Bengaluru: ಕೆಎಸ್​ಆರ್ ರೈಲು ನಿಲ್ದಾಣದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಕುಡುಕ ಟಿಸಿ ಅರೆಸ್ಟ್

ಕೆಎಸ್​ಆರ್ ರೈಲು ನಿಲ್ದಾಣದಲ್ಲಿ (KSR Railway Station) ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ರೈಲ್ವೆಯ ಉಪ ಮುಖ್ಯ ಟಿಕೆಟ್ ಪರಿವೀಕ್ಷಕರೊಬ್ಬರನ್ನು (DCTI) ಬಂಧಿಸಲಾಗಿದೆ.

Bengaluru: ಕೆಎಸ್​ಆರ್ ರೈಲು ನಿಲ್ದಾಣದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಕುಡುಕ ಟಿಸಿ ಅರೆಸ್ಟ್
ಆರೋಪಿ ಸಂತೋಷ್ ಕುಮಾರ್ ವಿ

Updated on: Mar 21, 2023 | 3:35 PM

ಬೆಂಗಳೂರು: ನಗರದ ಕೆಎಸ್​ಆರ್ ರೈಲು ನಿಲ್ದಾಣದಲ್ಲಿ (KSR Railway Station) ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ರೈಲ್ವೆಯ ಉಪ ಮುಖ್ಯ ಟಿಕೆಟ್ ಪರಿವೀಕ್ಷಕರೊಬ್ಬರನ್ನು (DCTI) ಬಂಧಿಸಲಾಗಿದೆ. ಆರೋಪಿ ಸಂತೋಷ್ ಕುಮಾರ್ ವಿ ಅವರನ್ನು ಈ ಹಿಂದೆಯೇ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಮಾರ್ಚ್ 14ರಂದು ಸಂತೋಷ್ ಮಹಿಳೆಗೆ ಕಿರುಕುಳ ನೀಡಿದ್ದರು ಎಂದು ಕರ್ನಾಟಕ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಸಂತೋಷ್ ಮಹಿಳೆಗೆ ಕಿರುಕುಳ ನೀಡುತ್ತಿರುವ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮಹಿಳೆಯು ಡಿಸಿಟಿಐ ಜತೆ ನೊಂದು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನೀವ್ಯಾಕೆ ನನ್ನನ್ನು ತಳ್ಳುತ್ತಿದ್ದೀರಿ, ನಿಧಾನವಾಗಿ ಮಾತನಾಡಿ. ಟಿಕೆಟ್ ಕಾಯ್ದಿರಿಸಿದ ಕಾರಣ ನಾನಿಲ್ಲಿಗೆ ಬಂದಿದ್ದೇನೆ ಎಂದು ಮಹಿಳೆ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಟಿಕೇಟ್ ತೋರಿಸು ಅಂತ ಆವಾಗಿನಿಂದಲೂ ಕೇಳುತ್ತಾ ಇದ್ದೇನೆ. ಟಿಕೆಟ್ ಚೆಕ್ ಮಾಡುವುದು ನನ್ನ ಕೆಲಸ. ತೋರಿಸಿ ಹೋಗು ಎಂದು ನಿನಗೇ ಹೇಳುತ್ತಿದ್ದೇನೆ” ಎಂದು ಆರೋಪಿ ಹೇಳುತ್ತಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆ ಪಶ್ಚಿಮ ಬಂಗಾಳದವರಾಗಿದ್ದು ಉದ್ಯೋಗ ಅರಸುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪಶ್ಚಿಮ ಬಂಗಾಳಕ್ಕೆ ತೆರಳುವುದಕ್ಕಾಗಿ ಎಸ್​​ಎಂವಿಟಿ ಬೆಂಗಳೂರು ಹಮ್​ಸಫರ್ ಎಕ್ಸ್​​ಪ್ರೆಸ್​​ ರೈಲಿಗೆ ತೆರಳಿದ್ದಾಗ ಘಟನೆ ನಡೆದಿದೆ.

ಇದನ್ನೂ ಓದಿ: ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ

ಮಹಿಳೆಯು ಬ್ಯಾಗ್​ಗಳೊಂದಿಗೆ ರೈಲು ನಿಲ್ದಾಣಕ್ಕೆ ಬಂದಾಗ ಆರೋಪಿಯು ಟಿಕೆಟ್ ತೋರಿಸುವಂತೆ ಕೇಳಿದ್ದರು. ಆಗ ಮಹಿಳೆಯು ತುಸು ಹೊತ್ತಿನಲ್ಲಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಮದ್ಯ ಕುಡಿದ ಅಮಲಿನಲ್ಲಿದ್ದ ಆರೋಪಿಯು ಆಕೆಗೆ ಕಿರುಕುಳ ನೀಡಿದ್ದಲ್ಲದೆ ತಳ್ಳಿದ್ದಾರೆ. ಪೆನ್​ನಿಂದ ಆಕೆಯ ಮುಖದ ಮೇಲೆ ಮಾರ್ಕ್ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಅಲ್ಲದೇ ಆರೋಪಿಯು ಮಹಿಳೆಯನ್ನು ನಿಂದಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಯಾರೂ ನನ್ನನ್ನು ಏನೂ ಮಾಡಲಾಗದು. ಹೋಗು ಇಲ್ಲಿಂದ ಎಂದು ಧಮಕಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಹಿಳೆ ನೀಡಿದ ದೂರು ಆಧರಿಸಿ ಕರ್ನಾಟಕ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us