
ಬೆಂಗಳೂರು, ಸೆಪ್ಟೆಂಬರ್ 07: ಮಗ ಕಾಣೆಯಾಗಿದ್ದಾನೆ (Missing) ಎಂದು ಸುಳ್ಳು ಕೇಸ್ ಹಾಕಿದ್ದ ತಾಯಿಗೆ ಹೈಕೋರ್ಟ್ (High Court) 2 ಲಕ್ಷ ರೂ. ದಂಡ ವಿಧಿಸಿದೆ. ಎರಡು ವಾರದಲ್ಲಿ ದಂಡ ಕಟ್ಟದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ. ಪೊಲೀಸರ ಮೇಲಿನ ಕೋಪಕ್ಕೆ ಬೆಂಗಳೂರಿನ ಇಂದಿರಾನಗರ ನಿವಾಸಿ ತಾಯಿ ಮಹೇಶ್ವರಿ ಎಂಬುವವರು ಮಗ ಕೃಪಲಾನಿ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ಹಾಕಿದ್ದರು.
ಪಕ್ಕದ ಮನೆಯವರು ರಾತ್ರಿ ಗಲಾಟೆ ಮಾಡುತ್ತಾರೆ, ಗಾಂಜಾ ಮಾರುತ್ತಾರೆಂದು ಕೃಪಲಾನಿ ದೂರು ನೀಡಿದ್ದ. ಈ ಬಗ್ಗೆ ಎನ್ಸಿಆರ್ ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು ತನಿಖೆ ನಡೆಸಿದಾಗ ಸುಳ್ಳು ಕೇಸ್ ಎಂದು ಗೊತ್ತಾಗಿತ್ತು.
ಇದನ್ನೂ ಓದಿ: ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಒಪ್ಪಿಗೆ: 37 KM ಉದ್ದದ ಡಬಲ್ ಡೆಕ್ಕರ್, ಏನಿದು ಪ್ಲಾನ್? ಎಲ್ಲಿಂದ ಎಲ್ಲಿಗೆ?
ನಂತರ ಕೃಪಲಾನಿ ಇನ್ಸ್ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಕೃಪಲಾನಿ ದೂರು ನೀಡಿದ್ದ. ಅಲ್ಲದೇ ಇನ್ಸ್ಪೆಕ್ಟರ್ ಮೇಲಿನ ಸಿಟ್ಟಿಗೆ ತಾಯಿ ಮಹೇಶ್ವರಿಯಿಂದ ನನ್ನ ಮಗ ಕಾಣೆಯಾಗಿದ್ದಾನೆಂದು ಹೈಕೋರ್ಟ್ಗೆ ಹೆಬಿಯಸ್ ಕಾರ್ಪಸ್ ಹಾಕಿಸಿದ್ದ. ಪೊಲೀಸ್ ಠಾಣೆಗೆ ಹೋದವನು ವಾಪಸ್ ಬಂದಿಲ್ಲ ಎಂದು ತಾಯಿ ದೂರಿದ್ದರು.
ಇತ್ತ ಮಗ ಕೃಪಲಾನಿ ದೂರು ನೀಡಿ ಚೆನ್ನೈನ ಮ್ಯಾರಿಯೆಟ್ ಹೋಟೆಲ್ನಲ್ಲಿದ್ದ. ಸಿಡಿಆರ್ ತೆಗೆಸಿದ ಪೊಲೀಸರಿಗೆ ತಾಯಿ ಜೊತೆ ಮಗ ಸಂಪರ್ಕದಲ್ಲಿರೋದು ಪತ್ತೆ ಆಗಿತ್ತು. ಬಳಿಕ ಪೊಲೀಸರು ಚೆನ್ನೈನಿಂದ ಕೃಪಲಾನಿ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಇನ್ಸ್ಪೆಕ್ಟರ್ ಸಿಲುಕಿಸಲು ಸುಳ್ಳು ಕೇಸ್ ಹಾಕಿಸಿದ್ದ ಬಗ್ಗೆ ಪೊಲೀಸರು ದಾಖಲೆ ಸಲ್ಲಿಸಿದ್ದರು.
ಇದನ್ನೂ ಓದಿ: ಕಸ ವಿಲೇವಾರಿ ಮರು ಟೆಂಡರ್ಗೆ ಹೈಕೋರ್ಟ್ ತಡೆಯಾಜ್ಞೆ, ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್
ಹೀಗಾಗಿ ದೂರು ನೀಡಿದ್ದ ಮಹೇಶ್ವರಿಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. 2 ಲಕ್ಷ ರೂ ಪೈಕಿ 1 ಲಕ್ಷ ರೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ 1 ಲಕ್ಷ ರೂ ಪೊಲೀಸ್ ಕಲ್ಯಾಣ ನಿಧಿಗೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.