜೆಕ್ಷನ್​ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್​: 6 ತಿಂಗಳ ಬಳಿಕ ಸತ್ಯ ಬೆಳಕಿಗೆ; ಆರೋಪಿ ಅರೆಸ್ಟ್​

ಕೃತಿಕಾ ಕುಟುಂಬದವರು ಆಕೆಯ ಸಮಾಜ ಸೇವಾ ಕನಸುಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಅವಳು ಬಡ ಜನರಿಗೆ ಉಚಿತ ಮೆಡಿಕಲ್ ಕ್ಯಾಂಪ್ ಮಾಡಲು ಬಯಸುತ್ತಿದ್ದಳು. ದೇಶಕ್ಕೆ ಉಪಕಾರ ಮಾಡಬೇಕೆಂದಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೆ, ತೀವ್ರ ದುಃಖದಿಂದ ಬಳಲುತ್ತಿರುವ ಕುಟುಂಬ, ಕೃತಿಕಾ ವಾಸಿಸುತ್ತಿದ್ದ ಮನೆಯನ್ನು ಇಸ್ಕಾನ್ ದೇವಾಲಯಕ್ಕೆ ದಾನ ಮಾಡಿದೆ. ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us